ಎರಡನೇ ವಾರವೂ ರಾಜ್ಯದಲ್ಲಿ ಕರ್ಫ್ಯೂ ಮುಂದುವರಿಕೆ; ಜನಸಂಚಾರ ವಿರಳ

Update: 2022-01-15 12:45 GMT

ಬೆಂಗಳೂರು, ಜ.15: ಕೋವಿಡ್ ಮೂರನೇ ಅಲೆ ಹಿನ್ನೆಲೆ ರಾಜ್ಯಾದ್ಯಂತ ಎರಡು ದಿನಗಳ ಕಾಲ ಕೋವಿಡ್ ಮಾರ್ಗಸೂಚಿ ಅನ್ವಯ ವಾರಾಂತ್ಯ ಕರ್ಫ್ಯೂ ಚಾಲ್ತಿಯಲ್ಲಿದ್ದು, ವಾಹನ ಹಾಗೂ ಜನಸಂಚಾರ ವಿರಳವಾಗುತ್ತು.  

ಸೋಂಕಿನ ಪ್ರಮಾಣ ತಗ್ಗಿಸುವ ಸಲುವಾಗಿ ರಾಜ್ಯದ ವ್ಯಾಪ್ತಿಯಲ್ಲಿ ಸತತ ಎರಡನೆ ವಾರದಲ್ಲಿಯೂ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದು, ರಾಜಧಾನಿ ಬೆಂಗಳೂರು ಒಳಗೊಂಡಂತೆ ಜಿಲ್ಲಾ ಕೇಂದ್ರಗಳು ಜನಜಂಗುಳಿ ಇಲ್ಲದೆ ನಿಶಬ್ದವಾಗಿ ಕಂಡವು.

ಶುಕ್ರವಾರ ರಾತ್ರಿಯಿಂದ ರಾಜ್ಯದ ಎಲ್ಲೆಡೆ ವಾರಾಂತ್ಯ ಕರ್ಫ್ಯೂಆರಂಭಗೊಂಡಿತ್ತು. ಶನಿವಾರ ಬೆಳಗ್ಗೆ ಆಸ್ಪತ್ರೆ, ಔಷಧಿ ಮಳಿಗೆ, ಕಿರಾಣಿ ಅಂಗಡಿ, ತರಕಾರಿ, ಹಣ್ಣು-ಹಂಪಲು, ಎಳನೀರು ಮತ್ತು ಹೂವಿನ ಅಂಗಡಿಗಳು ಎಂದಿನಂತೆ ತೆರೆದಿದ್ದವು.

ಮತ್ತೊಂದೆಡೆ ಹೊಟೇಲ್‍ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ, ಪ್ರತಿನಿತ್ಯದಂತೆ ಕೆಲ ಬಸ್‍ಗಳ ಸಂಚಾರ ಮತ್ತು ಎಪಿಎಂಸಿ ಕಚೇರಿಯಲ್ಲಿ ವ್ಯಾಪಾರ-ವಹಿವಾಟು ನಡೆಯಿತು. ಆದರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

ವಿವಿಧ ರಸ್ತೆಗಳಲ್ಲಿ ಪೊಲೀಸರು ಸಂಚಾರ ನಡೆಸಿ, ಧ್ವನಿವರ್ಧಕದ ಮೂಲಕ ವಾರಾಂತ್ಯ ಕರ್ಫ್ಯೂನಿಯಮ ಪಾಲಿಸಬೇಕು ಮನವಿ ಮಾಡಿದರು. ಮಾಸ್ಕ್ ಧರಿಸದೆ ವ್ಯಾಪಾರ ಮಾಡುತ್ತಿದ್ದ ಮಹಿಳೆಯರು ಮತ್ತು ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಎಂದು ಕೋವಿಡ್ ಕುರಿತು ಜಾಗೃತಿ ಮೂಡಿಸಿದರು.

ರಾಜಧಾನಿಯಲ್ಲಿ ತಗ್ಗಿದ ಜನರ ಓಡಾಟ

ನಿತ್ಯ ಜನಜಂಗುಳಿಯಿಂದ ಕೂಡಿದ್ದ ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಶಿವಾಜಿನಗರ, ಶಾಂತಿನಗರ, ಸ್ಯಾಟ್‍ಲೈಟ್ ಸೇರಿದಂತೆ ಇನ್ನಿತರೆ ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುವ ದೃಶ್ಯ ಕಂಡಿತು.

ಬಿಎಂಟಿಸಿ ಬಸ್‍ಗಳ ಸಂಖ್ಯೆಯೂ ತೀರ ಕಡಿಮೆ ಇದ್ದ ಕಾರಣ ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿತ್ತು. ಕೇವಲ ತುರ್ತು ಸೇವೆಗಷ್ಟೇ ಅವಕಾಶ ಕಲ್ಪಿಸಲಾಗಿದ್ದು, ಭಾಗಶಃ ಬಸ್‍ಗಳು ಘಟಕಗಳಲ್ಲಿ ನಿಂತಿದ್ದವು.

ಆದರೆ, ಮೆಟ್ರೋ ಸಂಚಾರಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಜನರ ತುರ್ತು ಸೇವೆಗಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶನಿವಾರ ಬೆಳಗ್ಗೆ 8 ಗಂಟೆಯಿಂದ ಮೆಟ್ರೋ ಓಡಾಟ ಪ್ರಾರಂಭವಾಗಿದ್ದು, ರಾತ್ರಿ 9 ಗಂಟೆಯವರೆಗೆ ಇತ್ತು.

ಕರ್ಫ್ಯೂ ಅವಧಿ

ಜ.14ರ ರಾತ್ರಿ 10 ಗಂಟೆಯಿಂದ ಜ. 17ರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂಜಾರಿಯಲ್ಲಿರಲಿದೆ.

ಹಲವು ವಾಹನಗಳು ಜಪ್ತಿ

ವಾರಾಂತ್ಯ ಕರ್ಫ್ಯೂನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿ, ಕಾರಣವಿಲ್ಲದೆ, ಹೊರಗೆ ಬಂದ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಶನಿವಾರ ಸುಮಾರು 200 ವಾಹನಗಳನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಮುಖವಾಗಿ ಪಶ್ಚಿಮ ವಿಭಾಗದಲ್ಲಿ 103 ದ್ವಿಚಕ್ರ ವಾಹನಗಳು, 10 ಆಟೊಗಳು, 8 ಕಾರುಗಳು ಸೇರಿ 131 ವಾಹನ ಜಪ್ತಿ ಮಾಡಿದರೆ, ಉತ್ತರ ವಿಭಾಗದಲ್ಲಿ 17 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.

ಚಿಕ್ಕಮಗಳೂರು: ಪೊಲೀಸರು ಅಗತ್ಯವಸ್ತುಗಳ ಅಂಗಡಿ ಮುಂಗಟ್ಟುಗಳನ್ನು ಹೊರತುಪಡಿಸಿದ ಉಳಿದಂತೆ ಅಂಗಡಿ ಮುಂಗಟ್ಟುಗಳನ್ನು ರಾತ್ರಿಯೇ ಬಂದ್ ಮಾಡಿಸಿದರು. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರನ್ನು ತಡೆದು ಮನೆಗೆ ಕಳಿಸಿದರು.

ಶನಿವಾರ ಬೆಳಗ್ಗೆಯೇ ರಸ್ತೆಗಿಳಿದ ಪೊಲೀಸರು ಅನಗತ್ಯ ಸಂಚಾರ ನಡೆಸುತ್ತಿದ್ದ ವಾಹನ ಸವಾರರನ್ನು ತಡೆದರು. ತುರ್ತು ಕೆಲಸಗಳಿಗೆ ತೆರಳುವ ವಾಹನ ಸವಾರರನ್ನು ಸೂಕ್ತ ದಾಖಲೆಗಳನ್ನು ಪ್ರದರ್ಶಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಗತ್ಯವಸ್ತುಗಳ ಅಂಗಡಿ ಮುಂಗಟ್ಟುಗಳನ್ನು ಹೊರತುಪಡಿಸಿದಂತೆ ಇತರ ಅಂಗಡಿ ಮುಂಗಟ್ಟುಗಳು ಶನಿವಾರ ಬಾಗಿಲು ಹಾಕಿದ್ದವು. ಚಿಕ್ಕಮಗಳೂರು ನಗರದ ಎಂಜಿ ರಸ್ತೆ, ಐಜಿ ರಸ್ತೆ, ಮಾರ್ಕೆಟ್ ರಸ್ತೆ ಸೇರಿದಂತೆ ಇತರ ಪ್ರಮುಖ ರಸ್ತೆಗಳಲ್ಲಿನ ಬಟ್ಟೆ ಅಂಗಡಿ, ಗೃಹಪಯೋಗಿ ವಸ್ತುಗಳ ಅಂಗಡಿ, ಮೊಬೈಲ್ ಶಾಪ್‍ಗಳು ಸೇರಿದಂತೆ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News