×
Ad

ಹಿಜಾಬ್ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಹಿಳಾ ಸಂಘಟನೆಗಳ ಹಕ್ಕೊತ್ತಾಯ ಪತ್ರ

Update: 2022-02-10 21:13 IST

ಬೆಂಗಳೂರು, ಫೆ.10: ರಾಜ್ಯದಲ್ಲಿ ಹಬ್ಬಿರುವ ಹಿಜಾಬ್-ಕೇಸರಿ ವಿವಾದದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ರಾಜ್ಯದ ಮಹಿಳಾ ಸಂಘಟನೆಗಳು, ಈ ವಿಚಾರ ನಮ್ಮನ್ನು ಬಹುದೊಡ್ಡ ಆಘಾತಕ್ಕೆ ನೂಕಿದೆ ಎಂದು ಆತಂಕ ವ್ಯಕ್ತಪಡಿಸಿವೆ. 

ಇಷ್ಟು ದಿನ ಗೆಳೆಯರಾಗಿ ಒಟ್ಟಿಗೆ ಕುಳಿತು ಕಲಿಯುತ್ತಿದ್ದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಧರ್ಮದ ವಿಷಬೀಜವನ್ನು ಬಿತ್ತಿ ಪರಸ್ಪರ ದ್ವೇಷಿಸುವಂತೆ ಮಾಡಲಾಗಿದೆ. ಹೀಗೆ ಹರಡುವ ಮುಸ್ಲಿಂ ದ್ವೇಷವು ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ ಮತ್ತು ‘ವಸುಧೈವ ಕುಟುಂಬಕಂ’ ಎಂಬ ವಿಚಾರಧಾರೆಗೆ ದೊಡ್ಡ ಹೊಡೆತ ಕೊಡುತ್ತದೆ ಎಂದಿವೆ.

ಈಗ ಹಿಜಾಬ್ ಪರ ಮತ್ತು ವಿರುದ್ಧವಾಗಿ ಬೇಕಾದಷ್ಟು ವಾದ ವಿವಾದಗಳು ಹುಟ್ಟಿಕೊಂಡಿವೆ. ಆದರದು ಮುಖ್ಯ ಅಲ್ಲವೇ ಅಲ್ಲ. ತಿಳಿವಳಿಕೆಯುಳ್ಳ ಪ್ರಜಾಪ್ರಭುತ್ವದ ಸಮಾಜದಲ್ಲಿ ನಮ್ಮ ಆಹಾರ, ಉಡುಪು, ಆಚರಣೆಗಳಿಗೆ ಆಯ್ಕೆ ಸ್ವಾತಂತ್ರ್ಯ ಇರುವಂತೆಯೇ ಹಿಜಾಬ್ ಕೂಡ ಅವರವರ ವೈಯಕ್ತಿಕ ಹಾಗೂ ವ್ಯಕ್ತಿಗತ ಆಯ್ಕೆಯಾಗಿದೆ. ಈ ಸ್ವಾತಂತ್ರ್ಯವು ಕೂಡಾ ಆಯಾ ಮಹಿಳೆಯ ವೈಯಕ್ತಿಕ ಆಯ್ಕೆಯಾಗಬೇಕೇ ಹೊರತು ಅವರವರ ಸಮುದಾಯದ ಪಿತೃಪ್ರಾಧಾನ್ಯದ ನಿರ್ಣಯವಾಗಕೂಡದು. ಸರಕಾರದ ನಿರ್ಧಾರವಂತೂ ಆಗಲೇಕೂಡದು. 

ಶಿಕ್ಷಣದ ವಿಚಾರ ಬಂದಾಗ ಅದು ಪ್ರತಿಯೊಬ್ಬರ ಹಕ್ಕು. ಅದನ್ನು ಸರಕಾರವು ಯಾವುದೇ ಕಾರಣಕ್ಕೂ, ಲಿಂಗ, ಜಾತಿ, ಧರ್ಮದ ಆಧಾರದ ಮೇಲೆ ನಿರಾಕರಿಸಕೂಡದು. ಸರಕಾರವು ಮಹಿಳೆಯರ ವೈಯಕ್ತಿಕ ಆಯ್ಕೆಯನ್ನು ಎತ್ತಿ ಹಿಡಿಯಬೇಕು, ಜೊತೆಗೇ ಅವರ ಮೂಲಭೂತ ಹಕ್ಕನ್ನು ಕೂಡ ಖಾತರಿಗೊಳಿಸಬೇಕು. ಆದರೆ ನಮ್ಮ ಸರಕಾರ ಎರಡನ್ನೂ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿವೆ.

ಹಕ್ಕೊತ್ತಾಯಗಳು:

► ಕರ್ನಾಟಕ ಶಿಕ್ಷಣ ಕಾಯಿದೆ 1983ರ ಸೆಕ್ಷನ್ 133(2) ವಿದ್ಯಾರ್ಥಿಗಳು ಕಾಲೇಜು ಅಥಾರಿಟಿಯವರು ಆಯ್ಕೆ ಮಾಡಿರುವ ಸಮವಸ್ತ್ರಗಳನ್ನು ಹಾಕಿಕೊಂಡು ಬರಬೇಕು ಎಂಬ ಸೆಕ್ಷನ್ನಿಗೆ ಇತ್ತೀಚೆಗೆ ಸೇರಿಸಿರುವ ‘ಸಮಾನತೆ, ಸಹಬಾಳ್ವೆ, ಮತ್ತು ಸಾಮಾಜಿಕ ಕಾನೂನು ಭಂಗ ಮಾಡುವಂತಹ ವಸ್ತ್ರಗಳನ್ನು ಹಾಕಬಾರದು ಎನ್ನುವ ಸುತ್ತೋಲೆಯು ಈಗಿನ ಪರಿಸ್ಥಿತಿಯಲ್ಲಿ ಅನಗತ್ಯವಾಗಿದೆ. ಅದು ವಿದ್ಯಾರ್ಥಿಗಳ ಹಿತಾಸಕ್ತಿಯ ವಿರುದ್ಧವಾಗಿದ್ದು ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೇ ಅಡ್ಡ ಬರುವಂತಹದ್ದಾಗಿದೆ. ತಕ್ಷಣವೇ ಅದನ್ನು ಹಿಂತೆಗೆದುಕೊಳ್ಳಬೇಕು.

► ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಮತ್ತು ಸ್ಥಳೀಯ ಮಹಿಳಾಪರ ಚಿಂತಕರನ್ನು ಸೇರಿಸಿಕೊಂಡ ಶಾಂತಿ ಸಮಿತಿಯ ರಚನೆ ಮಾಡಬೇಕು. ಯಾರದೇ ವೈಯಕ್ತಿಕ ಘನತೆ ಮತ್ತು ಶಿಕ್ಷಣಕ್ಕೆ ಕುತ್ತು ಬಾರದ ರೀತಿಯಲ್ಲಿ ಸಾಂಸ್ಕøತಿಕ ವೈವಿಧ್ಯತೆಯನ್ನು ಗೌರವಿಸುವಂತೆ ಪರಸ್ಪರ ಸೌಹಾರ್ದ ಮಾತುಕತೆ ನಡೆಸಿ ಅದನ್ನು ಪಾಲಿಸಬೇಕು.

► ಹರೆಯದ ಹುಡುಗಿಯರಿಗೆ ತಮ್ಮ ಮಧ್ಯೆ ಇರುವ ಸಾಂಸ್ಕೃತಿಕ ಪರಂಪರೆಗಳಲ್ಲಿನ ಪ್ರಸ್ತುತ ಅಥವಾ ಅಪ್ರಸ್ತುತ ಎನಿಸುವ ವಿಷಯಗಳ ಬಗ್ಗೆ ಆರೋಗ್ಯಕರವಾಗಿ ಚರ್ಚೆಗಳು ಏರ್ಪಡುವಂತಹ ವಾತಾವರಣವು ಇರುವಂತೆ ನೋಡಿಕೊಳ್ಳಬೇಕು.

► ಸಂವಿಧಾನದ ಚೌಕಟ್ಟಿನೊಳಗೇ ಇದ್ದು ಮಹಿಳೆಯರ ಶಿಕ್ಷಣದ ಹಕ್ಕು ಮತ್ತು ಅವರ ವಸ್ತ್ರಗಳ ಆಯ್ಕೆ ಸ್ವಾತಂತ್ರ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕ್ರಮಗಳಾಗಬೇಕು. ಮಾಧ್ಯಮಗಳು ಮತ್ತು ಹಿಂದುತ್ವವಾದೀ ಶಕ್ತಿಗಳು ಇದನ್ನು ಹಿಜಾಬ್ ಮತ್ತು ಕೇಸರಿ ಶಾಲಿನ ಮಧ್ಯೆಯ ವಿವಾದವಾಗಿ ಬಿಂಬಿಸುತ್ತಿವೆ. ಆದರೆ ಇದು ಮಹಿಳೆಯರ ಶಿಕ್ಷಣದ ಹಕ್ಕಿನ ಪ್ರಶ್ನೆಯಾಗಿದ್ದು, ಈ ಸಂದರ್ಭದಲ್ಲಿ ಇದು ಮುಸ್ಲಿಂ ಮಹಿಳೆಯರ ಶಿಕ್ಷಣ ಮತ್ತು ಸುರಕ್ಷೆಯ ಪ್ರಶ್ನೆಯಾಗಿದ್ದು ಇಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸುವುದಾಗಿ ತಿಳಿಸಿವೆ.

 ಜಾಗೃತ ಮಹಿಳಾ ಒಕ್ಕೂಟ, ವಿ ದ ವುಮೆನ್, ಉತ್ತರ ಕರ್ನಾಟಕ ಜೋಗಪ್ಪ ಸಂಘ, ಒಂದೆಡೆ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ಒಕ್ಕೂಟ, ಕರ್ನಾಟಕ ಸೆಕ್ಸ್ ವರ್ಕರ್ಸ್ ಯೂನಿಯನ್, ಸ್ತ್ರೀ ಜಾಗೃತಿ ಸಮಿತಿ, ಧ್ವನಿ ಮಹಿಳಾ ಸಂಘಟನೆ, ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಸೇರಿ ಹಕ್ಕೊತ್ತಾಯ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News