ಮುಖ್ಯಮಂತ್ರಿ ಎದುರೇ ಸವಾಲು ಹಾಕಿದಾಗ ಅದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವೇ: ಸಂಸದ ಡಿ.ಕೆ.ಸುರೇಶ್ ಪ್ರಶ್ನೆ

Update: 2022-01-04 12:49 GMT
 ಸಂಸದ ಡಿ.ಕೆ.ಸುರೇಶ್

ಬೆಂಗಳೂರು, ಜ.4: ನಿನ್ನೆ ರಾಮನಗರದಲ್ಲಿ ನಡೆದ ಘಟನೆ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವ್ಯಾಖ್ಯಾನ, ಹೇಳಿಕೆ, ಪ್ರತಿ ಹೇಳಿಕೆ ಕೇಳಿದ್ದೇನೆ. ಒಬ್ಬ ಮಂತ್ರಿ ಅನವಶ್ಯಕವಾಗಿ ಸಭೆ ಹೊರತಾಗಿ ನಾವು ಬಿಜೆಪಿಯವರು, ನಾವು ಮಾಡುವುದೇ ಹೀಗೆ, ಗಂಡಸಾದವರು ಬನ್ನಿ ಎಂದು ಮುಖ್ಯಮಂತ್ರಿಗಳ ಮುಂದೆ ಸವಾಲು ಹಾಕಿದಾಗ ಅದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವೇ? ಎಂದು ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನಗೆ ಮಾತ್ರ ಹಾಕಿದ ಸವಾಲು ಅಲ್ಲ, ಇಡೀ ರಾಮನಗರ ಜಿಲ್ಲೆಯ ಜನರಿಗೆ ಹಾಕಿದ ಸವಾಲು. ಇದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ, ನಾಡಪ್ರಭು ಕೆಂಪೇಗೌಡರಿಗೆ ಮಾಡಿದ ಅಪಮಾನ. ಇಲ್ಲಿ ಡಿ.ಕೆ. ಸುರೇಶ್ ಎಂಬ ವ್ಯಕ್ತಿ ಕೇವಲ ನೆಪ ಮಾತ್ರ ಎಂದರು.

ಸಚಿವರು ರಾಮನಗರದ ಸ್ವಾಭಿಮಾನ ಕೆಣಕುವ ಪ್ರಯತ್ನ ಮಾಡಿದ್ದಾರೆ. ಆವೇಶ, ತೋಳ್ಬಲ, ಗಂಡಸ್ತನದ ಮಾತು ಸಚಿವರ ಬಾಯಲ್ಲಿ ಯಾಕೆ ಬರುತ್ತದೆ ಎಂದು ಮಾಧ್ಯಮಗಳು, ಬಿಜೆಪಿಯ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಹೇಳಬೇಕು. ಮುಖ್ಯಮಂತ್ರಿಗಳ ಮುಂದೆ ಗಂಡಸ್ತನದ ಚರ್ಚೆಗೆ ಬರಬೇಕು ಅಂತಿದ್ದರೆ, ಬರಲಿ. ಡಿ.ಕೆ.ಸುರೇಶ್‍ಗೆ ಪಲಾಯನ ಮಾಡುವ ಅನಿವಾರ್ಯತೆ ಇಲ್ಲ. ಮತ್ತೊಮ್ಮೆ ಮಂತ್ರಿಯ ನಡವಳಿಕೆ ಪ್ರಚಾರ ಮಾಡಲು ಮುಂದಾಗಿರುವ ಬಿಜೆಪಿಯ ಎಲ್ಲ ನಾಯಕರು, ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.

ಪ್ರತಿಭಟನೆ ಮಾಡುತ್ತಿರುವ ಎಲ್ಲ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆಗಳು. ಮುಖ್ಯಮಂತ್ರಿಯ ಮುಂದೆ ಸಚಿವರ ನಡವಳಿಕೆಯನ್ನು ರಾಜ್ಯದ ಜನರಿಗೆ ಪರಿಚಯ ಮಾಡಿಕೊಡುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದು, ಅವರನ್ನು ಅಭಿನಂದಿಸುತ್ತಿದ್ದೇನೆ ಎಂದು ಸುರೇಶ್ ಹೇಳಿದರು.

ಸರಕಾರಿ ಕಾರ್ಯಕ್ರಮದಲ್ಲಿ ಸಚಿವರು ಭಾಷಣದಲ್ಲಿ ಬಳಸುತ್ತಿರುವ ಭಾಷೆ, ಶೈಲಿ ಸರಿಯಿಲ್ಲ, ಸಾಕು ಎಂದು ಸ್ವತಃ ಮುಖ್ಯಮಂತ್ರಿಗಳೇ ಸೂಚಿಸುತ್ತಿದ್ದರೂ ಅವರು ಆ ರೀತಿ ಮಾತನಾಡಿದ್ದು ಎಷ್ಟು ಸರಿ? ಮಾಜಿ ಉಪಮುಖ್ಯಮಂತ್ರಿಯಾಗಿ, ಹಾಲಿ ಮಂತ್ರಿಯಾಗಿ, ಉನ್ನತ ಶಿಕ್ಷಣ ಸಚಿವರಾಗಿ ಅವರು ತಮ್ಮ ಮಾತು, ವರ್ತನೆಯಿಂದ ರಾಜ್ಯದ ಎಲ್ಲ ಯುವ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರು ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ. ಗಂಡಸ್ತನ ಇದೆಯಾ ಎಂದು ಕರೆಯುವುದು ನಿಮ್ಮ ಸಂಸ್ಕೃತಿನಾ? ಬಿಜೆಪಿ ಸಂಸ್ಕಾರನಾ? ಎಂದು ಕಟೀಲ್ ಅವರನ್ನು ಕೇಳಬಯಸುತ್ತೇನೆ. ರಾಮನಗರ ಜಿಲ್ಲೆ ಜನರ ಮುಂದೆ ಆ ರೀತಿ ಮಾತನಾಡುವುದು ಸರೀನಾ? ಅದು ಬಿಜೆಪಿ ಪಕ್ಷದ ಕಾರ್ಯಕ್ರಮ ಅಲ್ಲ, ಸರಕಾರದ ಅಧಿಕೃತ ಕಾರ್ಯಕ್ರಮ ಎಂದು ಸುರೇಶ್ ಹೇಳಿದರು.

ಮುಖ್ಯಮಂತ್ರಿ ಹಾಗೂ ಆ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಮುಂದೆ ಅವರು ಆಡಿದ ಮಾತು ಸರೀನಾ? ಸಿಎಂ ಆಕ್ಷೇಪ ವ್ಯಕ್ತಪಡಿಸಿದಾಗಲೂ ಅವರು ಯಾವ ರೀತಿ ಆವೇಶದಲ್ಲಿ ಮಾತನಾಡಿದ್ದಾರೆ ಎಂದು ರಾಜ್ಯದ ಜನ ನೋಡಿದ್ದಾರೆ. ಮುಖ್ಯಮಂತ್ರಿ, ಅಲ್ಲಿದ್ದ ಸಚಿವರು, ಶಾಸಕರು ನೋಡಿದ್ದಾರೆ. ಹೌದು, ನಾನು ಕ್ಷೇತ್ರದ ಸಂಸತ್ ಸದಸ್ಯನಾಗಿ ಸಚಿವರ ಅನುಚಿತ ಮಾತು ತಡೆಯಲು ಪ್ರಯತ್ನ ಮಾಡಿದೆ. ರಾಮನಗರ ಜಿಲ್ಲೆ ಜನರ ಗೌರವ ಉಳಿಸುವುದು ನನ್ನ ಕರ್ತವ್ಯ ಎಂದು ಅವರು ತಿಳಿಸಿದರು. 

ಸಂಸ್ಕೃತಿ, ಧರ್ಮ ಯಾವುದೂ ಬಿಜೆಪಿ ಮುಂದೆ ಇಲ್ಲ. ಪ್ರಚೋದನಾಕಾರಿ ಹಾಗೂ ಭಾವನಾತ್ಮಕ ವಿಚಾರಗಳಿಗೆ ಒತ್ತು ಕೊಡುವುದು ಬಿಜೆಪಿಯ ಅಜೆಂಡಾ. ಇವೆರಡನ್ನು ಬಿಟ್ಟು ಬೇರೆ ವಿಚಾರ ಅವರಲ್ಲಿ ಇಲ್ಲ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ದೇಶವನ್ನು ಒಡೆದು ಆಳುತ್ತಿದ್ದಾರೆ. ಯುವಕರ ಮನಸ್ಸು ಕೆರಳಿಸುತ್ತಾ ಬಂದಿದ್ದಾರೆ. ಇದು ಅತಿ ಶೀಘ್ರದಲ್ಲೇ ಅಂತ್ಯವಾಗಲಿದೆ ಎಂದು ಸುರೇಶ್ ಹೇಳಿದರು.

ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನನಗೆ ಕುಮಾರಸ್ವಾಮಿ ಅವರ ಮಾತುಗಳಲ್ಲಿ ನಂಬಿಕೆ ಇಲ್ಲ. ಅವರು ಮಾಜಿ ಮುಖ್ಯಮಂತ್ರಿಗಳು. ಅವರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ನನ್ನ ಗಮನ ಏನಿದ್ದರೂ ಜಿಲ್ಲೆಯ ಅಭಿವೃದ್ಧಿ, ಪಕ್ಷದ ವಿಚಾರವಾಗಿಯೇ ಹೊರತು, ಕುಮಾರಸ್ವಾಮಿ ಅವರ ವಿರುದ್ಧವಲ್ಲ. ಕುಮಾರಸ್ವಾಮಿ ಅವರು ಏನು ಹೇಳಿದರೂ ಸಮಯ ಬಂದಾಗ ರಾಜ್ಯದ ಹಾಗೂ ಜಿಲ್ಲೆಯ ಜನ ಉತ್ತರ ನೀಡಲಿದ್ದಾರೆ’ ಎಂದು ಉತ್ತರಿಸಿದರು.

ಒಮೈಕ್ರಾನ್ ಹೆಚ್ಚಾಗುತ್ತಿದ್ದು ಮೇಕೆದಾಟು ಹೋರಾಟ ಹಿಂಪಡೆಯಲು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡುತ್ತೇನೆ ಎಂಬ ಆರೋಗ್ಯ ಸಚಿವರ ಹೇಳಿಕೆಗೆ, ‘ನಾನು ಆರೋಗ್ಯ ಸಚಿವರಿಗೆ ಹೇಳುತ್ತೇನೆ. ಒಮೈಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ, ಬಿಜೆಪಿ ದೇಶದಲ್ಲಿ ನಡೆಸುತ್ತಿರುವ ಎಲ್ಲ ರಾಜಕೀಯ ಸಮಾವೇಶ, ರ್ಯಾಲಿಗಳನ್ನು ನಿಲ್ಲಿಸುವಂತೆ ಮನವಿ ಮಾಡಲಿ’ ಎಂದು ಪ್ರತಿಕ್ರಿಯೆ ನೀಡಿದರು.

ಸೋಂಕು ಹೆಚ್ಚಿದರೆ ಕಾಂಗ್ರೆಸ್ ಹೊಣೆಯಾಗುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಈ ದೇಶದಲ್ಲಿ ಸೋಂಕು ಹೆಚ್ಚಿದೆ ಎಂದರೆ ಅದಕ್ಕೆ ಪ್ರಧಾನಮಂತ್ರಿಗಳ ರ್ಯಾಲಿ, ಸಮಾವೇಶ ಕಾರಣ ಎಂದು ನಾನು ಹೇಳುತ್ತೇನೆ’ ಎಂದರು.

ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರು ಈಗಾಗಲೇ ಗೂಂಡಾಗಿರಿಯ ಗುತ್ತಿಗೆ ತೆಗೆದುಕೊಂಡಿದ್ದಾರೆ. ಅಶೋಕ್ ನಿನ್ನೆ ಅಶ್ವಥ್ ನಾರಾಯಣ ಅವರ ಶೈಲಿ, ವರ್ತನೆಯನ್ನು ನೋಡಲಿಲ್ಲವೇ? ಅವರಿಗೆ ಅಶ್ವಥ್ ನಾರಾಯಣ ಅವರ ಧಿಮಾಕು ಎಲ್ಲವನ್ನು ತೋರಿಸಿ. ಒಂದು ಹೆಣ್ಣು ಮಗಳು ಅನಿತಾ ಕುಮಾರಸ್ವಾಮಿ ಏನು ಹೇಳಿದರು ಎಂಬುದನ್ನೂ ಅವರು ನೋಡಲಿ. ಅದಕ್ಕೆ ಅಶ್ವಥ್ ನಾರಾಯಣ, ಅನಿತಾ ಕುಮಾರಸ್ವಾಮಿಗೆ ಯಾವ ಧಾಟಿಯಲ್ಲಿ ಪ್ರತ್ಯುತ್ತರಿಸಿದರು ಎಂಬುದನ್ನೂ ನೋಡಲಿ' ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News