×
Ad

ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವೇಳೆಯಲ್ಲಿ ಮೃತಪಟ್ಟ ಮಹಿಳೆ: ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

Update: 2022-01-05 18:12 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.5: ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೇರಿ ಇತರೆ ಸೌಕರ್ಯಗಳು ಇಲ್ಲದಿದ್ದರೂ ಮಹಿಳೆಯ ಶಸ್ತ್ರಚಿಕಿತ್ಸೆ ಮಾಡಿ ಅವರ ಸಾವಿಗೆ ಕಾರಣರಾದ ಆರೋಪದ ಮೇಲೆ ಇಬ್ಬರು ವೈದ್ಯರು ಸೇರಿ ಮೂವರಿಗೆ ನಗರದ 2ನೆ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಅಬ್ದುಲ್ ಖಾದರ್ ಅವರು ಆರೋಪಿಗಳಾದ ಡಾ.ರಾಜಶ್ರೀ ಶಿವರಾಜ್ ಬಿರಾದಾರ, ಡಾ.ವೈಜನಾಥ ಬಸಪ್ಪ ಬಿರಾದಾರ ಹಾಗೂ ಸಾಯಿಬಣ್ಣ ಮಾಣಿಕ ಅಂಬಾಟೆಗೆ ಎರಡು ವರ್ಷ ಜೈಲು ಶಿಕ್ಷೆ, ತಲಾ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ 6 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿದ್ದಾರೆ. 

ಘಾಳೆಪ್ಪ ಔರಾದಕರ್ ಅವರ ಪತ್ನಿ ಸಂಪಾವತಿ ಅವರು ಜೆ.ಪಿ.ನಗರದ ಸುಶ್ರೂತ ನರಸಿಂಗ್ ಹೋಮ್‌ನಲ್ಲಿ 2014ರ ಅ.12ರಂದು ಮಧ್ಯಾಹ್ನ 1 ಗಂಟೆಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದಿದ್ದರೂ ಸಂಪಾವತಿಯ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿ ನಿರ್ಲಕ್ಷ್ಯ ತೋರಿದ್ದರು. ಆರೋಪಿಗಳು ಸ್ವಇಚ್ಛೆಯಿಂದ ಮಹಿಳೆಯನ್ನು ಡಾ.ರಾಜಶೇಖರ ಪಾಟೀಲ ಅವರ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಸ್ಥಳಾಂತರಿಸಿದ್ದರು. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದ ಕಾರಣ ಬೇರೆ ಆಸ್ಪತ್ರೆಗೆ ವರ್ಗಾಯಿಸಿದ್ದಾಗಿ ವೈದ್ಯರು ಹೇಳಿದ್ದರು. ಸಂಪಾವತಿ ಮೊದಲೇ ಮೃತಪಟ್ಟರೂ ಬಿರಾದಾರ ಆಸ್ಪತ್ರೆ ವೈದ್ಯರ ಜತೆ ಶಾಮೀಲಾಗಿ ವಿಷಯ ಬಚ್ಚಿಟ್ಟಿದ್ದರು ಎಂದು ಆರೋಪಿಸಲಾಗಿತ್ತು.

ಡಾ.ರಾಜಶ್ರೀ ಬಿರಾದಾರ, ಡಾ.ವೈಜನಾಥ ಬಿರಾದಾರ, ಸಾಯಿಬಣ್ಣ ಅಂಬಾಟೆ ಅವರು ಸಂಪಾವತಿಗೆ ಐದು ತಾಸು ಶಸ್ತ್ರಚಿಕಿತ್ಸೆ ಮಾಡಿ ರಾತ್ರಿ 10 ಗಂಟೆವರೆಗೂ ಸಂಬಂಧಿಕರಿಗೆ ಮಾಹಿತಿ ನೀಡಿರಲಿಲ್ಲ. ನಂತರ ಬೇರೆ ಆಸ್ಪತ್ರೆಗೆ ದಾಖಲಿಸಿದ್ದರು. ಸಂಪಾವತಿ ಮೃತಪಟ್ಟ ಸಮಯಕ್ಕೂ ಹಾಗೂ ವೈದ್ಯರು ತಿಳಿಸಿದ ಸಮಯಕ್ಕೂ ತಾಳೆಯಾಗಿರಲಿಲ್ಲ. ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಕೆಲವು ಅಂಶಗಳು ಬಹಿರಂಗವಾಗಿದ್ದವು.

ಘಾಳೆಪ್ಪ ಔರಾದಕರ್ ನೀಡಿದ ದೂರಿನ ಮೇರೆಗೆ ಡಾ.ರಾಜಶ್ರೀ ಬಿರಾದಾರ, ಡಾ.ವೈಜನಾಥ ಬಿರಾದಾರ, ಸಾಯಿಬಣ್ಣ ವಿರುದ್ಧ ಐಪಿಸಿ ಕಲಂ 304(ಎ) ಹಾಗೂ ರಾಜಶೇಖರ ಪಾಟೀಲ ವಿರುದ್ಧ ಐಪಿಸಿ ಕಲಂ 202 ಅಡಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರಕಾರಿ ಅಭಿಯೋಜಕ ಶರಣಗೌಡ ಹಾಗೂ ಸಹಾಯಕ ಅಭಿಯೋಜಕ ಸುನೀಲ ಕಾಂಬಳೆ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News