ದೇಶದ ಆರ್ಥಿಕತೆ ಸುಗಮಕ್ಕೆ ಪ್ರಧಾನಿಯಿಂದ ಪುನರಾವರ್ತಿತ ಕಾನೂನುಗಳು ರದ್ದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2022-01-06 16:49 GMT

ಬೆಂಗಳೂರು, ಜ.6: ಪ್ರಧಾನಿ ನರೇಂದ್ರ ಮೋದಿಯವರು ಬಹಳಷ್ಟು ಪುನರಾವರ್ತಿತ ಕಾನೂನು ಕಟ್ಟಲೆಗಳನ್ನು ರದ್ದುಗೊಳಿಸಿ, ದೇಶದ ವಾಣಿಜ್ಯ, ಆರ್ಥಿಕತೆ ಸುಗಮವಾಗಿ ನಡೆಯುವಂತೆ ಮಾಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಗುರುವಾರ ನಗರದಲ್ಲಿ ಕಂಪೆನಿ ಸೆಕ್ರಟರಿಗಳ 49ನೆ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸ್ಥೆಯೊಂದನ್ನು ಕಾನೂನಿನ ಚೌಕಟ್ಟಿನೊಳಗೆ ತರುವಲ್ಲಿ ಕಂಪೆನಿ ಸೆಕ್ರೆಟರಿಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಕಂಪೆನಿಗಳ ಆರ್ಥಿಕತೆಯಲ್ಲಿ ಸ್ಪಷ್ಟ ನಿಯಮಗಳಿದ್ದರೆ ಕಂಪೆನಿ ಸೆಕ್ರೆಟರಿಗಳ ಅವಶ್ಯಕತೆಯೇ ಇರುತ್ತಿರಲಿಲ್ಲ. ಅನಿಶ್ಚಿತತೆ, ಅಸ್ಪಷ್ಟತೆ ಇರುವಲ್ಲಿಯೇ ಇವರ ಕಾರ್ಯಕ್ಷೇತ್ರವಿರುತ್ತದೆ ಎಂದರು. 

ಚಲನಶೀಲತೆ ಇಲ್ಲದಿರುವ ಕಂಪೆನಿಗಳು ಬೆಳೆಯಲು ಸಾಧ್ಯವಿಲ್ಲ. ದೂರದೃಷ್ಟಿ ಹೊಂದಿರುವ ಕಂಪೆನಿ ಸೆಕ್ರೆಟರಿಗಳು ಸಂಸ್ಥೆಯನ್ನು ಮುನ್ನಡೆಸುತ್ತಾರೆ. ಕಂಪೆನಿಗಳ ಯಾವುದೇ ಪ್ರಮುಖ ನಿರ್ಧಾರದಲ್ಲಿ ಇವರ ಪಾತ್ರವಿರಬೇಕು ಎಂದರು.

ದೇಶದ ಆರ್ಥಿಕತೆಯ ಬೆಳವಣಿಗೆಗೆ ಕಾರ್ಯನಿರ್ವಹಿಸಿ: ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ಸಂಸ್ಥೆಯು ಉತ್ತಮ ಕೆಲಸ ಮಾಡುತ್ತಿದೆ. ಕಂಪೆನಿಗಳಲ್ಲಿ ಮಾತ್ರವಲ್ಲ ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಕಂಪೆನಿ ಸೆಕ್ರೆಟರಿಗಳು ಮಹತ್ವದ ಪಾತ್ರ ವಹಿಸಬೇಕು. ಸಮಾಜದ ಸಮಸ್ಯೆಗಳಿಗೆ ನಿಮ್ಮ ಮುಖಾಂತರ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಿ ಪರಿಹಾರದ ಭಾಗವಾಗಬೇಕು. ಕಂಪೆನಿ ಸೆಕ್ರೆಟರಿಗಳು ಆರ್ಥಿಕತೆಯ ಒಂದು ಭಾಗವಾಗಬೇಕು. ನಾಯಕತ್ವ ವಹಿಸುವ ಮೂಲಕ ಬದಲಾವಣೆಯನ್ನು ತನ್ನಿ ಎಂದು ಕರೆ ನೀಡಿದರು. 

ಅಭಿವೃದ್ಧಿಯ ಭಾಗವಾಗಬೇಕು: ಹಣಕಾಸು ಕೇವಲ ಲಾಭ, ನಷ್ಟದ ವಿಚಾರವಲ್ಲ. ಮತ್ತು ತತ್ವಶಾಸ್ತ್ರ ಕೇವಲ ಪಾಪ ಪುಣ್ಯಕ್ಕೆ ಸಂಬಂಧಿಸಿದ್ದಲ್ಲ. ಆರ್ಥಿಕತೆಯಲ್ಲಿ ಪಾಪಪುಣ್ಯವನ್ನು ಹಾಗೂ ತತ್ವಶಾಸ್ತ್ರದಲ್ಲಿ ಲಾಭ ನಷ್ಟವನ್ನು ನೋಡಬೇಕು. ವ್ಯವಸ್ಥೆಯೊಂದರ ಭಾಗವಾಗಿರುವ ನಾವು ಅದರ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಕೊಂಡು ಅಭಿವೃದ್ಧಿಯ ಭಾಗವಾಗಬೇಕು. ಸಾಕಷ್ಟು ಕಂಪೆನಿಗಳು ಲಾಭ ಮಾಡುವುದರ ಭರದಲ್ಲಿ ಕಾನೂನನ್ನು ಉಲ್ಲಂಘಿಸುತ್ತಾರೆ.

ಇದನ್ನು ಸರಿಪಡಿಸಲು ಕಂಪೆನಿ ಸೆಕ್ರೆಟರಿಗಳು ಅತ್ಯಗತ್ಯ. ಫಲಿತಾಂಶಗಳನ್ನು ಕಾಣಲು ನಿಮ್ಮದೇ ದಾರಿಯನ್ನು ಹುಡುಕಿಕೊಳ್ಳಬೇಕು. ನಿಮ್ಮಲ್ಲಿ ಬದಲಾವಣೆಯಾದರೆ, ಕಂಪೆನಿಗಳಲ್ಲಿ ಬದಲಾವಣೆಯಾಗುತ್ತದೆ. ಕಂಪೆನಿಗಳಲ್ಲಿ ಬದಲಾವಣೆಯಾದರೆ ಆರ್ಥಿಕತೆಯಲ್ಲಿ ಹಾಗೂ ಆರ್ಥಿಕತೆಯಲ್ಲಿ ಬದಲಾವಣೆಯಾದರೆ ಸಾಮಾನ್ಯ ವ್ಯಕ್ತಿಯ ಬದುಕಿನಲ್ಲಿಯೂ ಬದಲಾವಣೆ ತರಬಹುದು ಎಂದರು. ನೀವು ಸಾಮಾನ್ಯ ವ್ಯಕ್ತಿಯೊಂದಿಗೆ ನೇರವಾಗಿ ಸಂಬಂಧವನ್ನು ಹೊಂದಿದ್ದೀರಿ ಎಂದರು.

ಕಂಪೆನಿ ಸೆಕ್ರೆಟರಿಗಳ ಮೂಲಭೂತ ವಿಚಾರಗಳು ಸ್ಪಷ್ಟವಾಗಿದ್ದರೆ, ಕಂಪೆನಿಗಳಿಗೆ ಲಾಭ. ಕಂಪೆನಿಗಳಲ್ಲಿ ದಕ್ಷತೆ ಹಾಗೂ ಸಮಾನತೆ ಅಗತ್ಯ. ಸಮಾಜ ಎಲ್ಲರನ್ನೂ ಒಳಗೊಳ್ಳುವ ಅಗತ್ಯವಿದೆ ಎಂದರು. 

ಐಸಿಎಸ್‍ಐ ಅಧ್ಯಕ್ಷ ನಾಗೇಂದ್ರ. ಡಿ.ರಾವ್, ಉಪಾಧ್ಯಕ್ಷ ದೇವೇಂದ್ರ ವಿ.ದೇಶಪಾಂಡೆ, ಕಾರ್ಯದರ್ಶಿ ಆಶಿಶ್ ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News