ಸಮೀರ್‌ ಹತ್ಯೆ, ಶಂಶೀರ್ ಮೇಲಿನ ದಾಳಿ ಹಿಂದೆ ದ್ವೇಷ ಭಾಷಣ, ಪೊಲೀಸ್ ನಿಷ್ಕ್ರಿಯತೆ: ಬಹುತ್ವ ಕರ್ನಾಟಕದ ಸತ್ಯಶೋಧನಾ ವರದಿ

Update: 2022-01-28 15:17 GMT

ನರಗುಂದ: ಇತ್ತೀಚಿಗೆ ನಡೆದ ಸಮೀರ್ ಶಹಾಪುರ ಎಂಬ ಯುವಕನ ಕೊಲೆ ಒಂದು ಪ್ರತ್ಯೇಕ ಘಟನೆಯಲ್ಲ. ಅದು ಈ ಭಾಗದಲ್ಲಿ ಕಳೆದ 2 ವರ್ಷಗಳಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣ ಮತ್ತು ಮುಸ್ಲಿಮರಿಗೆ ಕಿರುಕುಳದ ಘಟನೆಗಳ ಮುಂದುವರಿದ ಭಾಗವಾಗಿದೆ. ಪೊಲೀಸರು ಸಕಾಲದಲ್ಲಿ ಮತಾಂಧ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದರೆ ಇದನ್ನು ತಪ್ಪಿಸಬಹುದಿತ್ತು ಎಂದು ಬಹುತ್ವ ಕರ್ನಾಟಕ ಸತ್ಯಶೋಧನಾ ವರದಿಯಲ್ಲಿ ಹೇಳಿದೆ. ಹಾಗು ಸಮೀರ್ ಹತ್ಯೆ ಮತ್ತು ಶಂಶೀರ್ ಮೇಲಿನ ದಾಳಿ, ಅದೇ ರೀತಿ ಹಿಂದಿನ ಘಟನೆಗಳಿಗೆ ಸಂಬಂಧಿಸಿದಂತೆ ನ್ಯಾಯಯುತವಾದ ಮತ್ತು ಮುಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

ಜನವರಿ 17, 2022ರಂದು ಸಂಜು ನಲವಡಿ ಎಂಬ ಬಜರಂಗದಳದ ನಾಯಕನ ನೇತೃತ್ವದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ನಡೆಸಲಾಯಿತು. ಇದರಲ್ಲಿ ಮುಸ್ಲಿಮರನ್ನು 'ಭಯೋತ್ಪಾದಕರು', ನಾವು ಅವರನ್ನು ಬಿಡುವುದಿಲ್ಲ" ಎಂದು ಹೇಳಲಾಯಿತು. ಸಂಜು ವಿರುದ್ಧ ಹಲ್ಲೆ ಘಟನೆಗೆ ಸಂಬಂಧಿಸಿ ಜ.15ರಂದು ಎಫ್.ಐ.ಆರ್. ದಾಖಲಾಗಿರುವ ಹೊರತಾಗಿಯೂ, ಆತನಿಗೆ ಬಹಿರಂಗವಾಗಿ ಭಾಷಣ ಮಾಡಲು ಅವಕಾಶ ನೀಡಲಾಯಿತು. ರ್ಯಾಲಿಯಲ್ಲಿದ್ದ ಇನ್ನೋರ್ವ ಭಾಷಣಕಾರ ಮುಸ್ಲಿಮರನ್ನು "ನಾಯಿ" ಎಂದು ಕರೆದಿದ್ದು, "ಜೈ ಶ್ರೀ ರಾಮ್" ಘೋಷಣೆ ಮೊಳಗಿಸುತ್ತಾ ಸಂಘಪರಿವಾರದ ನಾಯಕರು ತಮ್ಮ ಭಾಷಣದಲ್ಲಿ "ಪೊಲೀಸರಿಗೂ ಬಜರಂಗದಳವೇ ರಕ್ಷಣೆ ನೀಡುತ್ತಿದೆ" ಎಂದು ಹೇಳಿದ್ದರು. ಜನವರಿ 17, ರಂದೇ ಸಮೀರ್ ಶಹಾಪುರ ಮೇಲೆ ದಾಳಿ ನಡೆದಿದ್ದು,  ಜನವರಿ 18ರಂದು ಆತ ಸಾವಿಗೀಡಾಗಿದ್ದಾನೆ. ಆ ಬಳಿಕ ಪೊಲೀಸರು ಬಜರಂಗ ದಳದ ಸದಸ್ಯ ಸಂಜು ನಲವಡಿ ಸಹಿತ 4 ಮಂದಿಯನ್ನು ಬಂಧಿಸಿದ್ದಾರೆ. ಪೊಲೀಸರು ಸಕಾಲದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದರೆ ಈ ಕೊಲೆಯನ್ನು ತಪ್ಪಿಸಬಹುದಿತ್ತು ಎಂದು ಬಹುತ್ವ ಕರ್ನಾಟಕ ಸತ್ಯಶೋಧನಾ ವರದಿಯಲ್ಲಿ ಹೇಳಿದೆ. 

ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ನರಗುಂದ ನಿವಾಸಿ ಸಮೀರ್ ಶಹಾಪುರ(19) ಎಂಬ ಯುವಕನನ್ನು ಕೊಲೆಗೈದು ಇನ್ನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತ್ವ ಕರ್ನಾಟಕ ಶುಕ್ರವಾರ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. 

ಸಮೀರ್ ಹತ್ಯೆ ಮತ್ತು ಸ್ವಲ್ಪದರಲ್ಲೇ ಪಾರಾದ ಶಂಶೀರ್ ಇವು ಪ್ರತ್ಯೇಕ ಘಟನೆಗಳಲ್ಲ. ಇವು ವ್ಯವಸ್ಥಿತವಾಗಿ ನಡೆಸಲಾದ ಮತ್ತು ದ್ವೇಷ ಭಾಷಣಗಳ ಮೂಲಕ ಮುಸ್ಲಿಮ್ ವಿರುದ್ಧ ಹಿಂಸಾಚಾರದ ಗುರಿಯೊಂದಿಗೆ ಸಂಘಟಿಸಲಾದ ಕೃತ್ಯಗಳ ಪರಿಣಾಮವಾಗಿದೆ. ನರಗುಂದದಲ್ಲಿ ನಡೆದ ಎಲ್ಲಾ ಪ್ರಕರಣಗಳಲ್ಲೂ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಇಬ್ಬರು ಶಾಲಾ ಹುಡುಗರ ಸಹಿತ ಮುಸ್ಲಿಂ ಯುವಕರೇ ಸಂತ್ರಸ್ತರಾಗಿದ್ದಾರೆ. ರಾಜ್ಯದಲ್ಲಿರುವ ಆಡಳಿತ ವ್ಯವಸ್ಥೆಯ ನಿಷ್ಕ್ರಿಯತೆಯು ಮೌನ ಸಮ್ಮತಿಯನ್ನು ನೀಡುತ್ತದೆ. ಮಾತ್ರವಲ್ಲ ಇದು, ಕಾನೂನು ಮತ್ತು ಸಂವಿಧಾನವನ್ನು ಸಂಪೂರ್ಣವಾಗಿ ಅವಹೇಳನ ಮಾಡುವ ಸಂಘಪರಿವಾರದ ಗೂಂಡಾಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಬಹುತ್ವ ಕರ್ನಾಟಕ ತನ್ನ ಸತ್ಯಶೋಧನಾ ವರದಿಯಲ್ಲಿ ಹೇಳಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ನಿವಾಸಿ 19ರ ಹರೆಯದ ಯುವಕ ಸಮೀರ್ ಶಹಾಪುರ ಜನವರಿ 17, 2022 ರಂದು ಗುಂಪೊಂದರಿಂದ ಬರ್ಬರ ದಾಳಿಗೊಳಗಾಗಿದ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಸಮೀರ್ ರಾತ್ರಿ ಸುಮಾರು 7:30ಕ್ಕೆ, ತನ್ನ ಸ್ನೇಹಿತ ಶಂಶೀರ್ ಖಾನ್ ನೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಅವರಿಬ್ಬರ ಮೇಲೆ ಖಡ್ಗ ಮತ್ತು ರಾಡ್ ನಿಂದ ಗುಂಪೊಂದು ದಾಳಿ ನಡೆಸಿತ್ತು. ಅದೃಷ್ಟವಶಾತ್, ಶಂಶೀರ್  ಬದುಕುಳಿದ, ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆಗೊಳಗಾದ ಆತ ಮಾನಸಿಕ ಆಘಾತದಿಂದ ಬಳಲುತ್ತಿದ್ದಾನೆ ಮತ್ತು ತಾನು ನರಗುಂದಕ್ಕೆ ಮರಳಿದರೆ ಏನಾಗಬಹುದು ಎಂದು ಚಿಂತಿತನಾಗಿದ್ದಾನೆ ಎಂದು ಸತ್ಯಶೋಧನಾ ವರದಿ ಉಲ್ಲೇಖಿಸಿದೆ.

ಘಟನೆಯಲ್ಲಿ ಮೃತಪಟ್ಟ ಯುವಕ ಸಮೀರ್ ನಿವಾಸಕ್ಕೆ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಸಿ. ಪಾಟೀಲ್ ಅವರು ಅನುಕಂಪದ ನೆಲೆಯಲ್ಲೂ ಮೃತನ ಮನೆಗೆ ಭೇಟಿ ನೀಡಿಲ್ಲ. ಮೃತನ ಮನೆ ಹತ್ತಿರದಲ್ಲೇ ಇದ್ದರೂ ಸಚಿವರು ಭೇಟಿ ನೀಡದ್ದು ಕುಟುಂಬಸ್ಥರ ಸಹಿತ ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ ಸತ್ಯಶೋಧನಾ ವರದಿ ಹೇಳಿದೆ.

ನರಗುಂದವು ಈ ಹಿಂದೆ ಕೆಲವೊಂದು ಸಣ್ಣ ಪುಟ್ಟ ಹಿಂದು-ಮುಸ್ಲಿಂ ಘರ್ಷಣೆಗಳಿಗೆ ಸಾಕ್ಷಿಯಾಗಿದೆ. ಆದಾಗ್ಯೂ, ಕಳೆದ 2 ವರ್ಷಗಳಲ್ಲಿ ದ್ವೇಷ ಭಾಷಣ ಮತ್ತು ಮುಸ್ಲಿಮರಿಗೆ ಕಿರುಕುಳದ ಘಟನೆಗಳು ನಿರಂತರ ಏರಿಕೆಯಾಗಿರುವುದು ಕಂಡು ಬಂದಿದೆ. ನವೆಂಬರ್ 2021 ರ ವೇಳೆಗೆ ಇದು ತೀವ್ರ ಹೆಚ್ಚಾಗಿತ್ತು.  ನವೆಂಬರ್ ಕೊನೆ ವಾರದಲ್ಲಿ ಅಝೀಮ್ ಎಂಬ ಕಾಲೇಜು ವಿದ್ಯಾರ್ಥಿ ಬಜರಂಗದಳದ ಕಾರ್ಯಕರ್ತರಿಂದ ದಾಳಿಗೊಳಗಾಗಿದ್ದ. ಆನಂತರ, ಸಮೀರ್ ಹತ್ಯೆ ಆರೋಪಿ ಸಹಿತ ಗುಂಪೊಂದು ಅಝೀಮ್ ಮನೆಗೆ ತೆರಳಿತ್ತು. ನಂತರ ಅಲ್ಲಿ ಹೊಡೆದಾಟ ನಡೆದಿದ್ದು, ಅಝೀಮ್ ವಿರುದ್ಧ ಎಫ್.ಐ.ಆರ್. ದಾಖಲಾಗಿತ್ತು.

ಇದರ ನಂತರ ಕೆಲವೇ ದಿನಗಳೊಳಗಾಗಿ, ಸಿದ್ಧೇಶ್ವರಿ ಸರಕಾರಿ ಕಾಲೇಜಿನ 17ರ ಹರೆಯದ ವಿದ್ಯಾರ್ಥಿ ಝೈದ್ ನನ್ನು 100-150 ಮಂದಿಯ ತಂಡ ತರಗತಿಯಿಂದ ಹೊರಗೆ ಕರೆದುಕೊಂಡು ಹೋಗಿತ್ತು. ಇದರಲ್ಲಿ ಬಹುತೇಕ ಮಂದಿ ಬಿಜೆಪಿಯ ವಿದ್ಯಾರ್ಥಿ ಅಂಗವಾಗಿರುವ ಎಬಿವಿಪಿಗೆ ಸೇರಿದವರಾಗಿದ್ದರು. ಗುಂಪಿನಲ್ಲಿದ್ದ ಮತ್ತೆ ಕೆಲವು ಮಂದಿ ಹೊರಗಿನಿಂದ ಬಂದಿದ್ದರು. ಝೈದ್ ತನ್ನ ತರಗತಿಯಲ್ಲಿದ್ದ ಏಕೈಕ ಮುಸ್ಲಿಮ್ ವಿದ್ಯಾರ್ಥಿಯಾಗಿದ್ದು, ಗುಂಪು ಆತನನ್ನು ತರಗತಿಯಿಂದ ದೂರಕ್ಕೆ ಎಳೆದುಕೊಂಡು ಹೋಗಿತ್ತು. ಸರಿಸುಮಾರು ನೂರು ಮೀಟರ್ ವರೆಗೆ ಎಳೆದುಕೊಂಡು ಹೋದಾಗ ಆತ ಅವರಿಂದ ತಪ್ಪಿಸಿಕೊಂಡು ಸಹಾಯ ಯಾಚಿಸಲು ಮತ್ತು ಪ್ರಾಂಶುಪಾಲರ ಮೊಬೈಲ್ ನಿಂದ ತನ್ನ ಅಂಕಲ್ ಗೆ ಕರೆ ಮಾಡುವುದಕ್ಕಾಗಿ ಪ್ರಾಂಶುಪಾಲರ ಕಚೇರಿ ನುಗಿದ್ದ, ಅದೇ ವೇಳೆ ಪ್ರಾಂಶುಪಾಲರ ಕಚೇರಿಗೆ ನುಸುಳಿದ ಗುಂಪು ಝೈದ್ ಗೆ ನಿರಂತರವಾಗಿ ಥಳಿಸಿತು ಮತ್ತು ಧರ್ಮ ನಿಂದನೆಗೈದರು ಎಂದು ಬಹುತ್ವ ಕರ್ನಾಟಕ ಸತ್ಯಶೋಧನಾ ವರದಿ ತಿಳಿಸಿದೆ.

ಝೈದ್ ಸಂಬಂದಿ ಕಾಲೇಜಿಗೆ ಆಗಮಿಸಿದಾಗ ಅವರು ಕೂಡ ಗುಂಪಿನಿಂದ  ಥಳಿತಕ್ಕೊಳಗಾದರು. ದಾಳಿಕೋರರ ಮೇಲೆ ಯಾವುದೇ ಕ್ರಮಕೈಗೊಳ್ಳಲು ಪ್ರಾಂಶುಪಾಲರು ವಿಫಲರಾಗಿದ್ದು, ಇದಕ್ಕೆ ವ್ಯತಿರಿಕ್ತವಾಗಿ, ಝೈದ್ ನ ಬ್ಯಾಗ್ ನೊಳಗೆ ಚೂರಿ ಇಟ್ಟ ಅವರು, ಆತ ಹಿಂಸಾ ಪುವೃತ್ತಿ ಹೊಂದಿದ್ದಾನೆ ಎಂದು ಆರೋಪಿಸಿದರು. ಪ್ರಾಂಶುಪಾಲರನ್ನು ಭೇಟಿಯಾಗಲು ನಿರಂತರವಾಗಿ ಪುಯತ್ನಿಸಿದರೂ ಸತ್ಯಶೋಧನಾ ತಂಡಕ್ಕೆ, ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಝೈದ್ ಈಗ ಕಾಲೇಜಿಗೆ ಮರಳಿದ್ದಾನೆ. "ನಾನೋರ್ವ ಮುಸ್ಲಿಮ್” ಆದ ಕಾರಣಕ್ಕೆ ನನಗೆ ಥಳಿಸಲಾಯಿತು ಎಂದು ತಿಳಿಸಿದ್ದಾನೆ. ಈ ಘಟನೆಗೆ ಸಂಭಂಧಿಸಿದಂತೆ ಯಾವುದೇ ಎಫ್.ಐ.ಆರ್. ದಾಖಲಾಗಿಲ್ಲ ಹಾಗೂ ಕಾಲೇಜು ಆಡಳಿತ ಅಥವಾ ಪೊಲೀಸರು ಘಟನೆಯನ್ನು ಗಂಭೀರವಾಗಿ ಖಂಡಿಸಿ ಕ್ರಮ ಕೈಗೊಳ್ಳುವುದಾಗಲೀ ನಡೆದಿಲ್ಲ ಎಂದು ವರದಿ ತಿಳಿಸಿದೆ.

ಡಿಸೆಂಬರ್ 1, 2021ರಂದು 100 ಮಂದಿ ಸೇರಿದ ಇನ್ನೊಂದು ಗುಂಪು ಅರ್ಬಾಝ್ ಎಂಬ 15ರ ಹರೆಯದ ಮುಸ್ಲಿಮ್ ಹುಡುಗನನ್ನು ಪಟ್ಟಣದ ಮಧ್ಯಭಾಗದಿಂದ ಮೌಲಾನಾ ಆಝಾದ್ ಶಾಲೆಯ ವರೆಗೆ ಬೆನ್ನಟ್ಟಿತ್ತು. ಗುಂಪು ಅರ್ಬಾಝ್ ನನ್ನು ಶಾಲಾ ಆವರಣದೊಳಗೆ ನಿರಂತರವಾಗಿ ಥಳಿಸಿತು. ಅಲ್ಲಿನ ಅಧ್ಯಾಪಕರ ಮೇಲೆ ಮತ್ತು ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ ಅಬೂಬಕರ್ ಎಂಬಾತನ ಮೇಲೆಯೂ ದಾಳಿ ನಡೆಸಿತು. ಘಟನೆಗೆ ಸಂಬಂಧಿಸಿದಂತೆ ಒಂದು ಎಫ್.ಐ.ಆರ್ ದಾಖಲಾಗಿದ್ದು, ಈ ವರೆಗೆ ಓರ್ವನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಎಬಿವಿಪಿಗೆ ಸೇರಿದವನಾಗಿದ್ದಾನೆ. ಸತ್ಯಶೋಧನಾ ತಂಡದೊಂದಿಗೆ ಮಾತನಾಡಿದ ಶಾಲಾ ಪ್ರಾಂಶುಪಾಲರು, "ಆರೋಪಿಗಳು ಯಾರೆಂದು ನನಗೆ ತಿಳಿದಿಲ್ಲ" ಎಂದು ಹೇಳಿದ್ದಾರೆ. ತನಿಖೆ ನಡೆಸಿದಾಗ, ಅರ್ಬಾಝ್ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಶಾಮೀಲಾಗಿದ್ದ ಅನ್ನುವುದಕ್ಕೆ ಅವರಲ್ಲಿ ಯಾವುದೇ ಆಧಾರವಿರಲಿಲ್ಲ ಎಂಬ ವಿಚಾರ ಬಹಿರಂಗವಾಯಿತು ಎಂದು ಸತ್ಯಶೋಧನಾ ವರದಿ ತಿಳಿಸಿದೆ.

ಜನವರಿ 6, 2022ರ ಸುಮಾರಿಗೆ ಮೂರು ಮಂದಿ ನರಗುಂದದ ಲೋಡಿಗಲ್ಲಿ ಪ್ರದೇಶಕ್ಕೆ ಬಂದು ಹನೀಫ್ ಎಂಬಾತನ ಮೇಲೆ ದೌರ್ಜನ್ಯ ನಡೆಸಿದರು. ಜನವರಿ 14, 2022ರಂದು ಗುಂಪು ಲೋಡಿಗಲ್ಲಿ ಪ್ರದೇಶಕ್ಕೆ ತಮ್ಮ ಬೈಕುಗಳಲ್ಲಿ ಮರಳಿ ಬಂದು ಆಶಾಂತಿಯ ವಾತಾವರಣ ಸೃಷ್ಟಿಸಲು ಪ್ರಾರಂಭಿಸಿತು. ತಕ್ಷಣ ಬೈಕ್ ಸವಾರರು ಮತ್ತು ಕೆಲವು ಸ್ಥಳೀಯ ಮುಸ್ಲಿಂ ಯುವಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಮುಸ್ಲಿಮರಲ್ಲಿ ಭೀತಿ ಸೃಷ್ಟಿಸುವ ಉದ್ದೇಶದೊಂದಿಗೆ ಸುಮಾರು 200 ಮಂದಿ ಇದ್ದ ಗುಂಪು ಮಾರಕಾಸ್ತ್ರಗಳೊಂದಿಗೆ ಘಟನಾ ಸ್ಥಳಕ್ಕೆ ಬಂತು. ಅಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಸುಮಾರು 40 ಮಂದಿ ಇದ್ದರು. ನಂತರ ಅಲ್ಲಿಗೆ ಬಂದ ಪೊಲೀಸರು ಮುಸ್ಲಿಂ ಸಮುದಾಯಕ್ಕೆ ಸೇರಿದ ನಾಲ್ಕು ಮಂದಿಯನ್ನು ಬಂಧಿಸಿದರು. ಹಿಂದು ದೇವರುಗಳನ್ನು ಅವಹೇಳನ ಮಾಡಿದ ಕಲ್ಪಿತ ಕಥೆಯ ಆಧಾರದಲ್ಲಿ, ಕೆಲವು ಮುಸ್ಲಿಮ್ ಯುವಕರ ಮೇಲೆ ಎಫ್.ಐ.ಆರ್ ದಾಖಲಿಸಿದರು. ಆದರೆ, ಈ ಘಟನೆಗೆ ಸಂಬಂಧಿಸಿ ಸಂಘಪರಿವಾರದ 200 ಮಂದಿಯ ಪೈಕಿ ಯಾರನ್ನೂ ಬಂಧಿಸಲಿಲ್ಲ. ಈ ಘಟನೆಯಲ್ಲಿ ಭಾಗಿಯಾದವರು ನಂತರ ಸಮೀರ್ ಶಾಹಪುರ್ ನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.

ನಂತರ ಸಂಘಪರಿವಾರವು ಪೊಲೀಸ್ ಠಾಣೆಗೆ ರ್ಯಾಲಿ ನಡೆಸಿತು. ಅದರಲ್ಲಿ  "ಭಾರತ ಹಿಂದುಗಳಿಗಾಗಿ, ಮುಸ್ಲಿಮರು ಭಿಕ್ಷೆ ಬೇಡಲು ಮತ್ತು ಕಾರ್ಮಿಕರಾಗಿ ಪಾಕಿಸ್ತಾನದಿಂದ ಬಂದವರು" ಎಂಬ ಘೋಷಣೆಗಳನ್ನು ಕೂಗಲಾಯಿತು. ರಾಜ್ಯ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಈ ರ್ಯಾಲಿ ನಡೆಸಲಾಗಿತ್ತು. ಕೋವಿಡ್ ನಿಯಮಾವಳಿ ಉಲ್ಲಂಘನೆ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗಳ ಹೊರತಾಗಿಯೂ ಈ ಘಟನೆಗೆ ಸಂಬಂಧಿಸಿ ಸಂಘಪರಿವಾರದ ಸದಸ್ಯರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿಲ್ಲ ಎಂದು ಬಹುತ್ವ ಕರ್ನಾಟಕದ ಸತ್ಯಶೋಧನಾ ವರದಿ ಉಲ್ಲೇಖಿಸಿದೆ.

ಬಹುತ್ವ ಕರ್ನಾಟಕ ಸತ್ಯಶೋಧನಾ ತಂಡದ ಸದಸ್ಯರು: ಆಕಾಶ್ ಭಟ್ಟಾಚಾರ್ಯ, ಶಿಕ್ಷಣ ತಜ್ಞ / ಹೋರಾಟಗಾರರು ಬೆಂಗಳೂರು ,ಸಿದ್ಧಾರ್ಥ್ ಜೋಷಿ, ಸಂಶೋಧಕರು, ಬೆಂಗಳೂರು,ರಾಜೇಂದ್ರನ್ ನಾರಾಯಣನ್, ಶಿಕ್ಷಣ ತಜ್ಞ / ಹೋರಾಟಗಾರರು ಬೆಂಗಳೂರು , ಮೊಹಮ್ಮದ್ ಇರ್ಷಾದ್, ಸಾಮಾಜಿಕ ಹೋರಾಟಗಾರರು, ಮಂಗಳೂರು, ಶಬೀರ್ ಅಹ್ಮದ್, ಸಾಮಾಜಿಕ ಹೋರಾಟಗಾರರು, ಮಂಗಳೂರು, ಶೇಖ್ ಝಾಕೀರ್ ಹುಸೇನ್, ಪತ್ರಕರ್ತರು ಬೆಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News