ಅವ್ರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ: ಕಾಂಗ್ರೆಸ್ ಶಾಸಕನನ್ನು ಅಭಿನಂದಿಸಿದ ಸಚಿವ ಈಶ್ವರಪ್ಪ
Update: 2021-12-22 11:38 GMT
ಬೆಳಗಾವಿ, ಡಿ. 22: ವಿಧಾನ ಮಂಡಲ ಅಧಿವೇಶನ ನಿಮಿತ್ತ ಬೆಳಗಾವಿಗೆ ಬಂದಾಗಲೆಲ್ಲಾ ನಮ್ಮನ್ನು ಅವರು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಶಾಸಕ ಶಿವಾನಂದ ಕೌಜಲಗಿ ಅವರನ್ನು ಅಭಿನಂದಿಸಿದ ಪ್ರಸಂಗ ನಡೆಯಿತು.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಶಿವಾನಂದ ಕೌಜಲಗಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವ ಈಶ್ವರಪ್ಪ, ಸವದತ್ತಿ ತಾಲೂಕಿನ ಇಂಚಲ-ಮರಕುಂಬಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದರು.
ಇದಕ್ಕೆ ಸ್ಪೀಕರ್ ಕಾಗೇರಿ, ಶಿವಾನಂದ ಕೌಜಲಗಿ ಅವರನ್ನು ಕುರಿತು ನಿಮ್ಮಂತೆಯೇ ನಾವು ಕೂಡ ಕೆಲಸ ಹೇಗೆ ಮಾಡಿಸಿಕೊಳ್ಳಬೇಕು ಎಂದು ನಮಗೂ ಗೊತ್ತಾಯ್ತು ಎಂದು ಕಾಲೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆಂದು ಮೆಚ್ಚುಗೆ ಮಾತುಗಳನ್ನಾಡಿದರು.