ನಂಜನಗೂಡು: ಬಿಜೆಪಿ ಶಾಸಕ ಹರ್ಷವರ್ಧನ್ ಎದುರೇ ವ್ಯಕ್ತಿಗೆ ಬೆಂಬಲಿಗರು ಹಾಗೂ ನಗರಸಭೆ ಸದಸ್ಯನಿಂದ ಹಲ್ಲೆ

Update: 2021-12-30 17:46 GMT

ಮೈಸೂರು,ಡಿ.30: ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಮುಂದೆಯೇ ಅವರ ಬೆಂಬಲಿಗರು ಎನ್ನಲಾದ ಬಿಜೆಪಿ ನಗರಸಭಾ ಸದಸ್ಯ ಕಪಿಲೇಶ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಖಂಡನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ನಂಜನಗೂಡು ನಗರದ ಆರ್.ಪಿ.ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. 

ಶಾಸಕ ಹರ್ಷವರ್ಧನ್ ನಾಗಮ್ಮ ಶಾಲಾವರಣದಲ್ಲಿರುವ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕಾಮಗಾರಿಯ ಗುದ್ದಲಿ ಪೂಜೆಗೆಂದು ಬಂದಿದ್ದರು. ಈ ವೇಳೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಖಂಡ ನಂಜನಗೂಡು ತಾಲ್ಲೂಕು ಹೊರಳವಾಡಿ ಹೊಸೂರು ಗ್ರಾಮದ ಪುಟ್ಟಸ್ವಾಮಿ ಎಂಬುವವರು ಶಾಸಕರನ್ನು ಭೇಟಿಯಾಗಲು ಬಂದಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಶಾಸಕ ಹರ್ಷವರ್ಧನ್ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಖಂಡ ಪುಟ್ಟಸ್ವಾಮಿ ಅವರನ್ನು ಕರೆದು ತಮ್ಮ ಕಾರಿನ ಬಳಿ ಮಾತನಾಡುತ್ತಿದ್ದರು.

ಈ ವೇಳೆ ಶಾಸಕ ಹರ್ಷವರ್ಧನ್ ಬೆಂಬಲಿಗ ಬಿಜೆಪಿ ಪಕ್ಷದ ನಗರಸಭಾ ಸದಸ್ಯ ಕಪಿಲೇಶ್ ಮತ್ತು ಆತನ ತಂಡ ಏಕಾ ಏಕಿ ಪುಟ್ಟಸ್ವಾಮಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪುಟ್ಟಸ್ವಾಮಿಯವರನ್ನು ಎಳೆದಾಡಿ ಇಡೀ ಕಾಲೇಜಿನ ಆವರಣದಲ್ಲಿ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ ಎನ್ನಲಾಗಿದೆ. 

ಸದ್ಯ ಶಾಸಕರ ಬೆಂಬಲಿಗರು ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News