ದೇವನೂರ ಮಹಾದೇವ ಮೌನ ಬಂಡಾಯದ ಸಾಹಿತಿ: ಪ್ರೊ.ಕೆ.ಎಂ.ಪ್ರಸನ್ನಕುಮಾರ್

Update: 2022-01-15 18:04 GMT

ಮಂಡ್ಯ: ದೇವನೂರ ಮಹಾದೇವ ಬಂಡಾಯಕ್ಕೆ ದೊಡ್ಡ ಹೆಸರು.  ಆದರೂ ಇವರದು ಅಬ್ಬರವಿಲ್ಲದ ಬಂಡಾಯ. ತಣ್ಣನೆಯ, ನೇರವಾದ, ಪರಿಣಾಮಕಾರಿಯಾಗಿ ಓದುಗರ ಒಡಲಾಳವನ್ನು ಕಲಕುವ ಮೌನ ಬಂಡಾಯ ಎಂದು ಮೈಸೂರಿನ ಸಿದ್ದಾರ್ಥನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ  ಪ್ರೊ. ಕೆ.ಎಂ.ಪ್ರಸನ್ನಕುಮಾರ್ ಕೆರಗೋಡು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಎಸ್ಪಿ ಕಚೇರಿ ಪಕ್ಕದ ಕನ್ನಡ ಭವನ ಆವರಣದಲ್ಲಿ ಹಮ್ಮಿಕೊಂಡಿದ್ದ ದೇವನೂರು ಮಹಾದೇವ ಅವರ ಬದುಕು ಮತ್ತು ಸಾಧನೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವನೂರು ಮಹಾದೇವ ಅವರು ಒಂದೇ ಕ್ಷೇತ್ರಕ್ಕೆ ಸೀಮಿತಗೊಳಿಸುವ ವ್ಯಕ್ತಿಯಲ್ಲ. ಮಹತ್ವದ ಕಥೆಗಾರರಾಗಿ, ಕಾದಂಬರಿಕಾರರಾಗಿ ಶ್ರೇಷ್ಠ ಸಾಹಿತ್ಯ ಕೃತಿಯನ್ನು ನೀಡಿದಂತಹ ವ್ಯಕ್ತಿತ್ವದವರು. ತಮ್ಮ ಸಾಹಿತ್ಯದ ಮೂಲಕ ಹೊಸ ಸಾಕ್ಷಿಪ್ರಜ್ಞೆಯನ್ನು ಹುಟ್ಟುಹಾಕಿದ್ದಾರೆ. ಇವರ ಬಂಡಾಯದ ಬಗ್ಗೆ ಸಾಹಿತಿ ಮ.ನ.ಜವರಯ್ಯ ಅವರು ಹೇಳಿರುವಂತೆ ಡಾ. ಸಿದ್ಧಲಿಂಗಯ್ಯನವರು ಬಂಡಾಯದ ಅಬ್ಬರದಲ್ಲಿ ಕಳೆದುಹೋದರೆ, ದೇವನೂರು ಮಹಾದೇವ ಮೌನದಲ್ಲಿ ಪಡೆದುಕೊಂಡರು ಎಂಬ ಮಾತಿನಲ್ಲಿ ಸತ್ಯವಿದೆ ಎಂದರು.

ದೇವನೂರರು ಬರಹದಲ್ಲಿ ಕಳೆದುಹೋಗದೆ ಸಂಘಟನೆಯ ಮೂಲಕ, ಪರೋಕ್ಷ ರಾಜಕಾರಣದ ಮೂಲಕ ಸದಾ ಸಕ್ರಿಯವಾಗಿದ್ದಾರೆ. ಸಾಹಿತ್ಯದ ನೆಲೆಯಲ್ಲಿ, ವೈಯಕ್ತಿಕ ನೆಲೆಯಲ್ಲಿ, ಗಟ್ಟಿ ನೆಲೆಯನ್ನು ಹೊಂದಿರುವ ಪ್ರಾಮಾಣಿಕ ಸಾಕ್ಷಿಪ್ರಜ್ಞೆಯಾಗಿ  ಕಂಡುಬರುತ್ತಾರೆ. ಅವರ ಒಡಲಾಳ, ಎದೆಗೆ ಬಿದ್ದ ಅಕ್ಷರ, ಕುಸುಮಬಾಲೆ ಇಲ್ಲಿನ ಪಾತ್ರಗಳು ಸಾಹಿತ್ಯದ ಗಟ್ಟಿತನವನ್ನು ಪ್ರಚುರಪಡಿಸುತ್ತವೆ ಎಂದು ಅವರು ಹೇಳಿದರು.

ಅವರ ಹಲವು ಕಥೆಗಳಲ್ಲಿ ಹಳ್ಳಿಯ ದೇಸಿತನ, ಮೌನವಾಗಿ ತಳಮಳಗೊಳಿಸುವಂತಹ ಬಂಡಾಯ ಕಂಡುಬಂದರೆ, ಇನ್ನು ಕೆಲವಲ್ಲಿ ವಿನೋದಾತ್ಮಕ ವಿಷಯಗಳು ಪ್ರಸ್ತುತಗೊಳ್ಳುತ್ತದೆ. ಎಲ್ಲೂ ಕಂಡು ಬರದ ಮಹತ್ವದ ಜೀವನಾನುಭವ ತಿಳಿಸುವ ಶ್ರೇಷ್ಠ  ಸಾಹಿತ್ಯ ಕಲಾಕೃತಿಗಳನ್ನು ನೀಡಿದ ಅದ್ಭುತ ವ್ಯಕ್ತಿಯಾಗಿ ಕಂಡುಬರುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ.ರವಿಕುಮಾರ್ ಚಾಮಲಾಪುರ ಮಾತನಾಡಿ, ಇದೀಗ ತಾವು ಎರಡನೆಯ ಅವಧಿಗೆ ಅಧ್ಯಕ್ಷರಾಗಿದ್ದು ಕಸಾಪ ಸದಸ್ಯರ ಸಲಹೆ ಸೂಚನೆಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು . ಬೌದ್ಧಿಕವಾಗಿ, ಸಾಹಿತ್ಯಕವಾಗಿ, ನಾಡು-ನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪರಿಷತ್ತು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸಾಹಿತ್ಯಾಸಕ್ತರು ಸಲಹೆ ನೀಡಬೇಕೆಂದು ಕೋರಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿಧರಣೇಂದ್ರಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತ ಬಿ.ಪಿ.ಪ್ರಕಾಶ್, ಮಂಡ್ಯ ತಾಲೂಕು ಕಸಾಪ ಅಧ್ಯಕ್ಷ ಮಂಜು ಮುತ್ತೇಗೆರೆ, ನಗರ ಕಸಾಪ ಘಟಕ ಅಧ್ಯಕ್ಷೆ ಸುಜಾತ ಕೃಷ್ಣ, ಎಂ.ಬಿ.ರಮೇಶ್, ಹುಸ್ಕೂರು ಕೃಷ್ಣೇಗೌಡ, ಧನಂಜಯ ದರಸಗುಪ್ಪೆ, ಭಾಸ್ಕರ್, ಕೆ.ಪಿ.ಬಾಬು, ಶಿವಲಿಂಗಯ್ಯ ಇತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News