ಕಾಂಗ್ರೆಸ್ ಸಂಪರ್ಕದಲ್ಲಿರುವ ಬಿಜೆಪಿ ನಾಯಕರ ಮಾಹಿತಿ ಬಿಟ್ಟುಕೊಡಲ್ಲ: ಡಿ.ಕೆ. ಶಿವಕುಮಾರ್
ಬೆಂಗಳೂರು, ಜ.24: ಬಿಜೆಪಿ ಹಾಗೂ ಇತರೆ ಪಕ್ಷಗಳ ನಾಯಕರು ನಮ್ಮ ಜತೆ ಸಂಪರ್ಕದಲ್ಲಿರುವ ವಿಚಾರವನ್ನು ನಾವು ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ. ವಿಧಾನಪರಿಷತ್ ಹಾಗೂ ಶಾಸಕರ ವಿಚಾರ ಚರ್ಚೆ ಮಾಡಲು ಆಗಲ್ಲ. ಅವರ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಲ ಸಚಿವರು ಸೇರಿದಂತೆ ಬಿಜೆಪಿ ಮುಖಂಡರು ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸೋಮವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಜತೆ ಯಾರೆಲ್ಲಾ ಮಾತನಾಡುತ್ತಿದ್ದಾರೆ ಎಂದು ಸಚಿವರನ್ನೆ ಕೇಳಿ. ಈ ಪ್ರಶ್ನೆಯನ್ನು ನನ್ನ ಬಳಿ ಕೇಳುವ ಬದಲು ಅವರನ್ನೇ ಕೇಳಿ. ನನ್ನ ಬಳಿ ಯಾರು ಮಾತನಾಡುತ್ತಾರೆ ಎಂಬ ಮಾಹಿತಿಯನ್ನು ನಾನ್ಯಾಕೆ ಬಿಟ್ಟುಕೊಡಲಿ? ಇದರಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದು ಮುಖ್ಯ. ಇದು ರಾಜಕಾರಣದ ಒಂದು ಭಾಗ ಎಂದು ಅವರು ಹೇಳಿದರು.
ಪ್ರತಿಯೊಬ್ಬ ನಾಯಕರು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಾರೆ. ಜನ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಯಾವ ರೀತಿ ಸಂದೇಶ ನೀಡುತ್ತಾರೆ ಎಂಬುದರ ಮೇಲೆ ಅವರು ತೀರ್ಮಾನ ಮಾಡುತ್ತಾರೆ ಎಂದು ಶಿವಕುಮಾರ್ ತಿಳಿಸಿದರು.
ಮೇಕೆದಾಟು ಯೋಜನೆ ಜಾರಿ ಮಾಡಿದರೆ ಭವ್ಯ ಸ್ವಾಗತ: ‘ನಾವೇ ಮೇಕೆದಾಟು ಯೋಜನೆ ಮಾಡುತ್ತೇವೆ, ಕಾಂಗ್ರೆಸ್ನವರಿಗೆ ಅವಕಾಶ ನೀಡುವುದಿಲ್ಲ ಎಂಬ ಸಚಿವ ಸೋಮಣ್ಣ ಹೇಳಿಕೆ ಬಗ್ಗೆ ಪ್ರಸ್ತಾಪ ಮಾಡಿದಾಗ, ‘ಅವರನ್ನು ನಾನು ಅಭಿನಂದಿಸುತ್ತೇನೆ. ಈ ವಿಚಾರದಲ್ಲಿ ತಡ ಮಾಡುವುದು ಬೇಡ. ಹೇಗಿದ್ದರೂ ಬಿಜೆಪಿಯ ಡಬಲ್ ಇಂಜಿನ್ ಸರಕಾರ ಇದೆ ಎಂದರು.
ಜತೆಗೆ ಬಿಜೆಪಿಯ 25 ಸಂಸದರಿದ್ದಾರೆ. ಒಂದೇ ದಿನದಲ್ಲಿ ಅನುಮತಿ ಪಡೆಯುವ ಸಾಮರ್ಥ್ಯವಿರುವ ಬಲಿಷ್ಠ ಸರಕಾರವಿದೆ. ಅವರು ಈ ಕೆಲಸ ಮಾಡಲಿ, ನಾವು ಹೃತ್ಪೂರ್ವಕವಾಗಿ ಅವರನ್ನು ಅಭಿನಂದಿಸುತ್ತೇವೆ. ಯೋಜನೆಯ ಗುದ್ದಲಿ ಪೂಜೆಗೆ ನಾವು ಕೂಡ ಹೋಗುತ್ತೇವೆ. ಆ ಕಾರ್ಯಕ್ರಮಕ್ಕೆ ಸೋಮಣ್ಣ ಅವರನ್ನು ನಾನೇ ಭವ್ಯವಾಗಿ ಸ್ವಾಗತ ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದರು.
ಸಿಎಂ ಪೂರ್ಣಾವಧಿ ಬಗ್ಗೆ ನಮ್ಮದೇನೂ ತಕರಾರಿಲ್ಲ: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಆರು ತಿಂಗಳಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಅವರು ಸಂಭ್ರಮಾಚರಣೆ ಮಾಡುವುದಾದರೆ ಮಾಡಿಕೊಳ್ಳಲಿ. ಮೊದಲು ಮೇಕೆದಾಟು ಯೋಜನೆ ಜಾರಿಗೊಳಿಸಲಿ. ಅವರು 2023 ಮೇ 15 ರವರೆಗೂ ಅಧಿಕಾರದಲ್ಲಿರಲಿ. ಪೂರ್ಣಾವಧಿವರೆಗೂ ಸಿಎಂ ಆಗಿರಲಿ. ಅದಕ್ಕೆ ನಮ್ಮ ಯಾವುದೇ ತಕರಾರಿಲ್ಲ ಎಂದರು.
ನಾವು ಬಿಜೆಪಿ ನಾಯಕರಂತೆ ಮಾತನಾಡುವುದಿಲ್ಲ. ನಾಯಕತ್ವ ಬದಲಾವಣೆಗೆ ಅವರ ಪಕ್ಷದವರು ಪ್ರಯತ್ನಿಸುತ್ತಿರಬಹುದು. ಆದರೆ ಸರಕಾರ ಅಲುಗಾಡಿಸಲು ನಾವು ಪ್ರಯತ್ನಿಸುತ್ತಿಲ್ಲ, ಅದರ ಅಗತ್ಯವೂ ನಮಗಿಲ್ಲ ಎಂದು ಶಿವಕುಮಾರ್ ಹೇಳಿದರು.
ಅವೈಜ್ಞಾನಿಕ ನಡೆ ಯಾರದು?: ಕಾಂಗ್ರೆಸ್ನಿಂದ ಕೊರೋನ ನಿಯಮಗಳ ಉಲ್ಲಂಘನೆ ಆಗಿದೆ ಎಂಬ ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕೋವಿಡ್ ಸಮಯದಲ್ಲಿ ಸ್ವಿಮ್ಮಿಂಗ್ ಪೂಲ್ ಬಳಸದಂತೆ ನಿರ್ಬಂಧ ಹೇರಿದ್ದರೂ ಈಜಾಡಿದ್ದವರು ಯಾರು? ಎಲ್ಲ ಅಪಾರ್ಟ್ಮೆಂಟ್ಗಳಿಗೆ ನಿರ್ಬಂಧ ಹಾಕಿ ನಮ್ಮ ಮನೆಯಲ್ಲಿ ನಾವು ಮಕ್ಕಳ ಜತೆ ಈಜಾಡಬಹುದಾ? ಎಂದು ಪ್ರಶ್ನಿಸಿದರು.
ಮನೆಯಲ್ಲಿ ಗಂಡ, ಹೆಂಡತಿ, ಮಕ್ಕಳು, ಅಕ್ಕಪಕ್ಕದಲ್ಲಿ ಕೂತು ಸಿನಿಮಾ ನೋಡಬಹುದು, ಆದರೆ ಚಿತ್ರಮಂದಿರದಲ್ಲಿ ಒಂದು ಕುರ್ಚಿ ಬಿಟ್ಟು ಮತ್ತೊಂದು ಕುರ್ಚಿಯಲ್ಲಿ ಕೂರಬೇಕಂತೆ? ವಿಮಾನ, ಮೆಟ್ರೋ, ಕೆಎರ್ಸ್ಸಾಟಿಸಿ ಬಸ್ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕೂತು ಸಂಚಾರ ಮಾಡಬಹುದು, ಆದರೆ ಹೊಟೇಲ್ನಲ್ಲಿ ಮಾತ್ರ 50-50 ಅಂತರ ಕಾಯ್ದುಕೊಳ್ಳಬೇಕಂತೆ. ಇದು ಬ್ರಹ್ಮವಿದ್ಯೆನಾ? ಇದು ವೈಜ್ಞಾನಿಕ ನಿರ್ಧಾರವೇ? ಎಂದು ಅವರು ಪ್ರಶ್ನಿಸಿದರು.
ಈ ದೇಶಕ್ಕೆ ವಿದ್ಯಾವಂತರು, ಬುದ್ಧಿವಂತರು ಇಲ್ಲದಿದ್ದರೂ ನಡೆಯುತ್ತದೆ. ಆದರೆ, ಪ್ರಜ್ಞಾವಂತರು ಇರಬೇಕು. ನೈಟ್ ಕರ್ಫ್ಯೂನಿಂದ ಆಗುವ ಅನುಕೂಲವೇನು? ಹಗಲು ವೇಳೆ ಜತೆಯಲ್ಲಿ ಓಡಾಡಬಹುದಂತೆ, ರಾತ್ರಿ 9 ಗಂಟೆ ಮೇಲೆ ಜನ ಓಡಾಡುವಂತಿಲ್ಲ. ಕೆಲವರಿಗೆ ರಾತ್ರಿ 9 ಗಂಟೆ ಮೇಲೆ ವ್ಯಾಪಾರ ಆರಂಭವಾಗುತ್ತದೆ. ಅವರು ಏನು ಮಾಡಬೇಕು ಎಂದು ಶಿವಕುಮಾರ್ ಹೇಳಿದರು.
224 ಕ್ಷೇತ್ರ ನಮ್ಮ ಗುರಿ: ರಾಮನಗರ, ಚನ್ನಪಟ್ಟಣ ಕ್ಷೇತ್ರ ನಿಮಗೆ ಪ್ರತಿಷ್ಠೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ನಮಗೆ ಕೇವಲ ರಾಮನಗರ ಹಾಗೂ ಚನ್ನಪಟ್ಟಣ ಮಾತ್ರವಲ್ಲ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕು. ಎಲ್ಲ ಕ್ಷೇತ್ರಗಳು ನಮಗೆ ಪ್ರತಿಷ್ಠೆಯಾಗಿವೆ. ಡಿ.ಕೆ.ಸುರೇಶ್ ಅವರನ್ನು ಜನ ಲೋಕಸಭೆಗೆ ಆರಿಸಿ ಕಳುಹಿಸಿದ್ದಾರೆ. ಪಕ್ಷ ಈ ಬಗ್ಗೆ ತೀರ್ಮಾನ ಮಾಡಲಿದೆ. ತೀರ್ಮಾನ ಸುರೇಶ್ ಹಾಗೂ ಶಿವಕುಮಾರ್ ಕೈಯಲ್ಲಿಲ್ಲ, ಪಕ್ಷದ ಕೈಯಲ್ಲಿದೆ ಎಂದರು.
ಸದಸ್ಯತ್ವ ನೋಂದಣಿ: ಸದಸ್ಯತ್ವ ನೋಂದಣಿಯನ್ನು ಆನ್ಲೈನ್ ಮೂಲಕ ಮಾಡಲು ತೀರ್ಮಾನಿಸಿದ್ದು, ಜ.26ರ ಒಳಗಾಗಿ ಮುಖ್ಯ ನೋಂದಣಿದಾರರನ್ನು ನೇಮಕ ಮಾಡಬೇಕಾಗಿದೆ. ಪ್ರತಿ ಜಿಲ್ಲಾ ಪಂಚಾಯ್ತಿ ಹಾಗೂ ಮುನ್ಸಿಪಾಲಿಟಿ ವ್ಯಾಪ್ತಿಗೆ ಇಬ್ಬರ ನೇಮಕಕ್ಕೆ ಚರ್ಚಿಸುತ್ತಿದ್ದೇವೆ. ಸದಸ್ಯತ್ವ ನೋಂದಣಿ ವಿಚಾರವಾಗಿ ಜನರ ಬಳಿ ಫೋಟೋ ಕೇಳುವಾಗ ಗಂಡಸರು ಹೆಣ್ಣು ಮಕ್ಕಳ ಫೋಟೋ, ಹೆಂಗಸರು ಗಂಡು ಮಕ್ಕಳ ಫೋಟೋ ಕೇಳಲು ಆಗುವುದಿಲ್ಲ. ಹೀಗಾಗಿ ಇಂತಹ ವಿಚಾರಗಳನ್ನೆಲ್ಲಾ ಚರ್ಚಿಸಿ ಆನ್ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡಲು ತೀರ್ಮಾನಿಸಲಾಗಿದೆ. ಯಾವುದೇ ಕಾರಣಕ್ಕೂ ಸದಸ್ಯತ್ವ ನೋಂದಣಿ ದಿನಾಂಕ ವಿಸ್ತರಣೆಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರತಿಯೊಂದು ಚುನಾವಣೆ ಬ್ಲಾಕ್ ಅಧ್ಯಕ್ಷರಿಂದ ಹಿಡಿದು ಜಿಲ್ಲಾ ಕಾಂಗ್ರೆಸ್, ಪ್ರದೇಶ ಕಾಂಗ್ರೆಸ್, ಎಐಸಿಸಿ ಮಟ್ಟದ ಚುನಾವಣೆಗಳು ನಡೆಯಲಿದ್ದು, ಅಲ್ಲಿ ಸದಸ್ಯರಿಗೆ ಮತದಾನ ಮಾಡುವ ಹಕ್ಕಿದೆ. ಪಕ್ಷವನ್ನು ಕಾರ್ಯಕರ್ತರ ಪಕ್ಷವಾಗಿ (ಕೇಡರ್ ಬೇಸ್) ಮಾಡುವ ಬಗ್ಗೆ ನಾನು ಪ್ರತಿಜ್ಞಾ ಕಾರ್ಯಕ್ರಮದಲ್ಲೇ ಹೇಳಿದ್ದೇನೆ ಎಂದು ಶಿವಕುಮಾರ್ ಹೇಳಿದರು.