''ದೇವೇಗೌಡರ ಪಕ್ಷವೇ ಮಲಗಿರುವಾಗ ನಾವೆಲ್ಲಿ ಹೊಸ ಪಕ್ಷ ಕಟ್ಟೋದು'': ಶಾಸಕ ಯತ್ನಾಳ್
ವಿಜಯಪುರ, ಜ. 30: `ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಮುಖಂಡರು. ಅವರು ಕಾಂಗ್ರೆಸ್ನಲ್ಲಿ ಕೊನೆಯ ದಿನಗಳನ್ನು ಎಣಿಸುತ್ತಿದ್ದು, ಅವರು ಬಿಜೆಪಿಗೆ ಬಂದರೆ ವರಿಷ್ಟರು ಈ ಬಗ್ಗೆ ತೀರ್ಮಾನ ಮಾಡಲಿದ್ದಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.
ರವಿವಾರ ನಗರದಲ್ಲಿ ಮಾತನಾಡಿದ ಅವರು, `ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಆದರೆ, ಅವರ ಮನೆಯವರೆ ಅವರ ಜೊತೆ `ಟಚ್'ನಲ್ಲಿ ಇಲ್ಲ. ಹೀಗಿರುವಾಗಿ ನಮ್ಮ ಪಕ್ಷದ ಶಾಸಕರು ಆ ಪಕ್ಷದೊಂದಿಗೆ ಸಂಪರ್ಕದಲ್ಲಿ ಖಂಡಿತ ಸಾಧ್ಯವೇ ಇಲ್ಲ' ಎಂದು ಸಿದ್ದರಾಮಯ್ಯ ಹೇಳಿಕೆಗೆ ಇದೇ ಸಂದರ್ಭದಲ್ಲಿ ತಿರುಗೇಟು ನೀಡಿದರು.
`ದೇವೇಗೌಡರ ಪಕ್ಷವೇ ಮಲಗಿರುವಾಗ ಇನ್ನೂ ನಾವೆಲ್ಲಿ ಹೊಸ ಪಕ್ಷ ಕಟ್ಟೋದು, ಪಕ್ಷ ಕಟ್ಟಲು ಹಣಬೇಕು. ನಮ್ಮ ಬಳಿ ಹಣ ಇಲ್ಲ. ನಮ್ಮ ಹತ್ತಿರ ಲೂಟಿ ಮಾಡಿದ ಹಣ ಇಲ್ಲ. ಇದ್ದಿದ್ದರೆ ಮಾಡುತ್ತಿದ್ದೆವು. ನಾವು ಬಿಜೆಪಿ ಪಕ್ಷ ಕಟ್ಟಿದವರು. ಜಾರಕಿಹೊಳಿ ಹಾಗೂ ನಾವು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಚರ್ಚೆ ಮಾಡಿದ್ದೇವೆ. ದೇವರ ಸಾಕ್ಷಿಯಾಗಿ ಯಾವುದೇ ಪಕ್ಷ ಕಟ್ಟುವುದಿಲ್ಲ' ಎಂದು ರಮೇಶ್ ಜಾರಕಿಹೊಳಿ ಕುರಿತು ಯತ್ನಾಳ್ ಸ್ಪಷ್ಟಣೆ ನೀಡಿದರು.
'ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಟರು ನಮ್ಮೊಂದಿಗೆ ಇದ್ದು, ಸಚಿವ ಸ್ಥಾನ ವಂಚಿತ ವಿಜಯಪುರಕ್ಕೆ ಈ ಬಾರಿ ಮಂತ್ರಿ ಸ್ಥಾನದ ಅವಕಾಶ ಸಿಕ್ಕೇ ಸಿಗುತ್ತದೆ. ನೂರಕ್ಕೆ ನೂರರಷ್ಟು ವಿಜಯಪುರ ಜಿಲ್ಲೆಗೆ ಮಂತ್ರಿ ಸ್ಥಾನ ದೊರೆಯಲಿದೆ ಎಂದ ಅವರು, ನಗರದ ಅಭಿವೃದ್ಧಿಗೆ ಬಸವರಾಜ ಬೊಮ್ಮಾಯಿ 52 ಕೋಟಿ ರೂ.ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದಾರೆ. ಇನ್ನೂ 200 ಕೋಟಿ ಹಣ ನೀಡಲಿದ್ದು, ಮುಂದಿನ 6 ತಿಂಗಳಲ್ಲಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳಾಗಲಿವೆ ಎಂದರು.
`ಸಚಿವ ಮುರುಗೇಶ್ ನಿರಾಣಿ ಅಂತಹರವರಿಗೆಲ್ಲ ಅಂಜಿ ರಾಜಕಾರಣ ಮಾಡುವವನಲ್ಲ ನಾನು. ನಾನೇ ನಿರಾಣಿ ಅವರನ್ನು ಬಿಜೆಪಿಗೆ ತಂದು ಟಿಕೆಟ್ ಕೊಡಿಸಿದ್ದು, ಅವರಿಗೇಕೆ ನನ್ನನ್ನು ಹೋಲಿಕೆ ಮಾಡುತ್ತೀರಿ'
-ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಶಾಸಕ