×
Ad

ಬಾಗಲಕೋಟೆ: ಮಹಾಲಿಂಗಪುರ ತೋಟದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಇಬ್ರಾಹೀಂ ಸುತಾರ ಅಂತ್ಯಕ್ರಿಯೆ

Update: 2022-02-05 22:14 IST

ಬೆಂಗಳೂರು/ಬಾಗಲಕೋಟೆ, ಫೆ. 5: ಪದ್ಮಶ್ರೀ ಪುರಸ್ಕೃತ, ಆಧುನಿಕ ಸೂಫಿ ಸಂತ, ಕನ್ನಡದ ಕಬೀರ ಎಂದೇ ಖ್ಯಾತಿ ಗಳಿಸಿದ್ದ ಪ್ರವಚನ, ಸಂವಾದದ ಮೂಲಕ ಹಿಂದೂ-ಮುಸ್ಲಿಮರ ನಡುವೆ ಭಾವೈಕ್ಯತೆ ಕೊಂಡಿಯೇ ಆಗಿದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಇಬ್ರಾಹೀಂ ಸುತಾರ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶ್ರೀಯುತರು ಮಹಲಿಂಗಪುರದಲ್ಲಿನ ತಮ್ಮ ಭಾವೈಕ್ಯ ನಿವಾಸದಲ್ಲಿ ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಅವರಿಗೆ 82 ವರ್ಷ ವಯಸ್ಸಾಗಿತ್ತು. ಇಬ್ರಾಹೀಂ ಸುತಾರ ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಸಂಖ್ಯೆ ಬಂಧು-ಮಿತ್ರರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

1940ರ ಮೇ 5ರಂದು ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ನಬೀಸಾಬ್ ಹಾಗೂ ಅಮೀನಾಬೀ ದಂಪತಿಗೆ ಜನಿಸಿದ ಇಬ್ರಾಹೀಂ ಸುತಾರ ಅವರು ಬಡತನದ ಕಾರಣ ಕೇವಲ ಮೂರನೆ ತರಗತಿಯವರೆಗೆ ಉರ್ದು ಶಿಕ್ಷಣವನ್ನ ಪಡೆದವರು. ಅನಂತರ ಶಾಲೆಯನ್ನ ಬಿಟ್ಟು ಬಾಲ್ಯದಲ್ಲಿಯೇ ರಮಝಾನ ಜಾಗರಣ ಸಂಘ ಕಟ್ಟಿ, ನಾಡಿನ ಭಾವೈಕ್ಯತೆಯ ಸೌಹಾರ್ದ ಸೇವೆಗೆ ಚಿಕ್ಕ ವಯಸ್ಸಿನಿಂದಲೇ ತೊಡಗಿದವರು. ಊರಿನ ಬಹುಸಂಖ್ಯಾತರ ಉದ್ಯೋಗ ನೇಕಾರಿಕೆಯನ್ನೇ ಸುತಾರ ಕಲಿತರು. ಬದುಕಿಗೆ ಅದೇ ದಾರಿಯಾಯಿತು.

ಚಿಕ್ಕ ವಯಸ್ಸಿನಲ್ಲೆ ಮಸೀದಿಗೆ ಹೋಗಿ ಅಲ್ಲಿ ಧರ್ಮಗುರುಗಳ ಮಾರ್ಗದರ್ಶನದಲ್ಲಿ ನಮಾಜು, ಪ್ರಾರ್ಥನೆ ಕಲಿತು ಕುರಾನ್ ಅಧ್ಯಯನ ಮಾಡಿದರು. ಇದೇ ವೇಳೆ ಬೇರೆ ಧರ್ಮಗಳ ಸಾರ ಅರಿಯಲು ಊರಿನ ಭಜನಾ ಸಂಘ ಒತ್ತಾಸೆ ನೀಡಿತು. ಅಲ್ಲಿನ ಧಾರ್ಮಿಕರ ಸಾಂಗತ್ಯದಲ್ಲಿ ತತ್ವಪದ, ವಚನಗಳನ್ನು ಕಲಿತರು. ಉಪನಿಷತ್ತಿನ ಸಾರ ಅರಿತುಕೊಂಡರು. ರಮಾಜಾನ್ ವೇಳೆ ಮುಂಜಾನೆ ಜನರನ್ನು ಎಬ್ಬಿಸಲು ಹಳ್ಳಿಗಳಿಗೆ ಹಾಡುತ್ತಾ ಹೋಗುತ್ತಿದ್ದ ತಂಡದಲ್ಲಿ ಸಂಚರಿಸಿ ಜೀವನಾನುಭವ ಪಡೆದುಕೊಂಡ ಅವರು, ಮಹಾಲಿಂಗಪುರದಲ್ಲಿ ಬಸವಾನಂದ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಪ್ರತಿವರ್ಷ ಒಂದು ತಿಂಗಳು ಕಾಲ ಬೆಳಗ್ಗೆ ಹಾಗೂ ಸಂಜೆ ನಡೆಯುತ್ತಿದ್ದ ಪ್ರವಚನ ಕೇಳುತ್ತಿದ್ದರು. 

ದೇವರು, ಧರ್ಮ, ಆರಾಧನೆಯ ವಿಧಾನ ಬೇರೆ ಬೇರೆಯಾದರೂ ಸತ್ಯ ಒಂದೇ ಎಂಬ ಸಂಗತಿ ಅರಿವಿಗೆ ಬಂದಿತು. ಜೊತೆಗೆ ತತ್ವಪದಗಳ ಅರಿವು, ನಿಜಗುಣ ಶಿವಯೋಗಿಗಳ ಶಾಸ್ತ್ರ, ಭಗವದ್ಗೀತೆಯ ಅಧ್ಯಯನ ಭವದ ಅರಿವು ವಿಸ್ತಾರಗೊಳಿಸಿತು ಎಂದು ವಿನಮ್ರವಾಗಿ ಹೇಳುತ್ತಿದ್ದರು. 1970ರಲ್ಲಿ ಸಾಧುನ ಗುಡಿಯಲ್ಲಿಯೇ ಸಮಾನ ಮನಸ್ಕ ಗೆಳೆಯರು ಸೇರಿ `ಭಾವೈಕ್ಯದ ಜನಪದ ಸಂಗೀತ ಮೇಳ' ಆರಂಭಿಸಿದ್ದರು. ಅದರ ಮೂಲಕ ಭಜನೆ, ತತ್ವಪದಗಳ ಹಾಡುತ್ತಾ ಜನಸಾಮಾನ್ಯರಿಗೆ ಧರ್ಮದ ಸಾರ ಮನವರಿಕೆ ಮಾಡತೊಡಗಿದರು.
1980ರಲ್ಲಿ ತರೂರಿನ ಶಂಭುಲಿಂಗ ಶಾಸ್ತ್ರಿಗಳು ಮೊದಲ ಬಾರಿಗೆ ಮಹಾರಾಷ್ಟ್ರದ ಜತ್ ತಾಲೂಕಿನ ಸಿಂಧೂರಿನಲ್ಲಿ(ವೀರ ಸಿಂಧೂರ ಲಕ್ಷ್ಮಣನ ಹುಟ್ಟೂರು) ಶ್ರಾವಣ ಮಾಸದಲ್ಲಿ ತಿಂಗಳ ಕಾಲ ಪ್ರವಚನ ಮಾಡುವ ಕಾರ್ಯಕ್ಕೆ ಸುತಾರ ಅವರನ್ನು ಕಳುಹಿಸಿದ್ದರು. ಮಹಾರಾಷ್ಟ್ರದಲ್ಲಿನ ಕನ್ನಡ ನೆಲದಲ್ಲಿ ಭಾವೈಕ್ಯತೆ ಹರಡುವ ಚೈತ್ರ ಯಾತ್ರೆ ಸುತಾರ ಆರಂಭಿಸಿದ್ದರು. ಅಲ್ಲಿಂದ ಪ್ರತಿ ವರ್ಷ ನಾಡಿನ ಉದ್ದಗಲಕ್ಕೂ ಪ್ರವಚನ, ಸಂವಾದ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದರು.

ಧರ್ಮದ ಕಠಿಣ ಅಂಶಗಳನ್ನು ಸರಳವಾಗಿ ಜನಸಾಮಾನ್ಯರಿಗೆ ತಿಳಿಯುವಂತೆ ಮಾಡಲು ಪ್ರಶ್ನೋತ್ತರದ ಜೊತೆಗೆ ತತ್ವಪದ ಹಾಡುವುದನ್ನು ರೂಢಿಸಿಕೊಂಡಿದ್ದರು. ಸುತಾರ ಅವರಿಗೆ ನಾಲ್ಕು ವರ್ಷಗಳ ಹಿಂದೆ (2018ರ ಎಪ್ರಿಲ್ 2) ಕೇಂದ್ರ ಸರಕಾರ `ಪದ್ಮಶ್ರೀ ಪುರಸ್ಕಾರ' ನೀಡಿ ಗೌರವಿಸಿತ್ತು. ನಾಡಿನ ಉದ್ದಗಲಕ್ಕೂ ಸಂಚರಿಸಿ ತತ್ವ ಪದ, ವಚನ, ಸೂಫಿ ಗೀತೆಗಳನ್ನು ಹಾಡುತ್ತಾ ಪ್ರವಚನ, ಸಂವಾದಗಳನ್ನು ನಡೆಸಿಕೊಡುತ್ತಿದ್ದ ಸಂತ ಕಬೀರ ಇಬ್ರಾಹೀಂ ಸುತಾರ ಅವರು ಉಸಿರು ನಿಲ್ಲಿಸಿದ್ದಾರೆ.

ಅಂತ್ಯಕ್ರಿಯೆ: ಇಬ್ರಾಹಿಂ ಸುತಾರ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಮಹಾಲಿಂಗಪುರದ ಅವರ ತೋಟದಲ್ಲಿ ಸಂಜೆ ನೆರವೇರಿಸಲಾಯಿತು. ಸುತಾರ ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನ ಮಹಾಲಿಂಗಪುರ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಮೃತರ ಗೌರವಾರ್ಥವಾಗಿ ಮಹಾಲಿಂಗಪುರ ಪಟ್ಟಣದ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಅಂಗಡಿ-ಮುಗ್ಗಟ್ಟುಗಳು ಮುಚ್ಚಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News