ಕಲಬುರಗಿ: ಅಂಬಿಗರ ಚೌಡಯ್ಯ- ಶ್ರೀ ರಾಮ ಫೋಟೋ ವಿವಾದ; ಎರಡು ಗುಂಪುಗಳ ನಡುವೆ ಘರ್ಷಣೆ, ನಿಷೇಧಾಜ್ಞೆ ಜಾರಿ
Update: 2022-01-20 17:15 GMT
ಕಲಬುರಗಿ: ಅಂಬಿಗರ ಚೌಡಯ್ಯ ಮತ್ತು ಶ್ರೀ ರಾಮ ಫೋಟೋ ಹಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿರುವ ಘಟನೆ ಗುರುವಾರ ನಗರದ ಶಹಬಾಜಾರ್ ನಾಕಾದಲ್ಲಿ ನಡೆದಿದೆ.
ಈ ಹಿಂದೆ ಚೌಕ್ ನಲ್ಲಿ ಅಂಬಿಗರ ಚೌಡಯ್ಯ ಫೋಟೋ ಇದ್ದು, ಬಡಾವಣೆಯ ಇನ್ನೊಂದು ಗುಂಪು ಚೌಕ್ ನಲ್ಲಿ ಶ್ರೀರಾಮ ಫೋಟೋ ಇರಬೇಕೆಂದು ಒತ್ತಾಯಿಸಿ ಫೋಟೋ ಹಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಬಳಿಕ ಸ್ಥಳಕ್ಕೆ ಚೌಕ್ ಪೊಲೀಸರು ಭೇಟಿ ನೀಡಿ, ವಾತಾವರಣ ತಿಳಿಗೊಳಿಸಲು ಯತ್ನಿಸಿದರು. ಘಟನೆ ವಿಕೋಪಕ್ಕೆ ತಿರುಗುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು, ಪಿಎಸ್ ಐ ಹುಸೇನ್ ಬಾಷಾ, ಬ್ರಹ್ಮಪುರ ಪಿಎಸ್ ಐ ಸೇರಿದಂತೆ ಹಲವು ಪೊಲೀಸ್ ಅಧಿಕಾರಿ ಭೇಟಿ ನೀಡಿದರು.
ಸದ್ಯ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.