ಶಿವಮೊಗ್ಗ: ರಸ್ತೆ ಅಪಘಾತ; ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ ಪಿಎಸ್ಐಗೆ ಜನರಿಂದ ಪ್ರಶಂಸೆ
ಶಿವಮೊಗ್ಗ,ಡಿ.31:ಬಸ್ಗೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ ಯುವಕ ಮತ್ತು ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ ಕಾರ್ಗಲ್ ಪಿಎಸ್ಐ ತಿರುಮಲೇಶ್ ಕಾರ್ಯಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪ ಸಮೀಪದ ಕಾನ್ಲೆ ಬಳಿ ಶುಕ್ರವಾರ ಬೈಕ್ವೊಂದು ಬಸ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.
ಜೋಗಕ್ಕೆ ಹೋಗುತ್ತಿದ್ದ ಬೈಕ್,ಬ್ರೇಕ್ ತಾಗದೇ ಎದುರು ಬರುತ್ತಿದ್ದ ಬಸ್ಗೆ ಗುದ್ದಿದೆ. ಪರಿಣಾಮ ಬೈಕ್ ಸವಾರ ಹಾಗೂ ಹಿಂಬದಿಯಲ್ಲಿದ್ದ ಬಾಲಕಿಯೊಬ್ಬಳಿಗೆ ಗಂಭಿರ ಗಾಯಗಳಾಗಿವೆ.
ಈ ವೇಳೆ ಕಾರ್ಗಲ್ಗೆ ಡ್ಯೂಟಿಗೆ ತೆರಳುತ್ತಿದ್ದ ಎಸ್ಐ ತಿರುಮಲೇಶ್ ಅದೇ ಮಾರ್ಗವಾಗಿ ಬಂದಿದ್ದಾರೆ. ಜನ ಸೇರಿದ್ದನ್ನ ನೋಡಿ ಕೆಳಕ್ಕೆ ಇಳಿದ ತಿರುಮಲೇಶ್, ಗಾಯಗೊಂಡಿದ್ದ ಬೈಕ್ ಸವಾರರನ್ನ ತಮ್ಮ ಕಾರಿನಲ್ಲಿಯೇ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಸ್ಥಿತಿ ಗಂಭೀರವಾಗಿದೆ.
ಘಟನೆ ಬೆನ್ನಲ್ಲೆ, ಸ್ಥಳೀಯರು ಎಸ್ಐ ತಿರುಮಲೇಶ್ರ ಮಾನವೀಯತೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.