ಮತಾಂತರ ನಿಷೇಧ ಕಾಯ್ದೆಗೆ ಜೆಡಿಎಸ್ ಬೆಂಬಲ ಇಲ್ಲ: ಎಚ್.ಡಿ.ಕುಮಾರಸ್ವಾಮಿ
ನವದೆಹಲಿ: ರಾಜ್ಯದ ಬಿಜೆಪಿ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಗೆ ಜೆಡಿಎಸ್ ಪಕ್ಷ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಇದು ಅಗತ್ಯವಿಲ್ಲದ ವಿಷಯ ಎಂದು ಪಕ್ಷದ ಶಾಸಕಾಂಗ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ಕರೆದಿರುವುದು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿಕ್ಕೆ. ಅಗತ್ಯವಿಲ್ಲದ ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಅಲ್ಲ ಎಂದರು.
ಈ ಕಾಯ್ದೆಯನ್ನು ನಮ್ಮ ಪಕ್ಷ ಸ್ಪಷ್ಟವಾಗಿ ವಿರೋಧಿಸುತ್ತದೆ ಹಾಗೂ ಕಲಾಪದಲ್ಲಿ ಭಾಗಿಯಾಗುವ ನಮ್ಮ ಎಲ್ಲ ಶಾಸಕರು ಕೂಡ ಇದನ್ನು ಖಡಾತುಂಡವಾಗಿ ವಿರೋಧ ಮಾಡುತ್ತಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
40%; ಎಲ್ಲರೂ ಗಾಜಿನ ಮನೆಯಲ್ಲಿ ಇದ್ದಾರೆ:
ಬಿಟ್ ಕಾಯಿನ್ ಹಗರಣ ಹಾಗೂ ಗುತ್ತಿಗೆದಾರರಿಂದ 40% ಕಮಿಷನ್ ವಸೂಲಿ ಮಾಡುವ ಬಗ್ಗೆ ಜೆಡಿಎಸ್ ಮಾತನಾಡುತ್ತಿಲ್ಲ ಎನ್ನುವ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅವರು, ಗುತ್ತಿಗೆದಾರ ಸಂಘದ ಒಬ್ಬರು ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರ ಇಟ್ಟುಕೊಂಡು ಕಾಂಗ್ರೆಸ್ ನಾಯಕರು 40% ಕಮಿಷನ್ ಅಂತ ಮಾತನಾಡುತ್ತಿದ್ದಾರೆ. ಈ ಪರ್ಸಂಟೇಜ್ ವ್ಯವಹಾರ ಬರಲು ಯಾರು ಕಾರಣ? 10%, 20%, 30%, 40% ಕಮಿಷನ್ ಅಂತ ಹೇಳುವವರಿಗೆ ಆ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಎಲ್ಲರೂ ಗಾಜಿನ ಮನೆಯಲ್ಲಿ ಇರುವವರೇ. ಗಾಜಿನ ಮನೆಯಲ್ಲಿ ಕೂತು ಕಲ್ಲು ಯಾಕೆ ಹೊಡೆಯುತ್ತಾರೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ಯಾರು ಇವತ್ತು ಕಮಿಷನ್ ಬಗ್ಗೆ ಮಾತನಾಡುತ್ತಿದ್ದಾರೆ, ಅದೇ ಕಾಂಗ್ರೆಸ್ ಪಕ್ಷದ ನಾಯಕರು ಐದು ವರ್ಷ ಆಡಳಿತ ನಡೆಸಿದರಲ್ಲ, ಅವರ ಕಾಲದಲ್ಲಿ ಏನೇನಾಯ್ತು ಎಂದು ಹೇಳಬೇಕಲ್ಲ. ಅವರ ಕಾಲದಲ್ಲಿ ಎಷ್ಟು ಪರ್ಸಂಟೇಜ್ ಇತ್ತು ಎನ್ನುವುದು ಅವರಿಗೂ ಗೊತ್ತು. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಖಂಡಿತಾ ಇಲ್ಲ ಎಂದು ಅವರು ಟೀಕಾಪ್ರಹಾರ ನಡೆಸಿದರು.
ನಿಮ್ಮ ಸರಕಾರ ಇದ್ದಾಗ ಈ ಪರ್ಸಂಟೇಜ್ ವ್ಯವಹಾರದ ವಿರುದ್ಧ ಯಾಕೆ ಕ್ರಮ ಜರುಗಿಸಲು ಆಗಲಿಲ್ಲ ಎಂದು ಕೆಲವರು ಕೇಳುತ್ತಿದ್ದಾರೆ. ಸ್ವತಂತ್ರ ಸರಕಾರ ನನಗೆಂದೂ ಬರಲಿಲ್ಲ. ಆದರೆ ಯಾವುದೇ ಕಾರಣಕ್ಕೂ ಪರ್ಸಂಟೇಜ್ ವ್ಯವಸ್ಥೆಯನ್ನು ನನ್ನ ಕಚೇರಿಯಲ್ಲಿ ಇಟ್ಟಿರಲಿಲ್ಲ. ನನ್ನ ಕಾಲದಲ್ಲೂ ಎಲ್ಲೆಲ್ಲಿ ಪರ್ಸಂಟೇಜ್ ಹೋಗ್ತಾ ಇತ್ತು ಎನ್ನುವ ಮಾಹಿತಿ ನನಗೆ ಇತ್ತು. ಮುಂದೆ ನಮ್ಮ ಪಕ್ಷಕ್ಕೆ ಜನರು ಸ್ವತಂತ್ರ ಸರಕಾರ ಕೊಟ್ಟರೆ ಆಗ ಈ ಬಗ್ಗೆ ಚರ್ಚೆ ಮಾಡಬಹುದು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.