ಕಾಂಗ್ರೆಸ್ ಒಳ ಜಗಳ ಬೀದಿಗೆ ಬಂದಿದೆ: ಸಚಿವ ಆರ್.ಅಶೋಕ್
ಬೆಂಗಳೂರು, ಜ. 30: `ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಡುವಿನ ಒಳಜಗಳ ಬೀದಿಗೆ ಬಂದಿದೆ. ಆದರೂ ಉಭಯ ನಾಯಕರು ಅಧಿಕಾರಕ್ಕಾಗಿ ತಿರುಕನ ಕನಸು ಕಾಣುತ್ತಿದ್ದಾರೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಅಶೋಕ್ ಪಟ್ಟಣ್ ಅವರ ನಡುವಿನ ಪಿಸುಮಾತು ಮಾಧ್ಯಮಗಳ ಮೂಲಕ ಬಯಲಾಗಿದೆ. ಈ ಇಬ್ಬರು ನಾಯಕರ ಒಳಜಗಳದ ಬೇಗುದಿಯಿಂದ ಕಾಂಗ್ರೆಸ್ ನಲುಗಿ ಹೋಗಿದೆ. ವೈಯಕ್ತಿ ವರ್ಚಸ್ಸಿಗಾಗಿ ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ. ಎಲ್ಲರೂ ಒಗ್ಗಟಾಗಿದ್ದೇವೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯನವರ ಪಿಸು ಮಾತಿನಿಂದಲೇ ಎಲ್ಲ ಬಹಿರಂಗವಾಗಿದೆ' ಎಂದು ಟೀಕಿಸಿದರು.
ಅಭಿವೃದ್ಧಿ ವಿಚಾರಕ್ಕೆ ಜಗಳ: ಮಾಜಿ ಸಚಿವ ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ನಡುವೆ ಅಭಿವೃದ್ಧಿ ವಿಚಾರಕ್ಕೆ ಜಗಳವಾಗಿದೆಯೇ ಹೊರತು ಬೇರೇನು ಇಲ್ಲ. ಬಿಜೆಪಿಯಲ್ಲಿ ಯಾವುದೇ ರೀತಿಯ ಒಳಜಗ ¼ ಇಲ್ಲವೇ? ಇಲ್ಲ ಎಂದ ಅಶೋಕ್, ಸಚಿವರ ಕಾರ್ಯವೈಖರಿ ವಿರುದ್ಧವೇ ದೂರು ನೀಡಿದ್ದಾರಲ್ಲ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
`ನಗರದಲ್ಲಿ ಸಂಚಾರ ಸಮಸ್ಯೆಗೆ ಸಂಬಂಧಿಸಿದಂತೆ ಸಂಚಾರ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದು. ಪೊಲೀಸರು ಮತ್ತು ಜನಸಾಮಾನ್ಯರ ನಡುವೆ ಜನಸ್ನೇಹಿ ವ್ಯವಸ್ಥೆ ಕಲ್ಪಿಸಬೇಕು. ವಾಹನಗಳನ್ನು ಟೋಯಿಂಗ್ ಮಾಡುವ ವಿಚಾರದಲ್ಲಿ ಆಗುತ್ತಿರುವ ಘಟನೆಗಳ ಬಗ್ಗೆ ಸೂಕ್ತ ನಿರ್ದೇಶನ ಕೊಡುತ್ತೇವೆ. ನಗರದ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ರವಿಕಾಂತೇಗೌಡ ಅವರ ಜತೆ ಮಾತುಕತೆ ನಡೆಸಲಾಗಿದೆ' ಎಂದು ಉತ್ತರಿಸಿದರು.