ಡಿಜಿಟಲ್ ಮಾಧ್ಯಮಗಳಲ್ಲಿನ ಅವಕಾಶಗಳ ಸಮರ್ಥ ಬಳಕೆಯಾಗಲಿ: ಜಿ.ಎನ್.ಮೋಹನ್

Update: 2022-01-04 18:02 GMT

ಕಲಬುರಗಿ, ಜ.4: ಇನ್ನು ಮುಂದಿನ ಕಾಲದ ಓದುಗರು ಡಿಜಿಟಲ್ ಮಾಧ್ಯಮದಲ್ಲಿ ಮಾತ್ರ ಇರುತ್ತಾರೆ ಎಂಬ ಸೂಚನೆಯಿಂದ ಪಾಶ್ಚಿಮಾತ್ಯ ಪತ್ರಿಕೋದ್ಯಮ ಈಗಾಗಲೇ ಆ ನಿಟ್ಟಿನಲ್ಲಿ ವೇದಿಕೆ ತೆರೆದುಕೊಂಡಿದೆ. ಕನ್ನಡದ ಪ್ರಮುಖ ಪತ್ರಿಕೆಗಳೂ ಕೂಡ ಹಿಂದೆ ಬಿದ್ದಿಲ್ಲ ಎಂದು ಸಮೂಹ ಮಾಧ್ಯಮ ತಜ್ಞ ಜಿ.ಎನ್.ಮೋಹನ್ ಹೇಳಿದರು.

ಮಂಗಳವಾರ ನಗರದ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿರುವ 36ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಡಿಜಿಟಲ್ ಮಾಧ್ಯಮದ ಸ್ಥಿತ್ಯಂತರಗಳ ಕುರಿತ ಮೊದಲ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಡಿಜಿಟಲ್ ಮಾಧ್ಯಮಗಳು ಇಂದು ಅಂಕಿ ಆಧರಿಸಿ ಅನಂತ ಸಾಧ್ಯತೆಗಳನ್ನು ಸೃಷ್ಟಿಸಿವೆ. ಅಪಾರ ಅವಕಾಶಗಳನ್ನು ಸೃಜಿಸಿವೆ. ಮಾಧ್ಯಮ ಈ ಸ್ಥಿತ್ಯಂತರಗಳನ್ನು ಅಳವಡಿಸಿಕೊಂಡು ವಿಕಸನಗೊಳ್ಳುತ್ತ ಸಾಗಬೇಕು ಎಂದು ಅವರು ಹೇಳಿದರು.

ಹುಬ್ಬಳ್ಳಿ ಪ್ರಜಾವಾಣಿ ಬ್ಯುರೋ ಮುಖ್ಯಸ್ಥೆ ಎಸ್.ರಶ್ಮಿ ಮಾತನಾಡಿ, ಡಿಜಿಟಲ್ ಮಾಧ್ಯಮಗಳ ಹೂರಣ ಮತ್ತು ಭಾಷೆ ಬದಲಾಗಿದೆ, ಅದರ ಐಪಿ ನಿಯಂತ್ರಣದಲ್ಲಿದ್ದರೂ ಕೂಡ, ನೋಡುಗರ ವೀಕ್ಷಕರ ಆಸಕ್ತಿಗಳಿಗನುಗುಣವಾಗಿ ಸಲಹೆಗಳನ್ನು, ಕಂಟೆಂಟ್‍ಗಳನ್ನು ಒದಗಿಸುತ್ತ, ಅವರ ಅಭಿರುಚಿಯನ್ನು ರೂಪಿಸತೊಡಗುತ್ತದೆ. ನೋಡುಗರ ಮನಃಪ್ರವೇಶ ಮಾಡುತ್ತಿವೆ ಎಂದರು.

ಮುದ್ರಣ ಮಾಧ್ಯಮಗಳೂ ಕೂಡ ಒಂದು ಯುಟ್ಯೂಬ್ ಚಾನೆಲ್ ಮಾಡಿ ಸುದ್ದಿ ಸಂಬಂಧಿತ ದೃಶ್ಯಗಳನ್ನು, ಮಾಹಿತಿಯನ್ನು ನಿರೂಪಿಸಲು ಪ್ರಾರಂಭಿಸಿವೆ. ವಿವೇಚನಾಯುತವಾಗಿ ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಪತ್ರಕರ್ತ ದ.ಕೊ.ಹಳ್ಳಿ ಚಂದ್ರಶೇಖರ ಮಾತನಾಡಿ, ಡಿಜಿಟಲ್ ಮಾಧ್ಯಮಗಳ ಸಾಕ್ಷರತೆ, ತಂತ್ರಜ್ಞಾನ ಎಲ್ಲರಿಗೂ ಬೇಕು. ಕಾರ್ಯನಿರತ ಪತ್ರಕರ್ತರ ಸಂಘವು ಡಿಜಿಟಲ್ ಪತ್ರಿಕೋದ್ಯಮವನ್ನು ಗಂಭೀರವಾಗಿ ನಡೆಸುತ್ತಿರುವ ಪತ್ರಕರ್ತರಿಗೆ ವೇದಿಕೆ, ಅವಕಾಶ ಕಲ್ಪಿಸಬೇಕು. ಅನುಭವಿ ಪತ್ರಕರ್ತರು ಸ್ವತಂತ್ರವಾಗಿ ಡಿಜಿಟಲ್ ಮಾಧ್ಯಮಗಳನ್ನು ನಡೆಸುತ್ತಿದ್ದಾರೆ ಎಂದರು.

ದಟ್ಸ್ ಕನ್ನಡ ಡಾಟ್ ಕಾಮ್ ಸಹ ಸಂಪಾದಕ ಪ್ರಕಾಶ್ ಹುಲ್ಕೋಡು ಮಾತನಾಡಿ, ನಭಕ್ಕೆ ಉಪಗ್ರಹಗಳು ನೆಗೆದ ನಂತರ 24/7 ಸುದ್ದಿ ವಾಹಿನಿಗಳು, ಮುದ್ರಣ ಮಾಧ್ಯಮ ಶೈಲಿಯ ಮುಂದುವರೆದ ಭಾಗವಾಗಿ ಕಾರ್ಯ ಪ್ರಾರಂಭಿಸಿದವು. ಇಡೀ ಜಗತ್ತಿನಾದ್ಯಂತ ಪ್ರಾದೇಶಿಕ ದೇಶಭಾμÉಗಳು ಡಿಜಿಟಲ್ ಮಾಧ್ಯಮಗಳ ಮೂಲಕ ತಮ್ಮ ಅಸ್ತಿತ್ವವನ್ನು ಸ್ಥಾಪಿಸತೊಡಗಿದವು ಎಂದರು.

ಡಿಜಿಟಲ್ ಮಾಧ್ಯಮಗಳು ಭವಿಷ್ಯದ ನಿರ್ಣಾಯಕ ಮಾಧ್ಯಮವಾಗಲಿವೆ. ಭಾಷೆ, ಶೈಲಿ, ಅಭಿರುಚಿಯನ್ನು ಟಿವಿ ಹಾಳು ಮಾಡುತ್ತಿದೆ ಎಂಬ ಆರೋಪಗಳ ನಡುವೆಯೇ ಈಗ ಡಿಜಿಟಲ್ ಮಾಧ್ಯಮಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿವೆ. ಮುದ್ರಣ, ಟೆಲಿವಿಷನ್ ಮಾಧ್ಯಮಗಳಲ್ಲಿ ಪರಿಪೂರ್ಣತೆ ಕಾಣುತ್ತಿದ್ದೇವೆ. ಕಾಲಾಂತರದಲ್ಲಿ ಅವು ಬೆಳೆದು ಬಂದಿವೆ. ಡಿಜಿಟಲ್ ಮಾಧ್ಯಮಗಳಲ್ಲಿ ಪರಿಣಿತರು ಮಾತ್ರ ಬರುತ್ತಾರೆ ಎಂದೇನಿಲ್ಲ, ಎಲ್ಲ ರೀತಿಯ ಜನರೂ ಅಲ್ಲಿ ಮುಕ್ತವಾಗಿ ಬರುತ್ತಿದ್ದಾರೆ. ವೃತ್ತಿಪರ ತರಬೇತಿಗಳು, ಶಾಸ್ತ್ರೀಯ ಕಲಿಕೆ ಬೇಕು. ಪತ್ರಕರ್ತರ ಸಂಘ, ಪತ್ರಿಕೋದ್ಯಮ ವಿಭಾಗಗಳು ಇಂತಹ ಪ್ರಯತ್ನಗಳನ್ನು ಮಾಡಬೇಕು ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತರಾದ ಎಂ.ಕೆ.ಹೆಗಡೆ ಮಾತನಾಡಿದರು. ಬಿ.ವಿ.ಮಲ್ಲಿಕಾರ್ಜುನಯ್ಯ, ಡಾ.ಎಂ.ಮುಹ್ಮದ್ ಬಾಷ ಗೂಳ್ಯಂ, ಶಂಕರ ಕೋಡ್ಲಾ, ಶಿವರಾಯ ದೊಡ್ಡಮನಿ, ಮೊಹಿಯುದ್ದೀನ್ ಪಾಷ, ಸಂಜಯ ಚಿಕ್ಕಮಠ ಮತ್ತಿತರರು ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News