ದೇಶದ ಆರ್ಥಿಕತೆಗೆ ಭವಿಷ್ಯದಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಾಗಿರಲಿದೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-01-16 17:38 GMT

ಬೆಂಗಳೂರು, ಜ.16: ಭವಿಷ್ಯದಲ್ಲಿ ದೇಶದ ಆರ್ಥಿಕತೆಯಲ್ಲಿ ಕರ್ನಾಟಕ ದೊಡ್ಡ ಪಾತ್ರವನ್ನು ವಹಿಸಲಿದೆ ಹಾಗೂ ಸ್ಟಾರ್ಟ್ ಅಪ್ ಸೆಲ್ ಮೂಲಕ ಮಾರ್ಗದರ್ಶನ, ವೈಜ್ಞಾನಿಕ ಬೆಂಬಲ ನೀಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.  

ರವಿವಾರ ನಗರದಲ್ಲಿ ಸ್ಟಾರ್ಟ್ ಅಪ್ ದಿನಾಚರಣೆಯ ಅಂಗವಾಗಿ ಆನ್‍ಲೈನ್ ಮೂಲಕ ಸಂದೇಶ ನೀಡಿದ ಬೊಮ್ಮಾಯಿ ಅವರು, ದೇಶದ 54000 ಸ್ಟಾರ್ಟ್ ಅಪ್‍ಗಳಲ್ಲಿ 13000 ಕರ್ನಾಟಕ ರಾಜ್ಯದಲ್ಲಿ ಪ್ರಾರಂಭವಾಗಿರುವುದು ಹೆಮ್ಮೆಯ ವಿಷಯ. ಸ್ಟಾರ್ಟ್ ಅಪ್ ಗಳ ಸ್ಥಾಪನೆಗೆ ಉತ್ತೇಜನಕ್ಕಾಗಿ ರಾಜ್ಯ ಸರಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದು, ಸ್ಟಾರ್ಟ್ ಅಪ್ ಸೆಲ್ ಮೂಲಕ ಮಾರ್ಗದರ್ಶನ, ವೈಜ್ಞಾನಿಕ ಬೆಂಬಲ ನೀಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ತಿಳಿಸಿದರು. 

ಈ ಮೂಲಕ ನವಭಾರತಕ್ಕಾಗಿ ನವಕರ್ನಾಟಕ ನಿರ್ಮಾಣದ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಗುವುದು ಎಂದು ಹೇಳಿದರು.

ಪ್ರಧಾನಮಂತ್ರಿಯವರ ಅಭಿಲಾಷೆಯಂತೆ ಸ್ಟಾರ್ಟ್ ಅಪ್ ದಿನಾಚರಣೆಯನ್ನು ರಾಜ್ಯದಲ್ಲಿ ರವಿವಾರ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಬರುವ ವರ್ಷದಲ್ಲಿ ಸರಕಾರ ನವೋದ್ಯಮಗಳಿಗೆ, ಉದ್ಯಮಶೀಲತೆಗೆ, ವೈಜ್ಞಾನಿಕ ಚಿಂತನೆಗೆ ಸಂಪೂರ್ಣ ಬೆಂಬಲ ನೀಡುವುದು ಎಂದು ತಿಳಿಸಿದರು. ಸ್ಟಾರ್ಟ್ ಅಪ್ ಗಳಲ್ಲಿ ತೊಡಗಿರುವ ರಾಜ್ಯದ ಎಲ್ಲ ಯುವಕರ ಪರವಾಗಿ ಪ್ರಧಾನಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. 

ನವೋದ್ಯಮಿಗಳಿಗೆ ಆರ್ಥಿಕ ನೆರವು: ಎಲಿವೇಟ್ 100, ಎಸ್ ಸಿಎಸ್‍ಟಿಯವರಿಗೆ ಎಲಿವೇಟ್ ಉನ್ನತಿ ಕಾರ್ಯಕ್ರಮಗಳ ಮೂಲಕ ನವೋದ್ಯಮಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಅಮೃತ ನವೋದ್ಯಮ ಯೋಜನೆಯಡಿ ಓಬಿಸಿ ಹಾಗೂ ಅಲ್ಪಸಂಖ್ಯಾತರ 75 ಸ್ಟಾರ್ಟ್ ಅಪ್ ಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಮಹಿಳಾ ನವೋದ್ಯಮಿಗಳಿಗೆ ಉತ್ತೇಜಿಸಲು ಎಲಿವೇಟ್ 25 ಸ್ಟಾರ್ಟ್ ಅಪ್ ಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ರಾಜ್ಯದಲ್ಲಿ 482 ಸ್ಟಾರ್ಟ್ ಅಪ್ ಗಳಿಗೆ 120 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಾಗಿದೆ ಎಂದು ತಿಳಿಸಿದರು.

ಬಿಯಾಂಡ್ ಬೆಂಗಳೂರು: ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ರಾಜ್ಯದ ಜಿಲ್ಲೆಗಳಲ್ಲಿ ನವೋದ್ಯಮ, ಐಟಿ ಬಿಟಿ, ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭಿಸುವ ಚಿಂತನೆಯಿದೆ. ರಾಜ್ಯದಲ್ಲಿ ನೂತನ ಆರ್ ಎಂಡ್ ಡಿ ನೀತಿಯನ್ನು ಪ್ರಾರಂಭಿಸಿ, ಸಣ್ಣ ಮಟ್ಟದ ಗ್ಯಾರೇಜಿನಿಂದ ಹಿಡಿದು ದೊಡ್ಡ ಕೈಗಾರಿಕೆವರೆಗೂ ವೈಜ್ಞಾನಿಕ ಸಂಶೋಧನೆಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಶಾಲೆಗಳಲ್ಲಿ ಸಂಶೋಧನೆ, ನವೋದ್ಯಮಕ್ಕೆ ಭದ್ರ ಬುನಾದಿ: ಶಾಲೆಗಳಲ್ಲಿ ವೈಜ್ಞಾನಿಕ ಚಿಂತನೆ, ಉದ್ಯಮಶೀಲತೆಗೆ ಉತ್ತೇಜನ ನೀಡಲು ಶಾಲೆಗಳ ಪಠ್ಯಪುಸ್ತಕದಲ್ಲಿ ಈ ವಿಷಯಗಳನ್ನು ಸೇರಿಸಲು ತೀರ್ಮಾನಿಸಲಾಗಿದೆ. 150 ಐಟಿಐಗಳನ್ನು ಉನ್ನತೀಕರಿಸಲಾಗಿದೆ. ಡಿಪ್ಲೊಮಾ ಕಾಲೇಜುಗಳನ್ನು ಉನ್ನತೀಕರಿಸಲು ಯೋಜಿಸಲಾಗಿದೆ. ಶಾಲೆ ಕಾಲೇಜುಗಳಲ್ಲಿ ವೈಜ್ಞಾನಿಕ ಚಿಂತನೆ ಸಂಶೋಧನೆ ಹಾಗೂ ನವೋದ್ಯಮಕ್ಕೆ ಭದ್ರ ಬುನಾದಿ ಹಾಕುವ ಮಹಾತ್ವಾಕಾಂಕ್ಷೆಯ ಯೋಜನೆಯನ್ನು ಸರಕಾರ ತರಲಿದೆ ಎಂದು ತಿಳಿಸಿದರು.

ರಫ್ತು ಪ್ರಮಾಣದಲ್ಲಿ ಹೆಚ್ಚಳ

‘ಕರ್ನಾಟಕ ಐಟಿಬಿಟಿ ಕ್ಷೇತ್ರದಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. 80 ರ ದಶಕದಲ್ಲಿ ಮೊದಲ ಸಾಫ್ಟ್ ವೇರ್ ಕಂಪೆನಿ ಕರ್ನಾಟಕದಲ್ಲಿ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ರಾಜ್ಯದಲ್ಲಿ ಈ ಕ್ಷೇತ್ರದಲ್ಲಿ ಬೆಳೆದಿದ್ದು, ಐಟಿಬಿಟಿಗಳ ರಫ್ತು ಕರ್ನಾಟಕದಿಂದ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ.’

ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News