ಸಕಲೇಶಪುರ: 'ಲವ್ ಜಿಹಾದ್ ಅಲ್ಲ ನಾಪತ್ತೆ ಪ್ರಕರಣ'; ಬಜರಂಗದಳದ ಆರೋಪಕ್ಕೆ ಯುವತಿಯ ಕುಟುಂಬದಿಂದ ಸ್ಪಷ್ಟನೆ
ಸಕಲೇಶಪುರ, ಜ.7: ಪಟ್ಟಣದ ಸೂಪರ್ ಬಝಾರ್ ಅಂಗಡಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ‘ಲವ್ ಜಿಹಾದ್’ ಅಲ್ಲ ನಾಪತ್ತೆ ಪ್ರಕರಣ ಎಂದು ಯುವತಿಯ ಕುಟುಂಬದ ಪ್ರಮುಖರು ಸ್ಪಷ್ಟನೆ ನೀಡಿದ್ದಾರೆ.
ಪಟ್ಟಣದ ಸೂಪರ್ ಬಝಾರ್ ಅಂಗಡಿ ಮಾಲಕ ಹನಿಟ್ರಾಪ್ ಮೂಲಕ ಹಿಂದೂ ಹುಡುಗಿಯರನ್ನು ಅನ್ಯಧರ್ಮಕ್ಕೆ ಸೆಳೆಯುತ್ತಿದ್ದಾರೆಂದು ಬಜರಂಗದಳದ ಕಾರ್ಯಕರ್ತರು ಆರೋಪಿಸಿ ಅಂಗಡಿಗೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟನೆ ನಡೆಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಕುಟುಂಬ ಪತ್ರಿಕೆಯೊಂದಿಗೆ ಮಾತನಾಡಿ, ‘ಸಣ್ಣ ಕಾರಣಕ್ಕಾಗಿ ತನ್ನ ಸ್ನೇಹಿತೆಯ ಮನೆಗೆ ಹೊಗಿದ್ದಳು. ನಾವು ನಾಪತ್ತೆಯಾಗಿದ್ದಾಳೆಂದು ಪಟ್ಟಣ ಠಾಣೆಗೆ ದೂರು ನೀಡಿದ್ದೆವು ಅಷ್ಟೇ’ ಎಂದು ಹೇಳಿದರು.
ಬಜರಂಗದಳದ ಕಾರ್ಯಕರ್ತರು ದುರುದ್ದೇಶದಿಂದ ಈ ಪ್ರಕರಣವನ್ನು ತಿರುಚಿ ಲವ್ ಜಿಹಾದ್ ಎಂದು ಹೇಳಿ ಊರಿನಲ್ಲಿ ವಿವಾದ ಸೃಷ್ಟಿಸಲು ಮುಂದಾಗಿದ್ದಾರೆ. ಸಕಲೇಶಪುರದ ಜನರು ಸಭ್ಯರು ಹಾಗೂ ಬುದ್ದಿವಂತರು. ಇವರ ಯಾವುದೇ ಕುತಂತ್ರಕ್ಕೆ ಒಳಗಾಗುವುದಿಲ್ಲ. ಇದೊಂದು ಮಿಸಿಂಗ್ ಪ್ರಕರಣ ಇವರ ಕೊಮುವಾದಿ ತೆವಳಿಗೆ ಯುವತಿಯ ಮಾನ ಹರಾಜು ಮಾಡುತ್ತಿದ್ದಾರೆ.
-ಮೋಹನ್, ವಕೀಲರು ಸಕಲೇಶಪುರ