ಓ ಮೆಣಸೇ...

Update: 2021-12-26 19:30 GMT

 ಸರ್ದಾರ್ ವಲ್ಲಭಬಾಯಿ ಪಟೇಲ್ ಇನ್ನಷ್ಟು ವರ್ಷ ಬದುಕಿದ್ದರೆ ಗೋವಾಕ್ಕೆ ಇನ್ನೂ ಬೇಗ ಪೋರ್ಚುಗೀಸರಿಂದ ವಿಮೋಚನೆ ಸಿಗುತ್ತಿತ್ತು
- ನರೇಂದ್ರ ಮೋದಿ, ಪ್ರಧಾನಿ ಈಗ ಬದುಕಿದ್ದಿದ್ದರೆ ನಿಮ್ಮಿಂದ ದೇಶವನ್ನು ವಿಮೋಚನೆ ಗೊಳಿಸುತ್ತಿದ್ದರು.

ಶಿವಾಜಿ ಜನ್ಮ ತಾಳದೆ ಇದ್ದಿದ್ದರೆ ಹಿಂದೂ ಧರ್ಮ ಉಳಿಯುತ್ತಿರಲಿಲ್ಲ

- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕಶಿವಾಜಿ ಮತ್ತು ಪೇಶ್ವೆಗಳಿಂದ ಕರ್ನಾಟಕವನ್ನು ಉಳಿಸಿದವರ ಬಗ್ಗೆಯೂ ಮಾತನಾಡಿ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರಕಾರ ಆರೆಸ್ಸೆಸ್ ಕೈಗೊಂಬೆಯಲ್ಲ- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಹಾಗಾದರೆ ಕಾಲ್ ಗೊಂಬೆ ಇರಬಹುದು. ಸೂತ್ರವನ್ನು ಕೈಯ ಬದಲಿಗೆ ಕಾಲ ಬೆರಳಲ್ಲಿ ಆಡಿಸುತ್ತಿರಬೇಕು.

ರಾಜ್ಯದಲ್ಲಿರುವ ಮಹಾತ್ಮರ ಎಲ್ಲಾ ಪ್ರತಿಮೆಗಳಿಗೂ ರಕ್ಷಣೆ ಒದಗಿಸಬೇಕು - ಸಾ.ರಾ.ಮಹೇಶ್, ಶಾಸಕ

ಅವರ ಸಂದೇಶಗಳಿಗೂ ಈಗ ರಕ್ಷಣೆಯ ಅಗತ್ಯ ಇದೆ.

ನಾನು ಆರೆಸ್ಸೆಸ್‌ನ ಸ್ವಯಂ ಸೇವಕನೇ ಹೊರತು ಕೊತ್ವಾಲ್ ರಾಮಚಂದ್ರನ ಚೇಲಾ ಅಲ್ಲ

- ಸಿ.ಟಿ.ರವಿ, ಶಾಸಕ ಕೊತ್ವಾಲ್ ರಾಮಚಂದ್ರರ ಹಿನ್ನೆಲೆ ಇರುವವರೆಲ್ಲ ಈಗ ಆರೆಸ್ಸೆಸ್ ಸ್ವಯಂ ಸೇವಕರೆಂದು ಓಡಾಡುತ್ತಿದ್ದಾರೆ.

ಸಿಎಂ ಬೊಮ್ಮಾಯಿಯ ಅಧಿಕಾರ ಶಾಶ್ವತವಲ್ಲ ಎಂಬ ಹೇಳಿಕೆ ಜಾಗ ಖಾಲಿ ಮಾಡುವ ಸೂಚನೆ- ಸಿ.ಎಂ.ಇಬ್ರಾಹೀಂ, ವಿ.ಪ. ಸದಸ್ಯ

ನೀವು ಬಿಜೆಪಿಯಲ್ಲಿ ಖಾಲಿ ಜಾಗ ಎಲ್ಲಿದೆ ಎಂದು ಹುಡುಕುತ್ತಿರುವುದು ಸುದ್ದಿ.

ಕೇಂದ್ರದ ಹೆಚ್ಚಿನ ಸಂಖ್ಯೆಯ ಸಚಿವರು ಉ.ಪ್ರ.ಕ್ಕೆ ಬರುತ್ತಿರುವುದೇ ಬಿಜೆಪಿ ಸೋಲಲಿದೆ ಎಂಬುದರ ಸೂಚನೆ - ಅಖಿಲೇಶ್ ಯಾದವ್, ಎಸ್ಪಿ ಮುಖ್ಯಸ್ಥ

ಹವಾಮಾನ ವರದಿಯನ್ನು ನಂಬಿ ಚುನಾವಣೆ ಎದುರಿಸದಿರಿ.

18 ವರ್ಷದ ಯುವತಿ ಬಿಜೆಪಿಗೆ ಮತ ಚಲಾಯಿಸಲು ಸಾಧ್ಯವಾಗುವುದಿದ್ದರೆ ತನ್ನ ಬಾಳ ಸಂಗಾತಿಯನ್ನೇಕೆ ಆರಿಸಲು ಸಾಧ್ಯವಿಲ್ಲ - ಅಸದುದ್ದೀನ್ ಉವೈಸಿ, ಎಐಎಂಐಎಂ ಅಧ್ಯಕ್ಷ

ನೀವು ಬಿಜೆಪಿಯನ್ನು ನಿಮ್ಮ ಬಾಳ ಸಂಗಾತಿಯಾಗಿ ಆಯ್ಕೆ ಮಾಡಲು ಸಮಸ್ಯೆ ಆಗಿದೆಯೇ?

ದೇಶದಲ್ಲಿ ಸಹಕಾರ ನಿರ್ವಹಣೆ ಕೋರ್ಸ್‌ಗಳ ಅಧ್ಯಯನಕ್ಕಾಗಿ ಶೀಘ್ರವೇ ರಾಷ್ಟ್ರೀಯಮಟ್ಟದ ವಿವಿ ಸ್ಥಾಪಿಸಲಾಗುವುದು - ಅಮಿತ್ ಶಾ, ಕೇಂದ್ರ ಸಚಿವ

ಸಹಕಾರ ಸಂಘಗಳನ್ನು ನಾಶ ಮಾಡುವುದಕ್ಕಾಗಿ ಒಂದು ವಿವಿ ಸ್ಥಾಪನೆಯೇ? ಪ್ರತಿಮೆಗಳು ನಮ್ಮ ಅಸ್ಮಿತೆಯ ಪ್ರತೀಕ- ಮಹೇಶ್ ಜೋಶಿ, ಕಸಾಪ ಅಧ್ಯಕ್ಷ

ಮನುಷ್ಯರು?

ಮತಾಂತರವಾದವರು ಮರಳಿ ಹಿಂದೂ ಧರ್ಮಕ್ಕೆ ಬರುವವರು ಯಾವ ಜಾತಿಗೆ ಸೇರಲು ಇಷ್ಟಪಡುತ್ತಾರೋ ಅದೇ ರೀತಿ ಸ್ವಾಗತಿಸಲಾಗುವುದು
- ಸಿದ್ದಲಿಂಗ ಸ್ವಾಮೀಜಿ, ಶ್ರೀರಾಮ ಸೇನೆ ಮುಖಂಡ

ಈ ಸೌಲಭ್ಯ ದಲಿತರಿಗೂ ಇದೆಯೇ?

ಎಂಇಎಸ್‌ನವರು ಗಂಡಸರೇ ಆದರೆ ಹಗಲಿನಲ್ಲಿ ಬಂದು ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮುಟ್ಟಲಿ- ಈಶ್ವರಪ್ಪ, ಸಚಿವ

ಕಿತ್ತೂರು ಚೆನ್ನಮ್ಮ ಹೆಣ್ಣಲ್ಲವೇ? ಹೆಣ್ಣಾದರೇನಾಯಿತು?

ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು ಏರಿಸಿದ್ದು ಕೆಲವರಿಗೆ ರುಚಿಸುತ್ತಿಲ್ಲ - ನರೇಂದ್ರ ಮೋದಿ, ಪ್ರಧಾನಿ

ವಿವಾಹದ ಬಳಿಕ ಎಷ್ಟು ವರ್ಷದಲ್ಲಿ ಪತ್ನಿಯನ್ನು ತೊರೆಯಬಹುದು ಎನ್ನುವುದನ್ನು ವಿವರಿಸಿ.

ಅಧಿಕಾರ, ಈ ಸ್ಥಾನ ಮಾನ ಯಾವುದೂ ಶಾಶ್ವತವಲ್ಲ- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

  ಸ್ಥಾನದ ಮುಂದೆ ಮಾನವೂ ಶಾಶ್ವತವಲ್ಲ. ಬಿಜೆಪಿ ಹಿಂದುತ್ವ ರಾಜಕಾರಣವನ್ನು ಬಿಡಬೇಕು- ಮೆಟ್ರೋ ಮ್ಯಾನ್ ಶ್ರೀಧರನ್, ಕೇರಳ ಬಿಜೆಪಿ ರಾಜಕಾರಣಿ

ಇದನ್ನು ಹಳಿ ಬದಲಿಸಿದ ಮೆಟ್ರೊ ರೈಲು ಎಂದು ಕರೆಯಬಹುದೇ?

ಅಸ್ಪಶ್ಯತೆ ಹಿಂದೂ ಧರ್ಮದಲ್ಲಿ ಮಾತ್ರವಲ್ಲ ಎಲ್ಲಾ ಧರ್ಮಗಳಲ್ಲೂ ಇವೆ - ಅರವಿಂದ್ ಬೆಲ್ಲದ್, ಶಾಸಕ

ಅವರೆಲ್ಲ, ಹಿಂದೂ ಧರ್ಮದಿಂದ ಸಾಲ ಪಡೆದಿರುವುದಂತೆ.

ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಿಂತ ಮುನ್ನ ‘ಥಳಿಸಿ ಹತ್ಯೆ’ ಎಂಬ ಪದವನ್ನು ಕೇಳಿರಲಿಲ್ಲ- ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಗುಜರಾತ್‌ನಲ್ಲಿ ಬೆಂಕಿ ಹಚ್ಚಿ ಸಾಮೂಹಿಕ ಹತ್ಯೆ ಮಾಡಿರುವ ಮಾಹಿತಿ ನಿಮಗೆ ತಲುಪಿದೆಯೇ?\

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರೂ ಕನಸು ಕಾಣುವುದು ಬೇಡ - ಆರ್.ಅಶೋಕ್, ಸಚಿವ

ಈಗಾಗಲೇ ನೀವು ಕನಸು ಕಂಡು ಆಗಿರಬೇಕು.

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ

- ಹರೀಶ್ ಚೌಧರಿ, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ
    ಒಟ್ಟಿನಲ್ಲಿ ಕುಟುಂಬ ಇದ್ದವರಿಗಷ್ಟೇ ಟಿಕೆಟ್ ಎಂದಾಯಿತು.

ಒಬ್ಬರು ಮುಖ್ಯಮಂತ್ರಿ ಆಗುತ್ತೇನೆ ಎಂದು 3 ಲಕ್ಷ ರೂ.ಯ ಸೂಟು ಹೊಲಿಸಿಕೊಂಡು ಓಡಾಡುತ್ತಿದ್ದಾರೆ ಅವರ ಆಸೆ ಈಡೇರುವುದಿಲ್ಲ
- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ಬಹುಶಃ ನೀವು 6 ಲಕ್ಷ ರೂಪಾಯಿಯ ಸೂಟು ಹೊಲಿಸಿ ಇಟ್ಟಿರಬೇಕು.

ಹಿಂದಿನ ಸರಕಾರಗಳ ರೈತ ವಿರೋಧಿ ನೀತಿಗಳು ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದವು

- ಯೋಗಿ ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ

ನಿಮ್ಮ ನೀತಿಯಿಂದ ಉದ್ಯಮಿಗಳೂ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು.

ಬೆಳಗಾವಿಯಲ್ಲಿ ಎಂಇಎಸ್ ಮಣಿಸಲು ಎಲ್ಲ ಪಕ್ಷಗಳೂ ಒಟ್ಟಾಗಬೇಕು - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಒಂದು ಕಾಲು ಶಿವಾಜಿಯ ದೋಣಿಯಲ್ಲಿ, ಇನ್ನೊಂದು ಕಾಲು ಸಂಗೊಳ್ಳಿ ರಾಯಣ್ಣನ ದೋಣಿಯಲ್ಲಿ.

ನಾವು ಈಜಬೇಕಾದ ಸಮುದ್ರದಲ್ಲಿಯೇ ಮೊಸಳೆಗಳನ್ನು ಬಿಟ್ಟು ನನ್ನನ್ನು ಮುಗಿಸುವ ಸಂಚು ನಮ್ಮವರಿಂದಲೇ ನಡೆಯುತ್ತದೆ

- ಹರೀಶ್ ರಾವತ್, ಉತ್ತರಾಖಂಡದ ಕಾಂಗ್ರೆಸ್ ಮುಖಂಡ

ಯಾವುದಾದರೂ ಈಜು ಕೊಳದಲ್ಲಿ ಹೋಗಿ ಈಜಬಾರದೇ?

ಮತಾಂತರ ನಿಷೇಧ ಕಾಯ್ದೆಯನ್ನು ತರದೇ ಇದ್ದರೆ ಭಾರತ ಪಾಕಿಸ್ತಾನದಂತೆ ಆಗುತ್ತದೆ - ಈಶ್ವರಪ್ಪ, ಸಚಿವ

  ಭಾರತವನ್ನು ಪಾಕಿಸ್ತಾನದ ಸ್ಥಿತಿಗೆ ತರುವುದೇ ನಿಮ್ಮ ಉದ್ದೇಶವಲ್ಲವೇ?

ಕುಡಿಯಬೇಕಂತ ಯಾರೂ ಕುಡಿಯೋದಿಲ್ಲ, ಕೆಲವು ಸಲ ಜೀವನದಲ್ಲಿ ನೋವು ಬರುತ್ತದೆ. ಅದನ್ನು ಮರೆಯಲು ಒಂದು ಕ್ವಾರ್ಟರ್ ಹಾಕಲೇಬೇಕಾಗುತ್ತದೆ - ಎಚ್.ಡಿ.ರೇವಣ್ಣ, ಮಾಜಿ ಸಚಿವ
  ಜನರ ರಕ್ತ ಕುಡಿಯುವ ರಾಜಕಾರಣಿಗಳ ಬಗ್ಗೆಯೂ ಸ್ಪಷ್ಟೀಕರಣ ನೀಡಿ 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...