×
Ad

ಸರಕಾರಕ್ಕೆ ಸಹಕಾರ ನೀಡುವುದು ಬಿಟ್ಟು ಟೀಕೆ ಮಾಡುವುದು ಎಷ್ಟು ಸರಿ: ಕಾಂಗ್ರೆಸ್ ನಾಯಕರಿಗೆ ಸಚಿವ ಸುಧಾಕರ್ ಪ್ರಶ್ನೆ

Update: 2022-01-30 21:34 IST

ಬೆಂಗಳೂರು, ಜ. 30: `ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾಂಗ್ರೆಸ್ ನಾಯಕರು ತಮ್ಮ ನಿರಾಧಾರ, ಸತ್ಯಕ್ಕೆ ದೂರವಾದ ಆರೋಪಗಳ ಮೂರನೇ ಅಲೆಯನ್ನು ಮುಂದುವರೆಸಿರುವುದು ವಿಷಾದಕರ. ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣ ಕೇವಲ ಶೇ.1ರಷ್ಟು ಇದ್ದು, ಮೂರನೇ ಅಲೆಯಲ್ಲಿ ಶೇ.1.9ರಷ್ಟು ಜನ ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಇದಕ್ಕೆ ಮುಖ್ಯ ಕಾರಣ ಲಸಿಕಾಕರಣ. ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಸಹಕಾರದಿಂದ ರಾಜ್ಯದಲ್ಲಿ 18 ವರ್ಷಕ್ಕೂ ಹೆಚ್ಚು ವಯೋಮಾನದವರಿಗೆ ಶೇ.100ರಷ್ಟು ಮೊದಲ ಡೋಸ್ ಪೂರೈಸಿದ್ದು, ಶೇ.87.6ರಷ್ಟು ಜನರಿಗೆ ಎರಡೂ ಡೋಸ್ ನೀಡಲಾಗಿದೆ. ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕತರು, ಹಿರಿಯ ನಾಗರೀಕರಲ್ಲಿ ಶೇ.51ರಷ್ಟು ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.

`ಸಾಂಕ್ರಾಮಿಕದ ಸಂದರ್ಭದಲ್ಲಿ ಸರಕಾರಕ್ಕೆ ಸಹಕಾರ ನೀಡುವುದು ಬಿಟ್ಟು ರಾಜಕೀಯ ಲಾಭ ಪಡೆಯಲು ವಿನಾಕಾರಣ ಟೀಕೆ ಮಾಡುವುದು ಎಷ್ಟು ಸರಿ? ಕೊರೋನ ಎಂಬುದೇ ಇಲ್ಲ, ಅದು ಬಿಜೆಪಿ ಸೃಷ್ಟಿ ಎನ್ನುವ ಅಧ್ಯಕ್ಷರು ಒಂದು ಕಡೆ, ಕೊರೊನನಿಯಂತ್ರಣದ ಬಗ್ಗೆ ಮಾತನಾಡುವ ಪ್ರತಿಪಕ್ಷ ನಾಯಕರು ಇನ್ನೊಂದು ಕಡೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು?' ಎಂದು ಸುಧಾಕರ್ ಪ್ರಶ್ನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News