ಎರಡು ಬಾರಿ ಸ್ಪೀಕರ್ ಆಗಿದ್ದವರ ಅಸಭ್ಯ ಹೇಳಿಕೆ; ವಿಕೃತಿಯ ಪರಮಾವಧಿ: ಹೆಚ್.ಡಿ. ಕುಮಾರಸ್ವಾಮಿ

Update: 2021-12-18 14:58 GMT
ಹೆಚ್.ಡಿ. ಕುಮಾರಸ್ವಾಮಿ (PTI)

ಹೊಸದಿಲ್ಲಿ: ಎರಡು ಬಾರಿ ಸ್ಪೀಕರ್ ಆಗಿದ್ದವರು, ಸಾಂವಿಧಾನಿಕ ಹುದ್ದೆಯಲ್ಲಿದ್ದವರು, ಸ್ವಯಂಘೋಷಿತ ಸಂವಿಧಾನ ತಜ್ಞರು ಆಗಿರುವ ರಮೇಶ್ ಕುಮಾರ್ ಅವರು ಸದನದಲ್ಲಿ ಮಹಿಳೆಯರಿಗೆ ಘೋರ ಅಪಮಾನ ಮಾಡಿದ್ದಾರೆ ಮಾತ್ರವಲ್ಲದೆ; ಮಹಿಳೆಯರ ಜತೆಗೆ ಸಭಾಧ್ಯಕ್ಷ ಪೀಠಕ್ಕೂ ಅಪಮಾನ ಮಾಡಿದ್ದಾರೆ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ನವದೆಹಲಿಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡುವಾಗ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಎರಡೂ ಸಲ ಸ್ಪೀಕರ್ ಆಗಿದ್ದ ಮಹಾನುಭಾವರು ಅದೇ ಪೀಠದಲ್ಲಿ ಕುಳಿತಿದ್ದವರ ಕಲಾಪ ನಡೆಸುವ ಕಷ್ಟ, ಒತ್ತಡದ ಬಗ್ಗೆ ಮಾತನಾಡುವಾಗ ಅವರ ಪರಿಸ್ಥಿತಿಯನ್ನು ಅತ್ಯಾಚಾರಕ್ಕೆ ಒಳಗಾಗುವ ಅಸಹಾಯಕ ಮಹಿಳೆಗೆ ಹೋಲಿಸುವ ಮೂಲಕ ಸಂವಿಧಾನದತ್ತವಾದ ಸಭಾಧ್ಯಕ್ಷರ ಪೀಠಕ್ಕೆ ಕ್ಷಮಾರ್ಹವಲ್ಲದ ಅಪಮಾನ ಮಾಡಿದ್ದಾರೆ. ಜತೆಗೆ, ಸದನದಲ್ಲಿ ಮಹಿಳೆಯರಿಗೂ ಅಪಮಾನ ಮಾಡಿದ್ದಾರೆ. ಕೆಟ್ಟ ಶಬ್ದಗಳನ್ನು ಬಳಕೆ ಮಾಡುವ ಮೂಲಕ ಇಡೀ ಸ್ತ್ರೀ ಕುಲವನ್ನೇ ಹಿಯ್ಯಾಳಿಸಿದ್ದಾರೆ. ಬುದ್ಧಿಜೀವಿಯ ಸೋಗಿನಲ್ಲಿ ತಮ್ಮ ವಿಕೃತಿ ಪ್ರದರ್ಶನ ಮಾಡಿದ್ದಾರೆ. ಅವರು ಪದೇ ಪದೆ ಇದನ್ನೇ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕುಟುವಾಗಿ ಟೀಕಿಸಿದರು.

ಕಲಾಪ ನಡೆಸುವ ಒತ್ತಡದಲ್ಲಿರುವ ಸಭಾಧ್ಯಕ್ಷರ ಪೀಠದ ಎದುರೇ ಈ ರೀತಿ ಅಸಭ್ಯವಾಗಿ ಮಾತನಾಡುವುದು ಸರಿಯಲ್ಲ, ಇದು ಸಂಸದೀಯ ವ್ಯವಸ್ಥೆಗೆ ಭೂಷಣವಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಮಾಜಿ ಸಿಎಂ ಆಗಿ, ಶಾಸಕರಾಗಿ ಸದನ ನಡೆಯುವ ಸಂದರ್ಭದಲ್ಲಿ ದೆಹಲಿಯಲ್ಲಿ ಇರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸದನದ ಕಲಾಪದಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವ ವಿಚಾರಗಳು ಚರ್ಚೆಯಾಗಿವೆ. ಕಲಾಪದಲ್ಲಿ ಏನೆಲ್ಲಾ ಚರ್ಚೆ ಆಗಿದೆ ಎನ್ನುವುದನ್ನು ನಾನು ಗಮನಿಸಿದ್ದೇನೆ. ನನ್ನ ತಂದೆಯವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ನನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಾನು ಮೊದಲೇ ಸ್ಪೀಕರ್ ಅವರ ಬಳಿ ಅನುಮತಿ ಪಡೆದು ದೆಹಲಿಗೆ ಬಂದಿದ್ದೇನೆ. ಕಲಾಪದಲ್ಲಿ ನಡೆಯುತ್ತಿರುವ ಪ್ರತಿಯೊಂದನ್ನು ನಾನು ನೋಡುತ್ತಿದ್ದೇನೆ. ರಾಜ್ಯದ ಅನುಭವಿ ರಾಜಕಾರಣಿ, ಸ್ಪೀಕರ್ ಆಗಿದ್ದವರು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಈ ವಿಚಾರದಲ್ಲಿ ರಮೇಶ್ ಕುಮಾರ್ ಅವರ ಮಾತು, ಸ್ಪೀಕರ್ ನಡೆದುಕೊಂಡ ರೀತಿ ಖಂಡನೀಯ. ಮಹಿಳೆಯರ ಬಗ್ಗೆ ಮಾತನಾಡುವಾಗ ಆ ಪದ ಬಳಕೆ ಅಗತ್ಯ ಏನಿತ್ತು? ಮೊದಲು ಮಾತನಾಡಿ ನಂತರ ಕ್ಷಮೆ ಕೋರಿದರೆ ಮುಗಿಯುವುದಿಲ್ಲ. ಇವರೆಲ್ಲಾ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಕುಲಗೆಡಿಸುತ್ತಿದ್ದಾರೆ ಎಂದರು.

ಮಂಗಳವಾರದಿಂದ ನಾನು ಸದನದಲ್ಲಿ ಭಾಗವಹಿಸುತ್ತಿದ್ದೇನೆ. ಒಂದು ವೇಳೆ ಈ ವಿಚಾರ ಬಂದರೆ ನಾನು ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News