ಅರಿವಿನ ಜೊತೆ ಅಂತಃಕರಣವುಳ್ಳ ಸರಕಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಜ. 28: `ನಮ್ಮದು ಅರಿವಿನ ಜೊತೆಗೆ ಅಂತಃಕರಣವುಳ್ಳ ಮಾನವೀಯತೆಯ ಗುಣಧರ್ಮದ ಸರಕಾರ. ಅರಿವೇ ಗುರು ಎಂದು ನಂಬಿರುವ ನಮಗೆ ಜನರಿಂದ, ಜನರಿಗೋಸ್ಕರ, ಜನ ಕಲ್ಯಾಣಕ್ಕಾಗಿ ದುಡಿಯುಬೇಕೆಂಬ ಅರಿವಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ತಮ್ಮ ನೇತೃತ್ವದ ಸರಕಾರ ಆರು ತಿಂಗಳ ಅವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ `ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು' ಕಿರು ಹೊತ್ತಿಗೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, `ನಮ್ಮ ಸರಕಾರ ತೆಗೆದುಕೊಳ್ಳುವ ಪ್ರತಿ ನಿರ್ಣಯದಲ್ಲಿ ಸಾರ್ವಜನಿಕ ಹಿತವೇ ಕೇಂದ್ರ ಬಿಂಧುವಾಗಿದೆ. ಜನಹಿತದ ನಿರ್ಣಯಗಳಲ್ಲಿ ಸಚಿವ ಸಂಪುಟದ ಸಂಪೂರ್ಣ ಸಹಕಾರವಿದೆ' ಎಂದು ಹೇಳಿದರು.
24ಸಾವಿರ ಕೋಟಿ ರೂ.ಗಳ ಅಭಿವೃದ್ಧಿ: `ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ರಾಜ್ಯದಲ್ಲಿ 24 ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯವನ್ನು ಮುನ್ನಡೆಸುವ ಕೆಲಸವನ್ನು ಮಾಡಲಾಗಿದೆ. ಪ್ರವಾಹದಿಂದಾದ ಬೆಳೆಹಾನಿಗೆ ಪರಿಹಾರವನ್ನು ದುಪ್ಪಟ್ಟು ಹೆಚ್ಚಿಸಲಾಗಿದೆ. 14ಲಕ್ಷ ರೈತರಿಗೆ ಪರಿಹಾರವನ್ನು ನೀಡಲಾಗಿದೆ. ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ, ವಿಧವಾ ವೇತನ ಹೆಚ್ಚಿಸಲಾಗಿದ್ದು, 58ಲಕ್ಷ ಹಿರಿಯರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಸಹಾಯ ಮಾಡುವ ಸರಕಾರದ ಅಂತಃಕರಣದ ಮತ್ತೊಂದು ಮುಖವಾಗಿದೆ' ಎಂದು ಬಸವರಾಜ ಬೊಮ್ಮಾಯಿ ವಿವರ ನೀಡಿದರು.
`ರೈತಾಪಿ ಯುವಕರಿಗೆ ವಿದ್ಯೆ ಹಾಗೂ ಉದ್ಯೋಗ ನೀಡಲು ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದ್ದು, 4.50ಲಕ್ಷ ಮಕ್ಕಳು ರೈತ ವಿದ್ಯಾ ನಿಧಿಯ ಲಾಭವನ್ನು ಪಡೆದಿದ್ದಾರೆ. ಕಾರ್ಮಿಕರ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡಲಾಗಿದ್ದು, 5ಲಕ್ಷಕ್ಕೂ ಹೆಚ್ಚು ಮಕ್ಕಳು ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ' ಎಂದು ಅವರು ಮಾಹಿತಿಯನ್ನಿತ್ತರು.
`ಸಮರ್ಥ ಆಡಳಿತ ನೀಡಿದ ಪರಂಪರೆಯನ್ನು ರಾಜ್ಯದಲ್ಲಿದೆ. ಕರ್ನಾಟಕದ ಎಲ್ಲ ಸರಕಾರಗಳು ನಾಡು ಕಟ್ಟುವ ಕೆಲಸದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ನಾಡು ನುಡಿ, ಜಲ ವಿಷಯಗಳು ಬಂದಾಗ ರಾಜಕಾರಣ ಮರೆತು ಎಲ್ಲ ಪಕ್ಷದವರೂ ಒಂದಾಗಿ ಹೋರಾಡುವುದು ನಮಗೆ ಬಳುವಳಿಯಾಗಿ ಬಂದಿದೆ' ಎಂದ ಅವರು, `ಭಾರತದಲ್ಲಿ ಅತ್ಯಂತ ಮೂಲಭೂತ ಕೈಗಾರಿಕಾ ಕೇಂದ್ರಗಳು ಕರ್ನಾಟಕದಲ್ಲಿವೆ. 180 ವಿಶ್ವದರ್ಜೆಯ ಸಂಶೋಧನಾ ಕೇಂದ್ರಗಳು ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು' ಎಂದು ಅಪೇಕ್ಷೆಪಟ್ಟರು.
ಐದು ಸಿಎಂಗಳ ಜೊತೆ ಕೆಲಸ: `ರಾಜ್ಯದಲ್ಲಿರುವ ನೈಸರ್ಗಿಕವಾದ, ವೈಜ್ಞಾನಿಕ ಸಂಪನ್ಮೂಲ, ಮಾನವ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ರಾಜ್ಯ ಕಟ್ಟಲು ಬಳಸುವುದರ ಮೇಲೆ ರಾಜ್ಯದ ಭವಿಷ್ಯ ತೀರ್ಮಾನವಾಗುತ್ತದೆ. ಐದು ಮಂದಿ ಸಿಎಂಗಳ ಜೊತೆಯಲ್ಲಿ ಕೆಲಸ ಮಾಡಿ ಆಡಳಿತ ವ್ಯವಸ್ಥೆಯನ್ನು ಸಮೀಪದಿಂದ ನೋಡಿದ್ದೇನೆ. ಆದರೆ, ರಾಜ್ಯದಲ್ಲಿ ಪ್ರವಾಹ, ಆರೋಗ್ಯ ತುರ್ತು ಪರಿಸ್ಥಿತಿ ಹಿಂದೆAದೂ ಬಂದಿರಲಿಲ್ಲ. ಜನರ ಜೀವನದ ಜೊತೆಗೆ ಅವರ ಬದುಕನ್ನೂ ಉಳಿಸಬೇಕಿತ್ತು. ಪ್ರಕೃತಿ ವಿಕೋಪದಿಂದ ಜನರನ್ನು ಉಳಿಸಿ ಅವರ ಬದುಕು ಕಟ್ಟಿಕೊಳ್ಳಲು ಬೆನ್ನೆಲುಬಾಗಿ ನಿಲ್ಲುವ ಜವಾಬ್ದಾರಿಯ ಜೊತೆಗೆ ಜನರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಎಸ್ಸಿ-ಎಸ್ಟಿ ವರ್ಗದ ಜನರ ಅಭ್ಯುದಯಕ್ಕೆ ಕಟಿಬದ್ಧವಾಗಿದೆ' ಎಂದು ಅವರು ಪುನರುಚ್ಚರಿಸಿದರು.
ಕೃಷಿ ಕ್ಷೇತ್ರದ ಅಭಿವೃದ್ಧಿ: `ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನಿ ಮೋದಿಯವರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸೆಕಂಡರಿ ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಲಾಗುತ್ತಿದೆ. ಹೈನುಗಾರಿಕೆ, ರೇಶ್ಮೆ, ತೋಟಗಾರಿಕೆ ಹಲವಾರು ಆಯಾಮಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ' ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ವಿವರಿಸಿದರು.
ದುಡಿಮೆಯೇ ದೊಡ್ಡಪ್ಪ: `ದುಡಿಯುವ ವರ್ಗದಿಂದಲೇ ಆರ್ಥಿಕತೆಯ ಬೆಳವಣಿಗೆ ಸಾಧ್ಯ. ದುಡಿಮೆಯೇ ದೊಡ್ಡಪ್ಪ ಎಂಬುದು ಸರಕಾರದ ಧ್ಯೇಯ. ಕೈಗಾರಿಕೆಗಳಿಗೆ ಆಧುನಿಕತೆ ಸ್ಪರ್ಶ, ಕೈಗಾರಿಕಾ ಸ್ನೇಹಿ ನೀತಿಗಳು, ಸಂಶೋಧನೆಗಳು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿವೆ. ದೇಶದ ವಿದೇಶಿ ಬಂಡವಾಳದ ಶೇ.45 ಕರ್ನಾಟಕದಲ್ಲಿ ಆಗಲಿರುವುದು ಹೆಮ್ಮೆಯ ಸಂಗತಿ. ಈಸ್ ಆಫ್ ಡೂಯಿಂಗ್ ಬಿಸನೆಸ್, ಸ್ಟಾರ್ಟ್ಅಪ್ಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. ತನ್ಮೂಲಕ ಕರ್ನಾಟಕದ ಜಿಡಿಪಿ ಅಭಿವೃದ್ಧಿಯಾಗುತ್ತದೆ. ದೂರದೃಷ್ಟಿ ಹಾಗೂ ಯೋಜನಾಬದ್ಧವಾದ ಕಾರ್ಯಕ್ರಮಗಳನ್ನು ಎಲ್ಲ ವಲಯಗಳಲ್ಲಿ ಹಮ್ಮಿಕೊಳ್ಳಲಾಗಿದೆ' ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ: `ಅಮೃತ ಯೋಜನೆಗಳ ಮೂಲಕ 750 ಗ್ರಾಮ ಪಂಚಾಯತಿಗಳ ಅಭಿವೃದ್ಧಿ, ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ, ಗ್ರಾಮಸ್ಥರ ಜೀವನ ಗುಣಮಟ್ಟ ಸುಧಾರಣೆ, ಹಿಂದುಳಿದ ವರ್ಗ, ಎಸ್ಸಿ-ಎಸ್ಟಿ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸ್ವಾಭಿಮಾನದ ಸ್ವಾವಲಂಬನೆಯ ಬದುಕು ನೀಡುವುದು ಸರಕಾರದ ಚಿಂತನೆ' ಎಂದು ಅವರು ಪ್ರಕಟಿಸಿದರು.
ಆರೋಗ್ಯ ಮತ್ತು ಶಿಕ್ಷಣ: `ಕೋವಿಡ್ ಎರಡನೇ ಹಾಗೂ ಮೂರನೇ ಅಲೆಯ ಸಂದರ್ಭದಲ್ಲಿ ಆರೋಗ್ಯ ಮೂಲ ಸೌಕರ್ಯಗಳನ್ನು ವೃದ್ಧಿಸಲಾಗಿದೆ. ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ. ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಅಭಿವೃದ್ಧಿ ತರಲಾಗಿದೆ. ಹಿಂದುಳಿದ ವರ್ಗ, ಎಸ್ಸಿ-ಎಸ್ಟಿ ವರ್ಗಗಳಿಗೆ ಸಾಮಾಜಿಕ ನ್ಯಾಯ, ಶಿಕ್ಷಣ, ಉದ್ಯೋಗ ಹಾಗೂ ಸಬಲೀಕರಣವನ್ನು ನೀಡುವುದೇ ಸರಕಾರದ ಗುರಿಯಾಗಿದೆ' ಎಂದು ಅವರು ತಿಳಿಸಿದರು.
ಸಂಪುಟ ಸಹೋದ್ಯೋಗಿಗಳಾದ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ಬಿ.ಸಿ.ಪಾಟೀಲ್, ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ಶಂಕರಪಾಟೀಲ, ಮುನೇನಕೊಪ್ಪ, ಮುರುಗೇಶ್ ನಿರಾಣಿ, ಆರಗ ಜ್ಞಾನೇಂದ್ರ, ಬಿ.ಸಿ.ನಾಗೇಶ್, ಆರ್.ಅಶೋಕ್, ಬಿ.ಎ.ಬಸವರಾಜು, ಎಸ್.ಟಿ.ಸೋಮಶೇಖರ್, ಉಮೇಶ್ ಕತ್ತಿ, ಎಂಟಿಬಿ ನಾಗರಾಜ್, ಮುನಿರತ್ನ, ಆನಂದ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯ ಕಾರ್ಯದರ್ಶಿ ರವಿಕುಮಾರ್, ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಆಯುಕ್ತ ಡಾ.ಪಿ.ಎಸ್.ಹರ್ಷ ಸೇರಿದಂತೆ ಇನ್ನಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
`ಜನರನ್ನು ಫಲಾನುಭವಿಗಳನ್ನಾಗಿ ಮಾಡುವುದಲ್ಲ, ಪಾಲುದಾರರನ್ನಾಗಿ ಮಾಡಬೇಕೆನ್ನುವುದು ಸರಕಾರದ ಗುರಿ. ತಲಾವಾರು ಆದಾಯದಲ್ಲಿ ಕರ್ನಾಟಕ 4ನೆ ಸ್ಥಾನದಲ್ಲಿದ್ದು, ಕೇವಲ ಶೇ.30ರಷ್ಟು ಜನ ಮಾತ್ರ ಇದಕ್ಕೆ ಕೊಡುಗೆ ನೀಡುತ್ತಿದ್ದಾರೆ. ಶೇ.70ರಷ್ಟು ಜನ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದಾರೆ. ದುಡಿಯುವ ವರ್ಗಕ್ಕೆ ಆರ್ಥಿಕ ಬಲವನ್ನು ತುಂಬುವ ಕಾರ್ಯಕ್ರಮ ರೂಪಿಸಲಾಗಿದೆ. 7,500 ಸ್ತ್ರೀಶಕ್ತಿ ಸಂಘಗಳಿಗೆ ಧನಸಹಾಯ, ಉದ್ಯೋಗ ನೀತಿಯ ಮೂಲಕ ಯುವಕರಿಗೆ ಉದ್ಯೋಗ ನೀಡುವ ಯೋಜನೆ ರೂಪಿಸಲಾಗಿದೆ'
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ