"ಅನ್ಯಧರ್ಮೀಯರನ್ನು ಮರಳಿ ಹಿಂದೂಧರ್ಮಕ್ಕೆ ಕರೆತರಬೇಕು" ಎಂಬ ವಿವಾದಾತ್ಮಕ ಹೇಳಿಕೆ ಹಿಂಪಡೆದ ತೇಜಸ್ವಿ ಸೂರ್ಯ
ಬೆಂಗಳೂರು: ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ "ಹಿಂದು ಧರ್ಮದ ಪುನರುತ್ಥಾನದ ಬಗ್ಗೆ ಹಾಗೂ ಭಾರತದ ಇತಿಹಾಸದುದ್ದಕ್ಕೂ ಮತಾಂತರಗೊಂಡವರನ್ನು ಮರಳಿ ಹಿಂದು ಧರ್ಮಕ್ಕೆ ಸೇರಿಸುವ'' ಕುರಿತಂತೆ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ತಾವು ನೀಡಿದ ವಿವಾದಾತ್ಮಕ ಹೇಳಿಕೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.
ತೇಜಸ್ವಿ ಸೂರ್ಯ ಅವರ ಭಾಷಣದ ವೀಡಿಯೋಗಳು ವೈರಲ್ ಆಗಿದ್ದವಲ್ಲದೆ ಸಾಕಷ್ಟು ವಿವಾದಕ್ಕೂ ಈಡಾಗಿದ್ದವು.
ಈ ಕುರಿತು ಇಂದು ತೇಜಸ್ವಿ ಸೂರ್ಯ ಹೀಗೆ ಟ್ವೀಟ್ ಮಾಡಿದ್ದಾರೆ. “ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಎರಡು ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ನಾನು ‘ಭಾರತದಲ್ಲಿ ಹಿಂದು ಪುನರುತ್ಥಾನ' ವಿಚಾರದ ಕುರಿತು ಮಾತನಾಡಿದ್ದೆ. ನನ್ನ ಭಾಷಣದಲ್ಲಿನ ಕೆಲವೊಂದು ಹೇಳಿಕೆಗಳು ತಪ್ಪಿಸಬಹುದಾಗಿದ್ದ ವಿವಾದವನ್ನು ಹುಟ್ಟುಹಾಕಿವೆ. ಆದುದರಿಣಂದ ನಾನು ಆ ಹೇಳಿಕೆಗಳನ್ನು ಬೇಷರತ್ತಾಗಿ ವಾಪಸ್ ಪಡೆಯುತ್ತಿದ್ದೇನೆ,'' ಎಂದು ಸೂರ್ಯ ಹೇಳಿದ್ದಾರೆ.
“ಹಿಂದುವನ್ನು ತನ್ನ ಮಾತೃ ಧರ್ಮದಿಂದ ಹೊರಕ್ಕೆ ಕೊಂಡೊಯ್ಯಲಾಗಿದೆ. ಇದಕ್ಕೆ ಒಂದು ಸಾಧ್ಯ ಪರಿಹಾರವಿದೆ, ತಮ್ಮ ಮಾತೃ ಧರ್ಮವನ್ನು ತೊರೆದವರು ಹಾಗೂ ಇತಿಹಾಸದುದ್ದಕ್ಕೂ ವಿವಿಧ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕಾರಣಗಳಿಗಾಗಿ ಹಿಂದು ಧರ್ಮ ತ್ಯಜಿಸಿದವರೆಲ್ಲರನ್ನೂ ಮತ್ತೆ ವಾಪಸ್ ಅವರ ಮಾತೃ ಧರ್ಮಕ್ಕೆ ಕರೆತರಬೇಕಿದೆ,'' ಎಂದು ಅವರು ಹೇಳಿದ್ದರು.
ಮತಾಂತರ ನಿಗ್ರಹ ಕಾಯಿದೆಯೆಂದೇ ಕರೆಯಲಾಗುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಮಸೂದೆಯನ್ನು ರಾಜ್ಯ ವಿಧಾನಸಭೆ ವಿಪಕ್ಷಗಳ ವಿರೋಧದ ನಡುವೆ ಅಂಗೀಕರಿಸಿದ ಎರಡು ದಿನಗಳಲ್ಲಿ ತೇಜಸ್ವಿ ಸೂರ್ಯ ಅವರ ಹೇಳಿಕೆ ಬಂದಿದೆ.
At a program held in Udupi Sri Krishna Mutt two days ago, I spoke on the subject of ‘Hindu Revival in Bharat’.
— Tejasvi Surya (@Tejasvi_Surya) December 27, 2021
Certain statements from my speech has regrettably created an avoidable controversy. I therefore unconditionally withdraw the statements.