ಬಂದ್ ವೇಳೆ ಸಾರ್ವಜನಿಕರ ಆಸ್ತಿ ನಷ್ಟ: ವಸೂಲಿ ಸಂಬಂಧ ವರದಿ ಸಲ್ಲಿಕೆಗೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2022-01-19 14:14 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.19: ರಾಜ್ಯದಲ್ಲಿ ನಡೆದ ಬಂದ್ ಚಳವಳಿ ಸಂದರ್ಭದಲ್ಲಿ ಆಗಿರುವ ಸಾರ್ವಜನಿಕ ಆಸ್ತಿ ನಷ್ಟವನ್ನು ಬಂದ್‍ಗೆ ಕರೆ ನೀಡಿದವರಿಂದ ವಸೂಲಿ ಮಾಡುವ ಸಂಬಂಧ ಹೈಕೋರ್ಟ್ ನಿರ್ದೇಶನಗಳ ಪ್ರಕಾರ ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

2018ರಲ್ಲಿ ಮಹಾದಾಯಿ ನ್ಯಾಯಾಧಿಕರಣ ತೀರ್ಪು ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್. ಅದೇರೀತಿ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ 2019ರಲ್ಲಿ ನಡೆದ ಪ್ರತ್ಯೇಕ ಬಂದ್‍ಗಳಿಂದ ಆಗಿರುವ ಸಾರ್ವಜನಿಕ ಆಸ್ತಿ ನಷ್ಟದ ಕುರಿತು ವರದಿಗೆ ಕೋರ್ಟ್ ಉಲ್ಲೇಖಿಸಿದೆ.

ಈ ಕುರಿತು ಸಲ್ಲಿಕೆಯಾಗಿರುವ ಎರಡು ಪ್ರತ್ಯೇಕ ಪಿಐಎಲ್ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರುತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ವೇಳೆ ಸರಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಎರಡೂ ಬಂದ್‍ಗಳ ವೇಳೆ ಉಂಟಾದ ಸಾರ್ವಜನಿಕ ಆಸ್ತಿನಷ್ಟದ ಪ್ರಮಾಣ ಅಂದಾಜಿಸಲು ಪ್ರತ್ಯೇಕ ಕ್ಲೇಮು ಕಮಿಷನರ್ ಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ವಿರೋಧಿಸಿ ನಡೆದ ಬಂದ್‍ನಿಂದ ಆಗಿರುವ ನಷ್ಟ ಅಂದಾಜಿಸಲು ನೇಮಿಸಿರುವ ಕ್ಲೇಮ್ ಕಮಿಷನರ್ ರಾಮನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಅಗತ್ಯ ಕಚೇರಿ ಮತ್ತು ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮತ್ತೊಂದು ಬಂದ್‍ಗೆ ಸಂಬಂಧಿಸಿದಂತೆ ಆಗಿರುವ ನಷ್ಟ ಅಂದಾಜಿಸಲು ನೇಮಿಸಿರುವ ಕ್ಲೇಮ್ ಕಮಿಷನರ್ ಕೂಡ ಕಾರ್ಯಪ್ರವೃತ್ತರಾಗಿದ್ದಾರೆ. ಕ್ಲೇಮು ಕಮಿಷನರ್ ಕಚೇರಿಗಳಿಂದ ಮಾಹಿತಿ ಪಡೆದು ವರದಿ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಸರಕಾರದ ಪರ ವಕೀಲರು ಮನವಿ ಮಾಡಿದರು.

ಇದಾದ ಬಳಿಕ ಮನವಿ ಪರಿಗಣಿಸಿದ ಪೀಠ, ಪ್ರಕರಣಗಳ ಸಂಬಂಧ ನ್ಯಾಯಾಲಯ ಕಳೆದ ವಾರ್ಷಿಕ ಸಾಲಿನ ಫೆ.25ರಂದು ನೀಡಿರುವ ನಿರ್ದೇಶಗಳ ಪ್ರಕಾರ ಬಂದ್‍ನಿಂದ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿದವರಿಂದಲೇ ನಷ್ಟದ ಮೊತ್ತವನ್ನು ವಸೂಲು ಮಾಡಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಕುರಿತು ವರದಿ ಸಲ್ಲಿಸಿ ಎಂದು ನಿರ್ದೇಶಿಸಿ, ಫೆ.7ಕ್ಕೆ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News