'ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ': ರಾಯಚೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Update: 2022-01-27 14:21 GMT

ರಾಯಚೂರು, ಜ. 27: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅಪಮಾನ ಮಾಡಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಅಲ್ಲದೆ, ಅವರನ್ನು ಕೂಡಲೇ ನ್ಯಾಯಾಧೀಶ ಹುದ್ದೆಯಿಂದ ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಭಾರೀ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ.

ಗುರುವಾರ ನಗರದಲ್ಲಿ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಇಲ್ಲಿನ ಬಸವೇಶ್ವರ ವೃತ್ತ ಮತ್ತು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಜೊತೆಗೆ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು, ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಸಂಚಾರ ಬಂದ್: ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಸಂಜೆಯ ವರೆಗೆ ಕೆಎಸ್ಸಾರ್ಟಿಸಿ ಬಸ್‍ಗಳು, ಆಟೋರಿಕ್ಷಾ ಸೇರಿದಂತೆ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಬಹುತೇಕ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಸಿಂಧನೂರು, ದೇವದುರ್ಗ, ಮಾನ್ವಿ, ಲಿಂಗಸುಗೂರು, ಮಸ್ಕಿ, ಸಿರವಾರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿಯೂ ಪ್ರತಿಭಟನೆ ವ್ಯಕ್ತವಾಗಿದ್ದು, ಮಲ್ಲಿಕಾರ್ಜುನ ಗೌಡ ಅಮಾನತ್ತು ಮಾಡಬೇಕೆಂದು ಆಗ್ರಹಿಸಲಾಗಿದೆ.

ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ತೆಗೆದು ಧ್ವಜಾರೋಹಣ ನೆರವೇರಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. `ಅಂಬೇಡ್ಕರ್ ಭಾವಚಿತ್ರ ಇಡಲು ಆದೇಶ ಇಲ್ಲವೆಂದು ಹೇಳುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ, ದಸರಾ ಹಬ್ಬದಲ್ಲಿ ಕೋರ್ಟ್ ಆವರಣದಲ್ಲಿ ತಳಿರು-ತೋರಣ ಕಟ್ಟಿ, ಕುಂಬಳಕಾಯಿ ಒಡೆಯಲು ಯಾವ ಆದೇಶವಿತ್ತು' ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಸರಕಾರಿ ಆದೇಶವಿದೆ: ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, `ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಅನ್ವಯ ನ್ಯಾಯಾಂಗ, ಕಾಯಾರ್ಂಗ ಮತ್ತು ಶಾಸಕಾಂಗ ಹಾಗೂ ದೇಶದ ಕೇಂದ್ರ, ರಾಜ್ಯ ಸರಕಾರಗಳು ಆಡಳಿತ ನಡೆಸುತ್ತಿವೆ. ರಾಜ್ಯ ಸರಕಾರ ಹೊರಡಿಸಿದ ಆದೇಶದಲ್ಲಿ ಗಣರಾಜ್ಯೋತ್ಸವ ದಿನದಂದು ಸರಕಾರಿ ಸ್ವಾಮ್ಯಕ್ಕೆ ಸೇರಿದ ಶಾಲಾ, ಕಾಲೇಜು ಸೇರಿದಂತೆ ಸರಕಾರದಿಂದ ನಡೆಯುವ ಗಣರಾಜ್ಯೋತ್ಸವ ಸಮಾರಂಭಗಳಲ್ಲಿ ಸಂವಿಧಾನ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಕಡ್ಡಾಯವಾಗಿ ಇಡುವಂತೆ ಸೂಚಿಸಲಾಗಿದೆ.
ಆದರೆ, ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿಟ್ಟರೆ ನಾನು ಧ್ವಜಾರೋಹಣ ಮಾಡುವುದಿಲ್ಲವೆಂದು ಅಂಬೇಡ್ಕರ್ ರಿಗೆ ಅಪಮಾನಿಸಿದ್ದಾರೆ. ಇವರ ವಿರುದ್ಧ ಕೂಡಲೇ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ, ನ್ಯಾಯಾಧೀಶ ಹುದ್ದೆಯಿಂದ ಅಮಾನತ್ತು ಮಾಡಬೇಕು. ಇಂತಹ ಮನಸ್ಥಿತಿಯ ವ್ಯಕ್ತಿಗಳಿಗೆ ರಾಜ್ಯದಲ್ಲಿ ಜಾಗವಿಲ್ಲ. ಹೀಗಾಗಿ ಅವರನ್ನು ಗಡಿಪಾರು ಮಾಡಬೇಕು' ಎಂಬ ಆಗ್ರಹವೂ ಕೇಳಿಬಂತು.

ಪ್ರತಿಭಟನೆಯಲ್ಲಿ ಮುಖಂಡರಾದ ಆರ್.ಮಾನಸಯ್ಯ, ಎಂ.ವಿರುಪಾಕ್ಷಿ, ಅಂಬಣ್ಣ ಅರೋಲಿ, ಆದೆಪ್ಪ ಛಲವಾದಿ, ಎಂ. ಈರಣ್ಣ, ನರಸಪ್ಪ, ವಿಶ್ವನಾಥ ಪಟ್ಟಿ, ಶಶಿಕಲಾ ಭೀಮರಾಯ, ಮಾರಪ್ಪ, ರಾಘವೇಂದ್ರ ಬೋರೆಡ್ಡಿ, ಹೇಮರಾಜ ಅಸ್ಕಿಹಾಳ, ರಾಜೇಶ ಕರಾಟೆ, ವೈ.ನರಸಪ್ಪ, ಅನಿಲಕುಮಾರ, ಜನಾರ್ಧನ ಹಳ್ಳಿಬೆಂಚಿ, ನಿರ್ಮಲಾ ಬೆಣ್ಣೆ, ಪ್ರತಿಭಾ ರೆಡ್ಡಿ, ರೂಪಾ, ರಜಾಕ್ ಉಸ್ತಾದ್ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು, ವಕೀಲರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

'ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ನ್ಯಾಯಾಧೀಶರನ್ನ ಕೂಡಲೇ ನ್ಯಾಯಾಂಗ ಇಲಾಖೆಯಿಂದ ವಜಾಗೊಳಿಸಬೇಕು. ಸಾಂವಿಧಾನಿಕ ಹುದ್ದೆಯಲ್ಲಿದ್ದು, ದೇಶಕ್ಕೆ ಸಂವಿಧಾನ ಕೊಟ್ಟಂತಹ ಅಂಬೇಡ್ಕರ್ ಫೋಟೋ ಇಟ್ಟರೆ ಧ್ವಜಾರೋಹಣ ಮಾಡುವುದಿಲ್ಲ ಎನ್ನುವ ಅವರ ಹೇಳಿಕೆ ನೋವುಂಟು ಮಾಡಿದೆ. ಇಂತಹ ಮನಸ್ಥಿತಿಯಲ್ಲಿರುವವರು ನ್ಯಾಯ ಒದಗಿಸುವ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಹೀಗಾಗಿ, ಮುಖ್ಯ ನ್ಯಾಯಮೂರ್ತಿಗಳು ಇವರನ್ನ ಸೇವೆಯಿಂದ ವಜಾಗೊಳಿಸಬೇಕು. ಈ ಕುರಿತು ಸರಕಾರ ಮತ್ತು ಸಂಬಂಧಿಸಿದ ಸಚಿವರಿಗೆ ಪತ್ರ ಬರೆಯುತ್ತೇನೆ'
-ಕೆ.ಶಿವನಗೌಡ ನಾಯಕ, ಶಾಸಕ ದೇವದುರ್ಗ 

'ಗಣರಾಜೋತ್ಸವದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇಡಬೇಕೆಂದು ಸರಕಾರ ಸುತ್ತೋಲೆ ಹೊರಡಿಸಿದ್ದರೂ ನ್ಯಾಯಾಲಯಗಳಲ್ಲಿ ಈ ಆದೇಶ ಜಾರಿಯಾಗಿಲ್ಲ ಏಕೆ ಎಂಬ ಬಗ್ಗೆ ತನಿಖೆ ನಡೆಸಬೇಕು. ಅಂಬೇಡ್ಕರ್ ಗೆ ಅವಮಾನ ಮಾಡುವ ದುರುದ್ದೇಶದಿಂದಲೇ ನ್ಯಾಯಾಂಗ ಇಲಾಖೆ ಸುತ್ತೋಲೆ ಜಾರಿ ಮಾಡಿಲ್ಲ ಎಂದು ನಾವು ಸಿಎಂ ವಿರುದ್ಧವೇ ದೂರು ದಾಖಲು ಮಾಡಬೇಕಾಗುತ್ತದೆ. ಹಿಂದಿನ ವರ್ಷವೇ ಈ ಸಂಬಂಧ ರಾಯಚೂರಿನಲ್ಲಿ ಕೋರ್ಟ್‍ನಲ್ಲೇ ನಾವು ನ್ಯಾಯವಾದಿಗಳೆಲ್ಲರೂ ಪ್ರಶ್ನಿಸಿದ್ದೇವೆ. ಹೀಗಾಗಿ ಕೂಡಲೇ ನ್ಯಾಯಾಂಗ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಡಬೇಕೆಂದು ಆದೇಶ ಹೊರಡಿಸಬೇಕು'
-ಎಸ್.ಮಾರಪ್ಪ, ಹಿರಿಯ ವಕೀಲರು ರಾಯಚೂರು

2020ರಲ್ಲಿಯೇ ರಾಜ್ಯ ಸರಕಾರ, ಗಣರಾಜ್ಯೋತ್ಸವದಂತಹ ಸರಕಾರಿ ಕಾರ್ಯಕ್ರಮಗಳಲ್ಲಿ ಡಾ.ಅಂಬೇಡ್ಕರ್ ಫೋಟೋ ಇಡಬೇಕೆಂದು ಆದೇಶ ಹೊರಡಿಸಿದೆ. ನ್ಯಾಯಾಂಗವೂ ಕೂಡ ಸರಕಾರದ ಅಧೀನಕ್ಕೇ ಬರುವುದರಿಂದ ಸರಕಾರಿ ಅಧಿಸೂಚನೆ ಅನ್ವಯ ಆಗುತ್ತದೆ. ಆದೇಶ ಇರಲಿ, ಇಲ್ಲದಿರಲಿ ಅಂಬೇಡ್ಕರ್ ಫೋಟೋ ಇಡಬೇಕಾದ್ದು ನೈತಿಕ ಪ್ರಶ್ನೆ. ಗಾಂಧಿ ಫೋಟೋ ಹೇಗೆ ಅಭ್ಯಾಸ ಆಗಿದೆಯೋ ಹಾಗೆಯೇ ಅಂಬೇಡ್ಕರ್ ಫೋಟೋ ಇಡುವುದು ಕೂಡ ಅಭ್ಯಾಸವಾಗಬೇಕು. 
-ಡಾ.ಸಿ.ಎಸ್. ದ್ವಾರಕಾನಾಥ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

ರಾಜ್ಯವ್ಯಾಪಿ ಇರುವ ನ್ಯಾಯಾಲಯಗಳಲ್ಲಿ ದಲಿತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಧೀಶರ ಹುದ್ದೆಗಳನ್ನು ಮೀಸಲಿಡಬೇಕು. ಈ ಸಂಬಂಧ ಹೋರಾಟ ಕೈಗೊಳ್ಳುತ್ತೇವೆ. ಇನ್ನು ರಾಯಚೂರಿನಲ್ಲಿ ಅಂಬೇಡ್ಕರ್‍ಗೆ ನ್ಯಾಯಾಧೀಶರಿಂದ ಆದ ಆಗೌರವದ ಹಿಂದೆ ಬಹುದೊಡ್ಡ ಪಿತೂರಿ ಇದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.
-ಸಿರಿಮನೆ ನಾಗರಾಜ್, ಪ್ರಗತಿಪರ ಚಿಂತಕ

ನ್ಯಾಯಾಂಗ ವ್ಯವಸ್ಥೆಯಲ್ಲಿದ ನ್ಯಾಯಾಧೀಶರೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆರವುಗೊಳಿಸುವ ಕ್ರಮ ಖಂಡನೀಯ. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ನ್ಯಾಯಾಧೀಶರಿಂದ ಇಂತಹ ವರ್ತನೆಯೂ ಸರಿಯಲ್ಲ. ಇಂತಹ ಕೆಲಸದಲ್ಲಿ ಜಾತಿ ಶ್ರೇಷ್ಠತೆ ಒಳಗೊಂಡಿರುತ್ತದೆ. ಹಾಗಾಗಿ, ಅವರು ಬಹಿರಂಗ ಕ್ಷಮೆಯಾಚಿಸಲಿ.
-ಅನಂತ್‍ನಾಯ್ಕ್, ವಕೀಲ

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಜಾತಿಯ ಕಣ್ಣಿನಿಂದ ನೋಡುವ ಪರಿಯನ್ನು ಎಲ್ಲರೂ ಬಿಡಬೇಕು. ಅಂಬೇಡ್ಕರ್ ಅವರ ಭಾವಚಿತ್ರ ಇಡುವ ಬಗ್ಗೆ ಹೈಕೋರ್ಟ್ ತುರ್ತು ಆದೇಶವೊಂದನ್ನು ಅಧೀನ ನ್ಯಾಯಾಲಯಗಳಿಗೆ ನೀಡಬೇಕು.
-ಮಾವಳ್ಳಿ ಶಂಕರ್, ದಸಂಸ ನಾಯಕ

ಸಂವಿಧಾನ ಶಿಲ್ಪಿಯೇ ಡಾ.ಬಿ.ಆರ್.ಅಂಬೇಡ್ಕರ್ ಅವರು, ಜ.26 ಸಹ ಸಂವಿಧಾನದ ದಿನವಾಗಿದೆ. ಹೀಗಿರುವಾಗ, ಅಂಬೇಡ್ಕರ್ ಅವರ ಭಾವಚಿತ್ರವನ್ನೆ ಇಡಬಾರದು ಎನ್ನುವುದು ಮನುವಾದ, ಜಾತಿವಾದ, ಕೋಮುವಾದ ಆಗಿದ್ದು, ಇದನ್ನು ನಾವು ವಿರೋಧಿಸುತ್ತೇವೆ. ಅಲ್ಲದೆ, ಕರ್ನಾಟಕ ಹೈಕೋರ್ಟ್ ಈ ಕೂಡಲೇ ಹೊಸ ಸುತ್ತೋಲೆ ಹೊರಡಿಸಿ, ಅಂಬೇಡ್ಕರ್ ಭಾವಚಿತ್ರ ಕಡ್ಡಾಯಗೊಳಿಸುವ ಕೆಲಸ ಮಾಡಬೇಕು.
-ಎಸ್.ಬಾಲನ್, ಹಿರಿಯ ವಕೀಲ

ರಾಯಚೂರು ಜಿಲ್ಲಾ ನ್ಯಾಯಾಧೀಶರ ನಿಲುವು ಸೂಕ್ತವಲ್ಲ. ಇದು ತಪ್ಪು ಮಾತ್ರವಲ್ಲದೆ, ಅಜ್ಞಾನವಾಗಿದೆ. ಇಂತಹ ಘಟನೆ ಮತ್ತೆ ನಡೆಯಬಾರದು. ಅಲ್ಲದೆ, ನ್ಯಾಯಾಲಯಗಳಲ್ಲಿ ಮಹಾತ್ಮಗಾಂಧಿ ಅವರ ಭಾವಚಿತ್ರ ಇಡಬೇಕು ಎನ್ನುವ ಆದೇಶ ಇದೆ. ಹಾಗಾಗಿ, ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಇಡಲಾಗಿದೆ. ಆದರೆ, ಕರ್ನಾಟಕ ಸರಕಾರ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡಬೇಕೆಂದು ಆದೇಶಿಸಿದೆ. ಹೀಗಿರುವಾಗ, ಅಲ್ಲಿನ ನ್ಯಾಯಾಧೀಶರು ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿದ್ದು, ಒಳ್ಳೆಯ ಬೆಳವಣಿಗೆ ಅಲ್ಲ. ಒಂದು ವೇಳೆ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ್ದರೆ ಅಪರಾಧ ಆಗುತಿತ್ತೇ? ಇಂತಹ ಘಟನೆಗಳನ್ನು ನಾನು ಖಂಡಿಸುತ್ತೇನೆ.
-ಎಚ್.ಎನ್.ನಾಗಮೋಹನ್ ದಾಸ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ

ಫೋಟೋ ಇಟ್ಟಮೇಲೆ ತೆಗೆಯಬಾರದಿತ್ತು. ಫೋಟೋ ಇಟ್ಟಿಲ್ಲ ಅಂದಿದ್ರೆ ಅದು ಬೇರೆ ವಿಚಾರ. ಇಟ್ಟಮೇಲೆ ತೆಗೆಯಬಾರದು. ಪ್ರಪಂಚದಲ್ಲಿಯೇ ಪ್ರಖ್ಯಾತಿ ಹೊಂದಿದ್ದ ವ್ಯಕ್ತಿ ಅಂಬೇಡ್ಕರ್. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಇಡಲಾಗುತ್ತಿದೆ. ಸರಕಾರವೇ ಮುಂದೆ ನಿಂತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಂತಹ ಕಾಲಘಟ್ಟದಲ್ಲಿ ಇದಾಗಿದ್ದು ಸರಿಯಲ್ಲ.
-ವಿ.ಗೋಪಾಲಗೌಡ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News