ಬಿಡಿಎ ಮೇಲೆ ಎಸಿಬಿ ದಾಳಿ ಪ್ರಕರಣ: 25 ಮಂದಿ ವಿರುದ್ಧ ಮೊಕದ್ದಮೆ ದಾಖಲು
Update: 2022-01-27 18:18 GMT
ಬೆಂಗಳೂರು, ಜ.27: ಬಿಡಿಎ ಮೇಲೆ ಎಸಿಬಿ ತನಿಖಾಧಿಕಾರಿಗಳು ದಾಳಿ ಪ್ರಕರಣ ಸಂಬಂಧ ಕೆಎಎಸ್ ಅಧಿಕಾರಿಗಳು ಒಳಗೊಂಡಂತೆ 25 ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ.
ನಗರಾಭಿವೃದ್ಧಿ ಇಲಾಖೆಯಿಂದ 25 ಪ್ರಕರಣ ದಾಖಲು ಮಾಡಲು ಅನುಮತಿ ದೊರೆತಿದೆ. ಅಲ್ಲದೆ, ದಾಳಿ ವೇಳೆ ಸುಮಾರು 200 ಕೋಟಿಗೂ ಅಧಿಕ ಅವ್ಯವಹಾರವನ್ನು ಎಸಿಬಿ ಪತ್ತೆ ಮಾಡಿತ್ತು.
ಸದ್ಯ ಬೇರೆ ಬೇರೆ ಕಡೆ ವರ್ಗಾವಣೆಯಾಗಿರುವ ಕೆಎಎಸ್ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಎಫ್ಡಿಎ ಅಧಿಕಾರಿಗಳು ಸೇರಿ 25 ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗುವ ಸಾಧ್ಯತೆಯಿದೆ.
ಕಳೆದ ವಾರ್ಷಿಕ ಸಾಲಿನಲ್ಲಿ ಎಸಿಬಿ ತನಿಖಾಧಿಕಾರಿಗಳು ಬಿಡಿಎ ಮೇಲೆ ದಾಳಿ ನಡೆಸಿದ್ದರು. ಆಗ ನಕಲಿ ದಾಖಲಾತಿ ಸೃಷ್ಟಿಸಿ ಅರ್ಹರಲ್ಲದವರಿಗೆ ನಿವೇಶನ ಮಂಜೂರು, ಒಂದೇ ನಿವೇಶನ ಇಬ್ಬರಿಗೂ ಮಂಜೂರು ಸೇರಿದಂತೆ ಹಲವು ಅಕ್ರಮಗಳು ಬೆಳಕಿಗೆ ಬಂದಿದ್ದವು.