ʼʼಸಂವಿಧಾನ ಭಗವದ್ಗೀತೆಗಿಂತ ಮೇಲು, ಸಂವಿಧಾನ ಬದ್ಧವಾಗಿ ನಡೆಯುತ್ತೇನೆʼʼ
ಬೆಂಗಳೂರು: ಉಡುಪಿ ಪಿಯು ಕಾಲೇಜಿನ ವಿವಾದ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್, “ಎಲ್ಲಾ ಭಾವನೆಗಳನ್ನು ಬದಿಗಿರಿಸಿ ಸಂವಿಧಾನ ಏನು ಹೇಳುತ್ತದೋ ಅದರಂತೆ ನಡೆಯುತ್ತೇವೆ. ಸಂವಿಧಾನ ನನಗೆ ಭಗವತ್ ಗೀತೆಗಿಂತ ಮೇಲೆ. ನಾನು ಸಂವಿಧಾನಕ್ಕೆ ನೀಡಿರುವ ಪ್ರಮಾಣ ವಚನಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ಉಡುಪಿ ಪಿಯು ಕಾಲೇಜಿನ ಆಡಳಿತ ಮಂಡಳಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರ ಕೈಗೆತ್ತಿಕೊಂಡಿದ್ದು, ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶ ನೀಡುವಂತೆ ಕೋರಿ ಅರ್ಜಿಯಲ್ಲಿ ಕೋರಿದ್ದಾರೆ. ಹಿಜಾಬ್ ವಿವಾದದ ಕುರಿತಂತೆ ಇದುವರೆಗೂ ನಾಲ್ಕು ವಿವಿಧ ಅರ್ಜಿಗಳನ್ನು ಹೈಕೋರ್ಟ್ಗ ಸಲ್ಲಿಸಲಾಗಿದೆ.
ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೇಶಮ್ ಫಾರೂಕ್ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ಸಂವಿಧಾನದ 14 ಮತ್ತು 25ನೇ ವಿಧಿಯಡಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕಿನ ಭಾಗ ಎಂದು ವಾದಿಸಿದ್ದಾರೆ. ಹಿಜಾಬ್ ಧರಿಸಿದ ಒಂದೇ ಕಾರಣಕ್ಕಾಗಿ ಶಿಕ್ಷಣ ಸಂಸ್ಥೆಯು ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿ ತಾರತಮ್ಯ ಮಾಡುತ್ತಿವೆ ಎಂದು ಅರ್ಜಿದಾರ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯರ ಪರವಾಗಿ ಹಿರಿಯ ವಕೀಲ ದೇವದತ್ತ ಕಾಮತ್ ಹಾಗೂ ಮಹಮ್ಮದ್ ತಾಹೀರ್ ವಾದಿಸುತ್ತಿದ್ದು, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಸರ್ಕಾರದ ಪರ ವಾದ ಮಂಡಿಸುತ್ತಿದ್ದಾರೆ.
“ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್ ಧರಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆಯೇ ಎಂದು ಪರಿಶೀಲಿಸಿ. ಕಾಲೇಜು ಅಭಿವೃದ್ದಿ ಮಂಡಳಿಗೆ ಸಮವಸ್ತ್ರ ನಿರ್ಧರಿಸುವ ಅಧಿಕಾರವನ್ನು ಸರ್ಕಾರ ನೀಡಿದೆ” ಎಂದು ಸರ್ಕಾರ ಪರ ವಕೀಲ ಪ್ರಭುಲಿಂಗ ಹೇಳಿದ್ದಾರೆ.
ಪವಿತ್ರ ಕುರಾನ್ ಪ್ರಕಾರ ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಭಾಗವಾಗಿದೆ. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎನ್ನುವುದು ನಮ್ಮ ಮೊದಲ ಕೋರಿಕೆ ಎಂದು ದೇವದತ್ತ ಕಾಮತ್ ವಾದಿಸಿದ್ದಾರೆ.
“ಎರಡನೆ ಮನವಿ, ಇಷ್ಟವಿರುವ ಬಟ್ಟೆ ಧರಿಸುವ ಸ್ವಾತಂತ್ರ್ಯ ಸಂವಿಧಾನದ 19(ಎ) ಅಡಿ ನೀಡಿದ್ದು 19(6) ಅಡಿಯಲ್ಲಿ ಮಾತ್ರವೇ ಅದನ್ನು ನಿರ್ಬಂಧಿಸಬಹುದು. ಏನನ್ನು ಧರಿಸಬಹುದು ಎನ್ನುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯವು ಒಳಗೊಳ್ಳುತ್ತದೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ಖಾಸಗಿ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು. ವಸ್ತ್ರಧರಿಸುವ ಹಕ್ಕು ಇದರಡಿಯೇ ಬರುತ್ತದೆ” ಎಂದು ಕಾಮತ್ ವಾದಿಸಿದ್ದಾರೆ.
ಧರ್ಮದ ಅಗತ್ಯ ಆಚಾರ ಯಾವುದು? ಅನಗತ್ಯ ಆಚಾರ ಯಾವುದು ಎನ್ನುವುದನ್ನು ನಿರ್ಧರಿಸುವ ಅಧಿಕಾರ ಸರ್ಕಾರ ಕ್ಕಿಲ್ಲ. ಅದು ನ್ಯಾಯಾಂಗದ ಪರಿಮಿತಿಗೆ ಬರುವಂಥದ್ದು. ಒಂದು ಆಚರಣೆಯನ್ನು ಒಂದು ಧರ್ಮದಿಂದ ಹೊರಗಿಟ್ಟರೆ ಆಗ ಆ ಧರ್ಮದ ಮೂಲರಚನೆಯಲ್ಲಿ ವ್ಯತ್ಯಾಸವಾಗುತ್ತದೆಯೇ ಎನ್ನುವುದು ಪರೀಕ್ಷೆ. ಧಾರ್ಮಿಕ ಆಚರಣೆಯನ್ನು ಜಾತ್ಯತೀತ ಆಲೋಚನೆಗಳಿಂದ ಪರೀಕ್ಷಿಸಲಾಗದು. ಹಾಗಾಗಿ, ಧರ್ಮಕ್ಕೆ ಏನು ಅಗತ್ಯ ಅನ್ನುವುದನ್ನು ನಮ್ಮ ಜಾತ್ಯಾತೀತ ಆಲೋಚನೆಗಳಿಂದ ನಿರ್ಧರಿಸಲಾಗದು” ಎಂದು ಕಾಮತ್ ಹಿಂದಿನ ಆದೇಶಗಳನ್ನು ಉಲ್ಲೇಖಿಸಿ ನ್ಯಾಯಪೀಠದ ಮುಂದೆ ವಾದ ಮಂಡಿಸಿದ್ದಾರೆ.
“ಋತುಮತಿಯಾದ ಬಳಿಕ ಹೆಣ್ಣು ತನ್ನ ಮುಖ ಹಾಗೂ ಕೈಗಳನ್ನು ಅಪರಿಚಿತರಿಗೆ ತೋರಿಸುವುದು ಸರಿಯಲ್ಲ” ಎಂದು ಕೇರಳ ಹೈಕೋರ್ಟ್ ತೀರ್ಪಿನಲ್ಲಿರುವ ಹದೀಸ್ ಒಂದನ್ನು ದೇವದತ್ ಕಾಮತ್ ಉಲ್ಲೇಖಿಸಿದ್ದಾರೆ.