ಕರಾವಳಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ, ಅಭಿವೃದ್ಧಿಗಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾಪ : ಸಚಿವ ಅಂಗಾರ

Update: 2022-01-17 10:18 GMT

ಮಂಗಳೂರು : ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ 28 ಹಾಗೂ ಬಂದರು ಇಲಾಖೆಗೆ ಸಂಬಂಧಿಸಿದ 98  ಬಂದರು ನಿರ್ಮಾಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತಿದೆ. ಈ ವಿಶೇಷವಾದ ಯೋಜನೆಗಳಿಂದ ಕರಾವಳಿ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕರಾವಳಿ ಕರ್ನಾಟಕ ಭಾಗದ ಮೀನುಗಾರರ ಸಮಸ್ಯೆಗಳು,  ಕುಂದುಕೊರತೆಗಳನ್ನು ಅರಿತು ಅವುಗಳನ್ನು ಬಗೆ ಹರಿಸಲು ಕಚೇರಿ ಆರಂಭಿಸಲಾಗಿದೆ  ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ತಿಳಿಸಿದ್ದಾರೆ.

ಅವರು ಇಂದು ನಗರದ ಸ್ಟೇಟ್ ಬ್ಯಾಂಕ್ ಬಳಿಯ ಹಳೆಬಂದರು ಬಂಗ್ಲೆಯಲ್ಲಿ ತಮ್ಮ ಕಚೇರಿಯನ್ನು ಉದ್ಘಾಟಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ತಲಪಾಡಿಯಿಂದ ಕಾರವಾರದವರೆಗಿನ ರಾಜ್ಯದ ಕರಾವಳಿಯ ಮೀನುಗಾರ ಬಂಧುಗಳ ಸಮಸ್ಯೆಗಳನ್ನು ನೂತನವಾಗಿ ಆರಂಭಿಸಲಾದ ಕಚೇರಿಯಲ್ಲಿ ಆಲಿಸಿ ಅವುಗಳಿಗೆ ಪರಿಹಾರ ಕಲ್ಪಿಸುವ ಯತ್ನ  ಮಾಡಲಾಗುವುದು, ಅದರಂತೆ ಉಡುಪಿ ಹಾಗೂ ಕಾರವಾರಗಳಿಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದು ಪರಿಹರಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ಅಭಿವೃದ್ಧಿಗೆ ಬದ್ಧವಾಗಿವೆ, ಸಾರ್ವಜನಿಕರು ಕೂಡ ಅದಕ್ಕೆ ಅಗತ್ಯ ಸಹಕಾರ ನೀಡಬೇಕು. ಜನರ ಅಪೇಕ್ಷೆ ಹಾಗೂ ಕಾಳಜಿಗೆ ಸರ್ಕಾರ ಸ್ಪಂದಿಸಲು ಸದಾ ಸಿದ್ಧವಿದೆ ಎಂದು ಅವರು ಹೇಳಿದರು.

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಅನುಕೂಲ ವಾಗುವಂತೆ ಈ ಕಚೇರಿಯನ್ನು ಆರಂಭಿಸಲಾಗಿದೆ. ಇದು ಬ್ರಿಟಿಷರ ಕಾಲದ ಬಂಗಲೆಯಾಗಿದ್ದು, ಶಿಥಿಲಗೊಂಡಿತ್ತು.  ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅದನ್ನು ನವೀಕರಿಸಲಾಗಿದೆ ಎಂದರು. ಪ್ರತಿ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕರನ್ನು ಈ ಕಚೇರಿಯಲ್ಲಿ ಭೇಟಿ ಮಾಡುವುದಾಗಿ ಅಂಗಾರ ತಿಳಿಸಿದ್ದಾರೆ.

ಶಾಸಕರಾದ ವೇದವ್ಯಾಸ್ ಕಾಮತ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್ ಸೇರಿದಂತೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News