×
Ad

ಸಚಿವ ಶ್ರೀರಾಮುಲುರಿಂದ ಎಸ್ಟಿ ಮೀಸಲಾತಿ ವಿಳಂಬ: ಶಾಸಕ ರಾಜುಗೌಡ ಅಸಮಾಧಾನ

Update: 2022-02-10 22:09 IST

ಬೆಂಗಳೂರು, ಜ.10. 'ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಸಚಿವರಾಗಿದ್ದ ಶ್ರೀರಾಮುಲು ಅವರೇ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿಲ್ಲ' ಎಂದು ಸುರಪುರ ಶಾಸಕ ರಾಜುಗೌಡ ನಾಯಕ್ ಅಸಮಾಧಾನ ಹೊರಹಾಕಿದ್ದಾರೆ.

ಗುರುವಾರ ಇಲ್ಲಿನ ಫ್ರೀಡಂ ಪಾರ್ಕ್ ನಲ್ಲಿ ವಾಲ್ಮೀಕಿ ಶ್ರೀಗಳು ಆರಂಭಿಸಿರುವ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, 'ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.7.5 ಮೀಸಲಾತಿ ಜಾರಿಗೊಳಿಸುವ ಕುರಿತು ನ್ಯಾ. ನಾಗಮೋಹನ್ ದಾಸ್ ವರದಿ ಅನುಷ್ಠಾನಗೊಳಿಸಬೇಕು ಎಂದರು.

ವಾಲ್ಮೀಕಿ ಸಮುದಾಯದ ಜೊತೆಗೆ ಉಳಿದ 53 ಜಾತಿಗಳು ಎಸ್ಟಿ ಸಮುದಾಯಕ್ಕೆ ಸೇರುತ್ತವೆ. ಆ ಜಾತಿಗಳ ಮುಖಂಡರನ್ನೂ ಈ ಮೀಸಲಾತಿ ಹೋರಾಟಕ್ಕೆ ಕರೆತರಬೇಕು. ರಾಜನಹಳ್ಳಿ ಸ್ವಾಮೀಜಿ ಹೋರಾಟ ಆರಂಭಿಸಿದ ನಂತರ ಸಮುದಾಯದಲ್ಲಿ ಜಾಗೃತಿ ಶುರುವಾಗಿದೆ. ಸಮುದಾಯ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಈಗ ಸಮುದಾಯ ನಡೆಸಿದ ಹೋರಾಟಕ್ಕೆ ಅಲ್ಲಲ್ಲಿ ಫಲ ದೊರೆತಿದೆ. ಗ್ರಾಮ ಪಂಚಾಯಿತಿ ವಸತಿ ಯೋಜನೆಯಡಿಯಲ್ಲಿ ಶೇ.6.5 ಮೀಸಲಾತಿ ನೀಡಲಾಗಿದೆ ಎಂದು ದಾಖಲಾತಿ ಪ್ರದರ್ಶಿಸಿ ತೋರಿಸಿದರು. 

ನಾವು ಸಮುದಾಯದ ಹೊರಗಿನವರನ್ನು ಎದುರಿಸಬಹುದು. ಆದರೆ, ನಮ್ಮ ಸಮುದಾಯದವರೇ ನಮ್ಮ ಕಾಲು ಎಳೆಯುತ್ತಾರೆ. ಅದನ್ನು ಎದುರಿಸುವುದು ಬಹಳ ಕಷ್ಟ. ಇಂತಹ ಸೂಕ್ಷ್ಮತೆಯನ್ನು ನಾವು ಗಮನಿಸಬೇಕು. ರಾಜನಹಳ್ಳಿ ಸ್ವಾಮೀಜಿಗಳು ಅವರೇ ಸ್ವಯಂ ಪ್ರೇರಿತವಾಗಿ ಸ್ವಾಮೀಜಿ ಆಗಿಲ್ಲ. ನಾವೆಲ್ಲ ಸೇರಿ ಅವರನ್ನು ನೇಮಕ ಮಾಡಿ ಕೂರಿಸಿದ್ದೇವೆ. ಅವರಿಗೆ ಗೌರವ ನೀಡುವುದನ್ನು ಕಲಿಯಬೇಕು. ಸಮುದಾಯದ ಆಂತರಿಕ ವಿಚಾರವನ್ನು ಹೊರಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು. 

ಸಮುದಾಯದಲ್ಲಿ ಬೆಳೆಯುವವರನ್ನು ಕಾಲು ಎಳೆಯುವ ಬುದ್ದಿ ಬಿಡಬೇಕು. ಸಂಪುಟ ಉಪ ಸಮಿತಿ ಅಧ್ಯಕ್ಷ ಸಚಿವ ಶ್ರೀರಾಮುಲು ಅವರೇ ಈ ಮೀಸಲಾತಿ ಬಗ್ಗೆ ನಿರ್ಧಾರ ಕೈಗೊಳ್ಳಬಹುದಿತ್ತು. ಒಂದು ಸಭೆಯನ್ನೂ ಅವರು ಸಚಿವರಾಗಿ ಕೆಲಸ ಮಾಡಲಿಲ್ಲ. ಗುರುಗಳ ನೇತೃತ್ವದಲ್ಲಿ ನಾಲ್ಕು ಸಭೆಗಳಾದವು. ಆದರೆ ಕೊನೆಗೆ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ತೆಗೆದುಕೊಂಡು ಹೋಗಿ ತ್ರಿಸದಸ್ಯ ಸಮಿತಿಗೆ ನೀಡಿದರು. ನಾನು ಆಗ ವಿರೋಧಿಸಿದೆ. ಆದರೆ ಅದನ್ನು ನಮ್ಮವರೇ ಕೇಳಲಿಲ್ಲ ಎಂದು ದೂರಿದರು. 

ಒಂದು ಸಂಘಟನೆ ಮಾಡಿದರೆ ಶಕ್ತಿ: ನಾಯಕ ಸಮಾಜದ ಪ್ರತಿಯೊಂದು ಸಂಘಟನೆಗಳೂ ಒಂದಾಗಿ ಒಂದು ಸೂರಿನಡಿ ಗಟ್ಟಿಗೊಳ್ಳಬೇಕು. ಒಂದು ಮಹಾಸಭಾ ಅಥವಾ ಒಂದು ಸಂಘಟನೆ ಮಾಡಿ. ಆಗ ಸಮುದಾಯಕ್ಕೊಂದು ಶಕ್ತಿ ಬರುತ್ತದೆ ಎಂದು ರಾಜುಗೌಡ ನಾಯಕ್ ಹೇಳಿದರು.

ತಳವಾರ, ಪರಿವಾರ ಸಮಸ್ಯೆ ಪರಿಹರಿಸಿ: ತಳವಾರ, ಪರಿವಾರ ವಿಚಾರದಲ್ಲಿ ನಾನು ಹಿಂದೆ ಕೂಡ ಸ್ವಾಮೀಜಿಗಳಿಗೆ ಮನವಿ ಮಾಡಿದ್ದೆ. ಆದರೆ ಕೇಳಲಿಲ್ಲ.ನಾನು ನೇರವಾಗಿ ಮಾತನಾಡುತ್ತೇನೆ. ಹಾಗಾಗಿ ಕೆಲವರಿಗೆ ಕೋಪ. ಆದರೆ ಈಗ ನಾನು ಹೇಳಿದ್ದು ಗೊತ್ತಾಗುತ್ತಿದೆ. ಈಗ ಕೇವಲ ತಳವಾರ ಒಂದು ವೃತ್ತಿ. ಈಗ ಬೇರೆ ಸಮುದಾಯಗಳೂ ಮೀಸಲಾತಿ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ. ಈ ಜನಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ಕೂಡ ಇಲ್ಲ. ಎಲ್ಲವನ್ನುಇ ಸೇರಿಸಿದರೆ ಈಗ ಶೇ.15. ರಷ್ಟು ಮೀಸಲಾತಿ ಬೇಕಾಗುತ್ತದೆ. ಆದರೆ ಶೇ.3 ಮೀಸಲಾತಿಯಲ್ಲಿ ಹೇಗೆ ಹಂಚಿಕೆ ಮಾಡೋದು? ಎಂದು ಪ್ರಶ್ನಿಸಿದರು. 

ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಹಾಕಿದ್ದು ಶ್ಲಾಘನೀಯ ಕೆಲಸ. ಸಮುದಾಯದ ಯುವಕರು ಕೇವಲ ಸಾಮಾಜಿಕ ಜಾಲ ತಾಣಗಳ ಹಿರೋಗಳಾಗದೆ ಬೀದಿಗಿಳಿದು ಹೋರಾಟ ಮಾಡಬೇಕು. ಆಗ ಎಂದು ಹೇಳಿದರು. ಈಗ ರಾಮ ಬೇಕು ಆದರೆ ರಾಮನನ್ನು ಸೃಷ್ಟಿಸಿದ ವಾಲ್ಮೀಕಿ ಬೇಡವಾಗಿದೆ. ಈ ಪರಿಸ್ಥಿತಿಯಿಂದಾಗಿ ನಮಗೂ ಈಗ ಈ ವಿಚಾರ ಕುತ್ತಿಗೆಗೆ ಬಂದಿದೆ. ಹೀಗಾಗಿ ಬಹಿರಂಗವಾಗಿ ಮಾತನಾಡುತ್ತಿದ್ದೇನೆ ಎಂದರು. 

ಎಸ್ಸಿ-ಎಸ್ಟಿ ಸಮುದಾಯ ಒಂದಾಗಬೇಕು: ಬಿಎಸ್ಪಿ ಮುಖಂಡ ಮಾರಸಂದ್ರ ಮುನಿಯಪ್ಪ ಮಾತನಾಡಿ, ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ಒಟ್ಟಾಗಬೇಕು. ಆಗ ಮಾತ್ರ ಈ ಹೋರಾಟಗಳಿಗೆ ಶಕ್ತಿ ಬರುತ್ತದೆ. ನಾಯಕ ಸಮಾಜಕ್ಕೆ ಒಂದು ದೊಡ್ಡ ಇತಿಹಾಸ ಇದೆ. ನಮ್ಮ ಪೂರ್ವಜನರು ಅದನ್ನು ಸೃಷ್ಟಿ ಮಾಡಿದ್ದಾರೆ. ಆ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕಿದೆ ಎಂದು ಹೇಳಿದರು. 

ಫೆ.17. ಕ್ಕೆ ವಿಧಾನಸೌಧ ಚಲೋ: ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ರಮೇಶ್ ಹಿರೇಜಂಬೂರು ಮಾತನಾಡಿ, ಮೀಸಲಾತಿ ವಿಚಾರದಲ್ಲಿ ಸರ್ಕಾರ ಅನಗತ್ಯ ವಿಳಂಬ ಹಾಗೂ ಷಡ್ಯಂತ್ರ ಮಾಡುತ್ತಿದೆ‌. ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿದ ವರದಿಯನ್ನು ತ್ರಿ ಸದಸ್ಯ ಸಮಿತಿಗೆ ನೀಡಿದಾಗಲೇ ನಮಗೆ ಸರ್ಕಾರದ ಷಡ್ಯಂತ್ರ ಅರ್ಥವಾಗಬೇಕಿತ್ತು. ಇದರಿಂದಾಗಿ ನಾಯಕ ಸಮುದಾಯ ಫೆ.17 ರಂದು ವಿಧಾನ ಸೌಧ ಚಲೋ ಹಮ್ಮಿಕೊಂಡಿದೆ. ಕೇಂದ್ರ ರೈಲ್ವೇ ನಿಲ್ದಾಣದಿಂದ ವಿಧಾನ ಸೌಧದ ವರೆಗೆ ಅಂದು ಬೃಹತ್ ಮೆರವಣಿಗೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು. 

ಸದನದ ಒಳಗೆ ನಾಯಕ ಸಮಾಜದ 17 ಶಾಸಕರಿದ್ದರೂ ಸಮುದಾಯದ ಸಮಸ್ಯೆಗಳ ಬಗ್ಹೆ ಚರ್ಚೆಗೆ ಸ್ಪೀಕರ್ ಅವರೇ ಅವಕಾಶ ನೀಡುತ್ತಿಲ್ಲ. ಮತ್ತೊಂದು ಕಡೆ ಸಂವಿಧಾನ ಬರೆದ ಡಾ. ಬಿ.ಆರ್.ಅಂಬೇಡ್ಕರ್ ಫೋಟೊ ಇದ್ದರೆ ನಾನು ಕಾರ್ಯಕ್ರಮಕ್ಕೇ ಬರೊಲ್ಲ ಎಂದು ಜಿಲ್ಲಾ ಸತ್ರ ನ್ಯಾಯಾಧೀಶರೊಬ್ಬರು ಬಹಿರಂಗವಾಗಿ ಹೇಳ್ತಾರೆ. ಇದರ ಅರ್ಥ ದಲಿತ ಸಮುದಾಯಗಳನ್ನು ತುಳಿಯುವ ವ್ಯವಸ್ಥಿತ ಕುತಂತ್ರ ನಡೆಯುತ್ತಿದೆ ಎಂಬುದು ಸ್ಪಷ್ಟ. ಇದನ್ನು ಅರಿಯದವರು ನಸವಲ್ಲ. ನಾವು ಈ ನಾಡಿಗೆ ಸಂಸ್ಕೃತಿ ಸಂಸ್ಕಾರ ಹೇಳಿಕೊಟ್ಟ ವಾಲ್ಮೀಕಿ ಸಂತಾನದವರು ಎಂಬುದನ್ನು ಮರೆಯಬೇಡಿ ಎಂದು ಸರ್ಕಾರವನ್ನು ಎಚ್ಚರಿಸಿದರು. 

ವಿವಿಧ ಸಂಘಟನೆ ಮುಖಂಡರಾದ ಕೆ.ಸಿ. ನಾಗರಾಜ್, ಬಸವರಾಜ್, ವಾಲ್ಮೀಕಿ ನಾಯಕ ಮಹಾಸಭಾ ಪ್ರಧಾನ ಕಾರ್ಯದರ್ಶಿ ಕೆಂಪರಾಮಯ್ಯ, ತಿಪ್ಪೇಸ್ವಾಮಿ, ಹರ್ತಿಕೋಟೆ ವೀರೇಂದ್ರ ಸಿಂಹ,  ಕೋಟೆ ಶ್ರೀನಿವಾಸ್, ರಜನಿ ಎಂ.ಆರ್., ಶಂಕರ್ ರಾಜ್ ತಾಳಿಕೆರೆ, ಶುಭ ವೇಣುಗೋಪಾಲ್, ನಾಗವೇಣಿ, ತುಳಸಿರಾಮ್, ಕೊಪ್ಪಳ ಜಿಲ್ಲಾಧ್ಯಕ್ಷ ರತ್ನಾಕರ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News