ಎರಡು ಪ್ರತ್ಯೇಕ ಬಾಲ್ಯ ವಿವಾಹ: ಮೂವರ ನ್ಯಾಯಾಂಗ ಬಂಧನ
Update: 2022-01-06 22:07 IST
ಹೊಸಪೇಟೆ(ವಿಜಯನಗರ), ಜ.6: ವಿಜಯನಗರ ಜಿಲ್ಲೆಯ ಎರಡು ಕಡೆ ನಡೆದ ಪ್ರತ್ಯೇಕ ಬಾಲ್ಯ ವಿವಾಹಗಳಿಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಹೇಳಿದ್ದಾರೆ.
ಹೊಸಪೇಟೆ ತಾಲೂಕಿನಲ್ಲಿ ನಡೆದ ಪ್ರಕರಣ ಸಂಬಂಧ ಕರ್ಣ(21) ಎಂಬ ಯುವಕನನ್ನು ಬಂಧಿಸಿದರೆ, ಹರಪನಹಳ್ಳಿ ತಾಲೂಕಿನ ಹಲವಾಗಲು ಪೊಲೀಸರು, ನಿಂಗರಾಜು ಹಾಗೂ ಈತನಿಗೆ ಸಹಕಾರ ನೀಡಿದ ದೇವರಾಜನನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಬಂದ ದೂರುಗಳ ಅನ್ವಯ ಕರ್ಣ, ನಿಂಗರಾಜ, ದೇವರಾಜ ಎಂಬುವರನ್ನು ವಶಕ್ಕೆ ಪಡೆದು, ಪೋಕ್ಸೋ, ಬಾಲ್ಯವಿವಾಹ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಬಾಲಕಿಯರನ್ನು ಬಳ್ಳಾರಿಯ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕೇಂದ್ರದಲ್ಲಿರಿಸಿ ಕೌನ್ಸೆಲಿಂಗ್ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಗುರುವಾರ ನಗರದಲ್ಲಿ ತಿಳಿಸಿದರು.