ನಮ್ಮನ್ನು ಜೈಲಿನಲ್ಲಿ ನೋಡುವ ಆಸೆ ಇದ್ದರೆ ಕಳುಹಿಸಿ: ಸಿಎಂ ವಿರುದ್ದ ಹುಟ್ಟೂರಲ್ಲಿ ಡಿಕೆಶಿ ಗುಡುಗು

Update: 2022-01-10 05:31 GMT

ಬೆಂಗಳೂರು, ಜ.10: 'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಿಮಗೆ ನಮ್ಮನ್ನು ಜೈಲಿನಲ್ಲಿ ನೋಡುವ ಆಸೆ ಇದೆ, ನಮ್ಮನ್ನು ಜೈಲಿಗೆ ಹಾಕಿ, ಹಾಲು ಕುಡಿದು ನಿಮ್ಮ ಹೊಟ್ಟೆ ತಣ್ಣಗೆ ಮಾಡಿಕೊಳ್ಳಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.

ರವಿವಾರ ಸಂಗಮದಿಂದ ಆರಂಭವಾದ ನೀರಿಗಾಗಿ ಪಾದಯಾತ್ರೆಯ ಮೊದಲದಿನ ಡಿ.ಕೆ.ಶಿವಕುಮಾರ್ ಅವರ ಹುಟ್ಟೂರು ದೊಡ್ಡಾಲಹಳ್ಳಿ ತಲುಪುವ ವೇಳೆಗೆ ರಾತ್ರಿಯಾಗಿತ್ತು. ಈ ವೇಳೆ ಗ್ರಾಮಸ್ಥರು ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನೀರಿನ ವಿಚಾರದಲ್ಲಿ ತಮಿಳುನಾಡಿನವರು ರಾಜಕಾರಣಕ್ಕೆ ಕ್ಯಾತೆ ತೆಗೆಯುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ನಮ್ಮ ಹೋರಾಟಕ್ಕೆ ಕ್ಯಾತೆ ತೆಗೆಯುತ್ತಿರುವ ಈ ಬಿಜೆಪಿ ಹಾಗೂ ಜೆಡಿಎಸ್ ನವರು ದೇಶದ್ರೋಹಿಗಳು ಹಾಗೂ ರಾಜ್ಯದ ಜನರ ದ್ರೋಹಿಗಳಲ್ಲವೇ ಎಂದು ತಾವು ತೀರ್ಮಾನ ಮಾಡಬೇಕು ಎಂದು ಹೇಳಿದರು.

ನಾನು ಈ ಗಡ್ಡ ಬಿಟ್ಟಿದ್ದು, ತಿಹಾರ್ ಜೈಲಿನಲ್ಲಿ. ಈ ಗಡ್ಡ ತೆಗೆಯಬೇಕು ಎಂದರೆ ನೀವೇ ಮುಕ್ತಿ ಕೊಡಿಸಬೇಕು. ನಾನು ಚುನಾವಣೆಯಲ್ಲಿ ಬಂದು ಮತ ಕೇಳಲು ಸಮಯವಿಲ್ಲ, ಇಲ್ಲಿರುವ ಪ್ರತಿಯೊಬ್ಬರು ನೀವೇ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಎಂದು ಅವರು ನುಡಿದರು.

ಸರಕಾರದವರು ಇಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ನನ್ನನ್ನು ಮತ್ತೆ ಜೈಲಿಗೆ ಹಾಕಲು ಷಡ್ಯಂತ್ರ ಮಾಡುತ್ತಿದೆ. ಆದರೆ, ಅದಕ್ಕೆಲ್ಲ ಹೆದರುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಕೋವಿಡ್ ಬಂದು ಇಲ್ಲಿ ಯಾರಾದರೂ ಸತ್ತಿದ್ದಾರಾ? ನಮ್ಮ ಕಾರ್ಯಕ್ರಮ ನಿಲ್ಲಿಸಲು ಕಾನೂನು ತಂದಿದ್ದೀರಿ. ನನ್ನ ಹಾಗೂ ಸುರೇಶ್ ಜತೆಗೆ ಮಠಾಧೀಶರು, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ 100 ಶಾಸಕರಿದ್ದರು. ಮೊದಲು ನೀವು ನಮ್ಮನ್ನೆಲ್ಲ ಬಂಧಿಸಿ, ಪ್ರಕರಣ ದಾಖಲಿಸಿ ಎಂದು ನಾನು ಗೃಹ ಸಚಿವ ಸಚಿವರಿಗೆ ಹೇಳಿದ್ದೇನೆ ಎಂದು ಡಿಕೆಶಿ ಸವಾಲು ಹಾಕಿದರು.

ಇಲ್ಲಿ ಯಾರ್ಯಾರು ಬಂದಿದ್ದಾರೆ ಎಂಬ ವಿಡಿಯೋ ಕಳುಹಿಸಿಕೊಡುತ್ತೇನೆ. ಎಲ್ಲರ ಮೇಲೂ ಪ್ರಕರಣ ದಾಖಲಿಸಿ. ಎಲ್ಲರನ್ನು ಜೈಲಿಗೆ ಹಾಕಿ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ನನ್ನನ್ನು ಸಾಕಿದ್ದೀರಿ, ಸುರೇಶ್ ನನ್ನು ಸಂಸತ್ತಿಗೆ ಕಳುಹಿಸಿದ್ದೀರಿ. ನಾವು, ನಮ್ಮೆಲ್ಲ ನಾಯಕರು ಒಂದು ಸಂಕಲ್ಪ ಮಾಡಿ, ರಾಜ್ಯಕ್ಕೆ ನಮ್ಮ ಕೈಲಾದ ಕೊಡುಗೆ ಕೊಡಲು ಈ ಹೋರಾಟಕ್ಕೆ ಕೈ ಹಾಕಿದ್ದೇವೆ ಎಂದು ಅವರು ಹೇಳಿದರು.

ನಾವು ಇಂತಹ ಹೋರಾಟ, ಸಭೆ ಮಾಡುವಂತಿಲ್ಲ ಎಂದು ಸರಕಾರ ಕರ್ಫ್ಯೂ ಜಾರಿ ಮಾಡಿದೆ. 5 ಜನರ ಮೇಲೆ ಇರುವಂತಿಲ್ಲ, ಯಾರೂ ಅಂಗಡಿ ಮುಂಗಟ್ಟು ತೆರೆಯುವಂತಿಲ್ಲ. ನಾನು ಬಹಿರಂಗ ಸಭೆ ಇಟ್ಟುಕೊಂಡಿಲ್ಲ. ನಮ್ಮ ತಾಯಂದಿರು ಕಾಯ್ದು ಕೂತಿದ್ದಾರೆ. ಹೀಗಾಗಿ ಮಾತನಾಡುತ್ತಿದ್ದೇನೆ. ನಮ್ಮ ತಾಯಂದಿರು ಇವತ್ತಿನ ರೀತಿ ಯಾವತ್ತೂ ಸಂಭ್ರಮಿಸಿಲ್ಲ ಎಂದು ಅವರು ನುಡಿದರು.

ನಿಮಗೆ ಮೇಕೆದಾಟು ನೀರು ಅಗತ್ಯವಿಲ್ಲ, ಶಿಂಷಾ ಹಾಗೂ ಅರ್ಕಾವತಿ ನದಿಯಿಂದ ನೀರು ತಂದು ಕೆರೆ ತುಂಬಿಸಿದ್ದೇವೆ. 12 ಅಡಿ ರಸ್ತೆ, 50 ಅಡಿ ರಸ್ತೆಯಾಗಿವೆ. ನಿಮ್ಮ ಆಸ್ತಿ ಬೆಲೆ ಹೆಚ್ಚಿಸಿದ್ದೇವೆ. ನಾನು ಇದುವರೆಗೂ ಯಾರಿಗಾದರೂ ಮೋಸ ಮಾಡಿದ್ದೀನಾ? ಕೆಡಕು ಮಾಡಿದ್ದೀನಾ? ನನ್ನನ್ನು ಜೈಲಿಗೆ ಕಳುಹಿಸಿದಾಗ ನೀವು ನೀಡಿದ ಬೆಂಬಲ, ಮಾಡಿದ ಹೋರಾಟ ಮರೆಯಲು ಸಾಧ್ಯವಿಲ್ಲ ಎಂದು ಅವರು ಭಾವುಕರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News