ಎಸಿಬಿಯನ್ನು ಲೋಕಾಯುಕ್ತದ ಅಧೀನಕ್ಕೆ ತನ್ನಿ: ನ್ಯಾ.ಪಿ. ವಿಶ್ವನಾಥ ಶೆಟ್ಟಿ ಒತ್ತಾಯ

Update: 2022-01-24 13:09 GMT
 ನ್ಯಾ.ಪಿ. ವಿಶ್ವನಾಥ ಶೆಟ್ಟಿ

ಬೆಂಗಳೂರು, ಜ.24: ಜನರ ಹಿತದೃಷ್ಟಿಯಿಂದ ಎಸಿಬಿಯನ್ನು ರಾಜ್ಯ ಲೋಕಾಯುಕ್ತದ ಅಧೀನಕ್ಕೆ ತಂದು, ಮೊದಲಿನಂತೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಒತ್ತಾಯಿಸಿದ್ದಾರೆ. 

ಜ.27ರಂದು ಲೋಕಾಯುಕ್ತ ಹುದ್ದೆಯಿಂದ ನಿವೃತ್ತರಾಗುತ್ತಿರುವ ಅವರು ಸೋಮವಾರ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.  

ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸರಕಾರದ ಅಧೀನದಲ್ಲಿ ಇರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಲೋಕಾಯುಕ್ತ ಒಂದು ಸ್ವತಂತ್ರ ಸಂಸ್ಥೆ. ಇದರ ಅಧೀನಕ್ಕೆ ಎಸಿಬಿಯನ್ನು ನೀಡಿದರೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಹೆಚ್ಚಿನ ಕೆಲಸ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು. 

ಈ ಮೊದಲು ಲೋಕಾಯುಕ್ತದ ಪೊಲೀಸ್ ವಿಭಾಗವೇ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರ ಹೊಂದಿತ್ತು. ಅದನ್ನು ಬದಲಿಸಿ ಎಸಿಬಿ ರಚಿಸಲಾಯಿತು. ಎಸಿಬಿ ಸರಕಾರದ ಅಧೀನದಲ್ಲಿ ಇರುವುದು ಸರಿಯಲ್ಲ. ಲೋಕಾಯುಕ್ತದ ಅಧೀನದಲ್ಲಿ ಇರುವುದು ಸರಿಯಾದ ವ್ಯವಸ್ಥೆ ಎಂದು ಹೇಳಿದರು.

ತಾನು ಲೋಕಾಯುಕ್ತ ಹುದ್ದೆಯ ಅಧಿಕಾರ ಸ್ವೀಕರಿಸಿದ ದಿನದಿಂದ ಈವರೆಗೆ 20,199 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. 2,677 ಇಲಾಖಾ ವಿಚಾರಣೆಗಳನ್ನು ಪೂರ್ಣಗೊಳಿಸಲಾಗಿದೆ. 13 ಸಾವಿರ ಇತರ ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ವಿವರಿಸಿದರು.

ತಪ್ಪಿತಸ್ಥ ಸರಕಾರಿ ನೌಕರರು ಮತ್ತು ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 12(3)ರ ಅಡಿಯಲ್ಲಿ 2,122 ಮತ್ತು ಸೆಕ್ಷನ್ 21(1)ರ ಅಡಿಯಲ್ಲಿ 587 ವರದಿಗಳನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಈ ಪೈಕಿ 1,226 ಪ್ರಕರಣಗಳಲ್ಲಿ ಕ್ರಮ ಕೈಗೊಂಡಿರುವ ಬಗ್ಗೆ ವರದಿ ಬರುವುದು ಬಾಕಿ ಇದೆ ಎಂದು ಲೋಕಾಯುಕ್ತರು ತಿಳಿಸಿದರು.

ಲೋಕಾಯುಕ್ತರ ಹುದ್ದೆ ಸರಕಾರಿ ನೌಕರಿಯೂ ಅಲ್ಲ, ಜನಪ್ರತಿನಿಧಿಯೂ ಅಲ್ಲ. ಸ್ವತಂತ್ರ ಸಾಂವಿಧಾನಿಕ ಸಂಸ್ಥೆ. ಈ ಕಾರಣದಿಂದ ಲೋಕಾಯುಕ್ತರು ಆಸ್ತಿ ವಿವರ ಸಲ್ಲಿಸಬೇಕಾದ ಅಗತ್ಯ ಇಲ್ಲ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

'ದಾಳಿ ಬಳಿಕ ಹುದ್ದೆಯ ಸೂಕ್ಮತೆ ತಿಳಿಯಿತು'
‘ಹೆಚ್ಚಿನ ಆದಾಯದ ಕೆಲಸ ಇದ್ದರೂ ಸೇವಾ ಮನೋಭಾವನೆಯಿಂದ ಲೋಕಾಯುಕ್ತ ಹುದ್ದೆಗೆ ಬಂದಿದ್ದೆ. ಬರುವಾಗ ಈ ಹುದ್ದೆಯ ಸೂಕ್ಮತೆ ತಿಳಿದಿರಲಿಲ್ಲ. ನನ್ನ ಮೇಲೆ ಮಾರಕಾಸ್ತ್ರದಿಂದ ದಾಳಿಯಾದ ಬಳಿಕವೇ ಹುದ್ದೆಯ ಸೂಕ್ಮತೆ ತಿಳಿಯಿತು.’ 
-ಪಿ.ವಿಶ್ವನಾಥ ಶೆಟ್ಟಿ, ಲೋಕಾಯುಕ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News