ಪತ್ನಿಯನ್ನು ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
ಕಲಬುರಗಿ, ಜ.15: ಕಲಬುರಗಿ ನಗರದ ಹೀರಾಪುರ ಬಡಾವಣೆಯಲ್ಲಿ ಪತ್ನಿಯನ್ನು ಖಾರ ಕುಟ್ಟುವ ಹಾರೆಯಿಂದ ಹೊಡೆದು ಹತ್ಯೆ ಮಾಡಿದ ಆರೋಪಿ ಪತಿಗೆ ಕಲಬುರಗಿಯ 3ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಅಫಜಲಪುರ ತಾಲೂಕಿನ ರೇವೂರ್ ಗ್ರಾಮದ ಸಂತೋಷ ಅಣ್ಣಾರಾಯ ಪಾಟೀಲ ಶಿಕ್ಷೆಗೆ ಒಳಗಾದವ. ಪತ್ನಿ ಸವಿತಾ ಕೊಲೆಯಾದವರು. ಹಲವು ವರ್ಷಗಳಿಂದ ಈ ದಂಪತಿ ಹೀರಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೌಟುಂಬಿಕ ಕಲಹದ ಕಾರಣ ಈ ಹಿಂದೆ ಸಂತೋಷ ಪೊಲೀಸ್ ಠಾಣೆ ಮೆಟ್ಟಿಲು ಹತ್ತಬೇಕಾಯಿತು.
ತನ್ನನ್ನು ಜೈಲಿಗೆ ಕಳುಹಿಸಲು ಹೊಂಚು ಹಾಕಿದ್ದಾಳೆ ಎಂಬ ಕೋಪದಿಂದ ಸಂತೋಷನು ಖಾರ ಕುಟ್ಟುವ ಹಾರೆಯಿಂದ ಪತ್ನಿಯ ತಲೆ, ಕಿವಿಗೆ ಹೊಡೆದಿದ್ದ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಕುರಿತು ಗ್ರಾಮೀಣ ಪೆÇಲೀಸ್ ಠಾಣೆಯ ಇನ್ಸ್ಪೆಕ್ಟರ್ ವಾಜೀದ್ ಪಟೇಲ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಆರೋಪಿ ಸಂತೋಷ್ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮೃತಳ ಮಕ್ಕಳಿಗೆ ಪರಿಹಾರವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ಕೂಡ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ 3ನೆ ಹೆಚ್ಚುವರಿ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.