ಈ ಸಂಘಟನೆಗಳಿಗೆ ಸರಕಾರದ ಬೆಂಬಲವಿದೆಯೇ? : ನಾರಾಯಣ ಗೌಡ ಪ್ರಶ್ನೆ

Update: 2022-02-08 14:14 GMT

ಬೆಂಗಳೂರು: ಕರ್ನಾಟಕದ ಶಾಲೆ ಕಾಲೇಜುಗಳಲ್ಲಿ ಭುಗಿಲೆದ್ದಿರುವ ವಿವಾದ ದುರುದ್ದೇಶಪೂರ್ವಕವಾಗಿದ್ದು, ನಾಡಿನ ಶಾಂತಿ, ಸೌಹಾರ್ದತೆ, ಸಹಬಾಳ್ವೆಗೆ ಧಕ್ಕೆ ತಂದಿದೆ. ಕರ್ನಾಟಕವನ್ನು ಉತ್ತರ ಪ್ರದೇಶವನ್ನಾಗಿಸುವ ಈ ಕುಟಿಲ ತಂತ್ರವನ್ನು ರಾಜ್ಯದ ಶಾಂತಿಪ್ರಿಯ ನಾಗರಿಕರು ವಿಫಲಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ ನಾರಾಯಣ ಗೌಡ ಮನವಿ ಮಾಡಿದ್ದಾರೆ. 

ಉಡುಪಿಯ ಒಂದು ಕಾಲೇಜಿನಲ್ಲಿ ಆರಂಭಗೊಂಡ ಸಮಸ್ಯೆ ಇಡೀ ರಾಜ್ಯಕ್ಕೆ ವ್ಯಾಪಿಸಲು ಕಾರಣವಾದರೂ ಏನು? ಎಲ್ಲೆಡೆ ಶಾಂತಿ ಕದಡಿ ಗಲಭೆಯೆಬ್ಬಿಸಲು ಹಿನ್ನೆಲೆಯಲ್ಲಿ ನಿಂತು ಸಂಚು ರೂಪಿಸಿದ ಸಂಘಟನೆಗಳಾದರೂ ಯಾವುವು? ಈ ಸಂಘಟನೆಗಳಿಗೆ ಸರ್ಕಾರದ ಬೆಂಬಲವಿದೆಯೇ? ಎಂದು ಪ್ರಶ್ನಿಸಿದ್ದಾರೆ. 

ವಿವಾದ ಆರಂಭಗೊಂಡಾಗಲೇ ಸರ್ಕಾರ ಮಧ್ಯಪ್ರವೇಶಿಸಿ, ಸೌಹಾರ್ದಯುತವಾಗಿ ಬಗೆಹರಿಸಬಹುದಿತ್ತು. ಆದರೆ ಸರ್ಕಾರದ ಮಂತ್ರಿಗಳು, ಸಂಸದರು, ಶಾಸಕರುಗಳು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿ ಪ್ರತ್ಯಕ್ಷವಾಗಿ ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದು ಅಕ್ಷಮ್ಯ ಎಂದು ಹೇಳಿದ್ದಾರೆ. 

ಶಾಲೆ, ಕಾಲೇಜುಗಳಲ್ಲಿ ಶಿರವಸ್ತ್ರ ಧರಿಸಬಹುದೇ ಇಲ್ಲವೇ ಎಂಬುದನ್ನು ಭಾರತ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಲಯಗಳು ತೀರ್ಮಾನಿಸಲಿ.‌‌ ಆದರೆ ನ್ಯಾಯಾಲಯದ ವಿಚಾರಣೆ ನಡೆಯುತ್ತಿರುವಾಗಲೇ ಮಕ್ಕಳನ್ನು ಬಳಸಿಕೊಂಡು ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. 

ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದರು. ನಮ್ಮದು ಶರಣರು,‌ ಸಂತರ ನಾಡು. ಇಂಥ ನಾಡಿಗೆ ಧರ್ಮಗಳ ಹೆಸರಲ್ಲಿ ಬೆಂಕಿ ಹಚ್ಚುತ್ತಿರುವ ದುಷ್ಟರು ಭವಿಷ್ಯದ ದಿನಗಳನ್ನು ಇನ್ನಷ್ಟು ಅಪಾಯಕಾರಿಯಾಗಿಸುತ್ತಿದ್ದಾರೆ. 

ಕಳೆದ ಮೂರು-ನಾಲ್ಕು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿ ನಿಜಕ್ಕೂ ನಾಡಿನ ಭವಿಷ್ಯದ ಕುರಿತು ಆತಂಕವಾಗುತ್ತಿದೆ. ನಾವು ಎಂಥ ಸಮಾಜವನ್ನು ಕಟ್ಟುತ್ತಿದ್ದೇವೆ.? ಹದಿನೈದು-ಹದಿನಾರು ವಯಸ್ಸಿನ ಮಕ್ಕಳಲ್ಲಿ ಧರ್ಮದ್ವೇಷದ ವಿಷಬೀಜ‌ ಬಿತ್ತಲಾಗಿದೆ. ಇದರ ಪರಿಣಾಮ ಘೋರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಶಾಲೆ-ಕಾಲೇಜುಗಳಿಗೆ ಮೂರು‌ದಿನಗಳ ಕಾಲ ರಜೆ ಘೋಷಿಸಿರುವುದು ಸರಿಯಾದ ಕ್ರಮ. ಇನ್ನಷ್ಟು ಅಪಾಯಗಳು‌ ಆಗದಂತೆ‌ ತಡೆಯುವುದು ಅನಿವಾರ್ಯವಾಗಿತ್ತು. ಪರಿಸ್ಥಿತಿ ತಿಳಿಯಾದ ನಂತರ ಶಾಲೆ-ಕಾಲೇಜುಗಳನ್ನು ಆರಂಭಿಸಬೇಕು. ಪ್ರಚೋದನಾಕಾರಿಯಾಗಿ ಮಾತಾಡುವವರ ಬಾಯಿ ಮುಚ್ಚಿಸಬೇಕು.‌ ಸಮಾಜಘಾತಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕೋವಿಡ್ ನಿಂದಾಗಿ ಎರಡು ವರ್ಷಗಳ ಕಾಲ ಶಾಲೆ-ಕಾಲೇಜುಗಳು ಸರಿಯಾಗಿ ತೆರೆಯಲಿಲ್ಲ. ಈಗ ಆರಂಭವಾಗಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂಘರ್ಷಗಳಲ್ಲಿ ತೊಡಗಿ ತಮ್ಮ ಭವಿಷ್ಯ ಹಾಳುಮಾಡಿಕೊಳ್ಳಬಾರದು. ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾದುದು. ಅದನ್ನು‌ ಹಾಳು ಮಾಡಿಕೊಳ್ಳಬಾರದು ಎಂದು ಟಿ.ಎ ನಾರಾಯಣ ಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News