ಬಸವಣ್ಣನವರಿಗೆ ಮಸಿ ಬಳಿದ ಪ್ರಕರಣ: ಸಮಸ್ತ ಮಾನವ ಕುಲಕ್ಕೆ ಮಾಡಿದ ಅವಮಾನ; ನಾರಾಯಣಗೌಡ

Update: 2021-12-20 17:19 GMT

ಬೆಳಗಾವಿ, ಡಿ.20: ಸಾಮಾಜಿಕ, ಧಾರ್ಮಿಕ, ಸಮತಾವಾದದ ಹರಿಕಾರ ವಿಶ್ವಗುರು ಬಸವಣ್ಣನವರಿಗೆ ಬೆಳಗಾವಿಯ ಜಿಲ್ಲೆಯ ಖಾನಾಪುರದ ಹಲಸಿಯಲ್ಲಿ ನೀಚ ಎಂಇಎಸ್, ಶಿವಸೇನೆ ಭಯೋತ್ಪಾದಕರು ಮಸಿ ಬಳಿದು ಸಮಸ್ತ ಮಾನವ ಕುಲಕ್ಕೆ ಅವಮಾನ ಎಸೆಗಿದ್ದಾರೆ. ಈ ಕೃತ್ಯವನ್ನ ಎಲ್ಲ ಕನ್ನಡಿಗರು ಖಂಡಿಸಬೇಕು. ಇದನ್ನು ನಾವು ಯಾರೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ. 

ಜಗತ್ತಿನ ಶ್ರೇಷ್ಠ ಕ್ರಾಂತಿ ಬಸವ ಕ್ರಾಂತಿ, ಯಾರನ್ನೂ ದ್ವೇಷಿಸದೆ, ದಯವೇ ಧರ್ಮದ ಮೂಲವಯ್ಯ ಎಂದು ಸಕಲರನ್ನು ಬಿಗಿದಪ್ಪಿದ ಮಹಾನ್ ಚೇತನಕ್ಕೆ ಮಸಿ ಬಳಿದ ಜನರ ಸಂಸ್ಕøತಿ ಎಂತದ್ದೆನ್ನುವುದು ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಬಸವಣ್ಣ ಬದುಕಿದ್ದಿದ್ದರೆ ಇವರ ದ್ವೇಷ, ಅಸಹನೆ ಕಂಡು ಅನುಕಂಪ ಪಡುತ್ತಿದ್ದರು, ಮರುಗುತ್ತಿದ್ದರು ಎಂದರು.

ಖಾನಾಪುರದ ಹಲಸಿ ಹಿಂದೊಮ್ಮೆ ಕನ್ನಡಿಗರ ಬೃಹತ್ ಕದಂಬ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅಂತಹ ಕನ್ನಡಿಗರ ಪವಿತ್ರ ಭೂಮಿಯಲ್ಲಿ ವಿಶ್ವಗುರು ಬಸವಣ್ಣನವರಿಗಾದ ಅವಮಾನ ಸಹಿಸಲಸಾಧ್ಯ. ಮಹಾನ್ ಮಾನವತಾವಾದಿಗೆ ಅವಮಾನ ಮಾಡಿದ ನೀಚರಿಗೆ ಎಂತಹ ಘೋರ ಶಿಕ್ಷೆ ನೀಡಿದರೂ ಕಡಿಮೆಯೆ. ಸರಕಾರ ಇವರನ್ನು ಶಿಕ್ಷಿಸದಿದ್ದರೆ, ಜನರೇ ಶಿಕ್ಷಿಸುವ ಕಾಲ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮಾತನಾಡಿದ್ದು ಸಾಕು, ಹೇಳಿಕೆಗಳನ್ನು ಕೇಳಿ ಸಾಕಾಗಿದೆ. ಸರಕಾರ ಈಗಲಾದರೂ ಕಾರ್ಯೋನ್ಮುಖವಾಗಬೇಕು. ಮುಂದಿನ 24 ಗಂಟೆಯಲ್ಲಿ ಈ ದುಷ್ಕೃತ್ಯ ಎಸಗಿದ ಅಪರಾಧಿಗಳನ್ನ ಸರ್ಕಾರ ಬಂಧಿಸಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಗಡೀಪಾರು ಮಾಡಬೇಕು. ಬಸವಣ್ಣನವರ ಮೇಲೆ ಈ ಸರಕಾರಕ್ಕೆ ಕಿಂಚಿತ್ತು ಗೌರವ ಇದ್ದರೆ ಈ ಕೆಲಸ ತುರ್ತಾಗಿ ಮಾಡಲಿ ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News