ಕಾರ್ಬನ್ ಫೈಬರ್ ದೋಟಿ ಆವಿಷ್ಕಾರ ಅಡಕೆ ಬೆಳೆಗಾರರಿಗೆ ವರದಾನ: ಸಚಿವ ಆರಗ ಜ್ಞಾನೇಂದ್ರ

Update: 2021-12-29 10:35 GMT

ಶಿವಮೊಗ್ಗ,ಡಿ.29: ರೈತರು ಎದುರಿಸುತ್ತಿರುವ, ಅಡಕೆ ಕೊನೆ ತೆಗೆಯುವ ಸಮಸ್ಯೆಗೆ ಕಾರ್ಬನ್ ಫೈಬರ್ ದೋಟಿ ವರವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ.

 ಕೃಷಿ ಮಲೆನಾಡು ಕೃಷಿಕರ ಸಮುದಾಯ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಬನ್ ಫೈಬರ್ ದೋಟಿಯಲ್ಲಿ ಕೊನೆ ತೆಗೆಯುವ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರೈತರು ಅಡಿಕೆ ಕೊನೆ ತೆಗೆಯುವ ವಿಚಾರದಲ್ಲಿ ಬಹಳವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೊನೆ ತೆಗೆಯುವ ಕಾಯಕದಲ್ಲಿ ಹಲವಾರು ಕಾರ್ಮಿಕರೂ ಆಕಸ್ಮಿಕವಾಗಿ ಮರದ ಮೇಲಿನಿಂದ ಬಿದ್ದು ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ.ಇದಕ್ಕೆಲ್ಲಾ ವರದಾನವೆಂಬಂತೆ ಅತ್ಯಂತ ಹಗುರವಾದ ಹಾಗೂ ಬಹಳವಾಗಿ ಉಪಯೋಗವಾಗುವ ಹಾಗೂ ನೆರವಾಗುವ ಕಾರ್ಬನ್ ಧೋಟಿಯ ಆವಿಷ್ಕಾರ ಆಗಿದೆ ಎಂದರು. ಹಾಗೂ ಇದಕ್ಕಾಗಿ ಶ್ರಮಿಸಿದ ಯುವ ಸಂಶೋಧನಾಕಾರರಿಗೆ ಅಭಿನಂದನೆಗಳನ್ನು ತಿಳಿಸಿದರು.

ಸಾಮಾನ್ಯ ರೈತರೂ ಈ ವಿನೂತನ ದೋಟಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು  ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಅಡಕೆಯಿಂದ ಹತ್ತು ಹಲವು ಇತರ ಉತ್ಪನ್ನಗಳು ಹೊರ ಬರುತ್ತಿರುವುದು  ಅತ್ಯಂತ ಸಂತೋಷದಾಯಕ ವಿಚಾರವಾಗಿದೆ. ಹಾಗೂ ಕೃಷಿಕರ ಬದುಕನ್ನು ಸಹನೀಯ ಗೊಳಿಸಲು ಹಲವಾರು ವ್ಯಕ್ತಿಗಳು ಹಾಗೂ ಸಂಸ್ಥೆಗಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಕೂಳೂರು ಸತ್ಯನಾರಾಯಣ್ ರಾವ್, ಖ್ಯಾತ ಸಾಹಿತಿ ಮತ್ತು ಛಾಯಾಚಿತ್ರ ಗ್ರಾಹಕ ಪಡ್ರೆ, ಆಡಿ ರವಿಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News