ಮೈಸೂರು: ಹದಿನೈದನೇ ದಿನಕ್ಕೆ ಕಾಲಿಟ್ಟ 'ರಂಗಾಯಣ ಉಳಿಸಿ' ಹೋರಾಟ
ಮೈಸೂರು,ಜ.4: 'ರಂಗಾಯಣ ಉಳಿಸಿ' ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಪ್ರತಿಭಟನೆ ಹದಿನೈದನೇ ದಿನಕ್ಕೆ ಕಾಲಿಟ್ಟಿದೆ.
ನಗರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಓವಲೆ ಮೈದಾನದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರನ್ನು ಕೂಡಲೇ ವಜಾಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ರಂಗಾಯಣದಲ್ಲಿ ಕೋಮುವಾದ ಬಿತ್ತಲು ಮುಂದಾಗಿರುವ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ವಜಾಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ನಾವು ಹಿಂದೆ ಸರಿಯುವುದಿಲ್ಲ. ರಂಗಾಯಣದ ಉಳಿವಿಗಾಗಿ ಹೋರಾಟ ಮಾಡುತ್ತಿರುವವರನ್ನು ಎಡಪಂಥೀಯ, ಮಾವೋವಾದಿಗಳು ಎನ್ನುವುದು ಅತ್ಯಂತ ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಹಿರಿಯ ಸಮಾಜವಾದಿ ಪ.ಮಲ್ಲೇಶ್, ಹಿರಿಯ ಸಾಹಿತಿ ರತಿರಾವ್, ವಿ.ಎನ್.ಲಕ್ಷ್ಮೀನಾರಾಯಣ್, ಹಿರಿಯ ರಂಗಕರ್ಮಿ ಜನಾರ್ಧನ್ (ಜನ್ನಿ), ಕೃಷ್ಣಪ್ರಸಾದ್, ಪತ್ರಕರ್ತ ಜಿ.ಪಿ.ಬಸವರಾಜು, ಪಂಡಿತಾರಾಧ್ಯ, ಗೋಪಾಲಕೃಷ್ಣ, ಪತ್ರಕರ್ತ ಟಿ.ಗುರುರಾಜ್, ಕಲೀಂ, ಬೆಳ್ಳಾಲೆ ಬೆಟ್ಟೇಗೌಡ, ಕೃಷ್ಣ ಜನಮನ, ಹೊಸಹಳ್ಳಿ ಶಿವಕುಮಾರ್, ಸೇರಿದಂತೆ ಹಲವರು ಭಾಗವಹಿಸಿದ್ದರು.