ಕಲಬುರಗಿ: ಪಡಿತರಧಾನ್ಯ ಅಕ್ರಮ ಮಾರಾಟ; ಇಬ್ಬರಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
Update: 2022-01-21 14:09 GMT
ಕಲಬುರಗಿ, ಜ.21: ಪಡಿತರ ಧಾನ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪ ಸಾಬೀತಾದ್ದರಿಂದ ಇಬ್ಬರಿಗೆ ಕಲಬುರಗಿ 3ನೇ ಅಪರ ಜೆಎಂಎಫ್ಸಿ ಕೋರ್ಟ್, 5 ತಿಂಗಳು ಸಾದಾ ಜೈಲು ಶಿಕ್ಷೆ ಮತ್ತು ತಲಾ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬೆಲೂರು ಗ್ರಾಮದ ಶ್ರೀಮಂತ ಗುರುಲಿಂಗಪ್ಪ ಟೆಂಗಳಿ ಮತ್ತು ಬಸವರಾಜ ಪಾಟೀಲ ಶಿಕ್ಷೆಗೊಳಗಾದವರು. ಇವರು 2015ರ ಮಾ.5ರಂದು ಕಲಬುರಗಿ ನಗರದ ನೆಹರು ಗಂಜ್ ಪ್ರದೇಶದಲ್ಲಿ ಅಕ್ರಮವಾಗಿ ಪಡಿತರ ಗೋದಿ ಸಾಗಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದರು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದು, ಸರಕಾರದ ಪರವಾಗಿ ಶಿವಶರಣಪ್ಪ ಎಚ್. ನಾಟೇಕರ್ ವಾದ ಮಂಡಿಸಿದ್ದರು.