ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ ಅಶಾಂತಿ ಸೃಷ್ಟಿಸುವ ಕೆಲಸ ಬೇಡ: ಎಂ.ಬಿ. ಪಾಟೀಲ್

Update: 2022-02-12 14:27 GMT
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್

ಬೆಂಗಳೂರು, ಫೆ.12: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಎಳೆ ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ, ಅಶಾಂತಿ ಸೃಷ್ಟಿಸುವ ಪ್ರಯತ್ನವನ್ನು ಕೆಲವು ಸಂಘಟನೆಗಳು ಮಾಡುತ್ತಿರುವ ಕುರಿತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಈ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಬಹಿರಂಗ ಪತ್ರ ಬರೆದಿರುವ ಅವರು, ಇಂದು ನಿಮ್ಮನ್ನು ಪ್ರಚೋದಿಸಿ, ನಿಮ್ಮದೇ ವಿದ್ಯಾಸಂಸ್ಥೆಗೆ ಕಲ್ಲು ತೂರುವಂತೆ ಮಾಡಿದವರು, ನಿಮ್ಮದೇ ಸಹಪಾಠಿಗಳನ್ನು ಶಾಲೆ ಒಳಗೆ ಪ್ರವೇಶಿಸದಂತೆ ತಡೆಯಲು ಕಾರಣರಾದವರು ಎಂದು ಹೇಳಿದ್ದಾರೆ.

ಅಲ್ಲದೆ, ಮುಂದೆ ನಿಮ್ಮ ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ಪರೀಕ್ಷೆಗಳು ಹತ್ತಿರವಿರುವ ದಿನದಲ್ಲಿ ನಿಮ್ಮ ಸೂಕ್ಷ್ಮ ಮನಸ್ಸಿನ ಮೇಲೆ ಆಗುತ್ತಿರುವ ಗಾಯ ನಿಮ್ಮ ಓದಿನ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಯಾವ ತಂದೆ-ತಾಯಂದಿರೂ ತಮ್ಮ ಮಕ್ಕಳು ಶಾಲಾ-ಕಾಲೇಜುಗಳನ್ನು ತಪ್ಪಿಸಿ ಗಲಭೆಯಲ್ಲಿ ತೊಡಗುವುದನ್ನು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾರೆ.

ಈಗಾಗಲೇ ಕೋವಿಡ್ ಕಾರಣದಿಂದಾಗಿ ಸರಿಯಾಗಿ ತರಗತಿಗಳನ್ನು ನಡೆಸಲು ಸಾಧ್ಯವಾಗಿಲ್ಲ. ಕೆಲ ಕಾಲೇಜುಗಳಲ್ಲಿ ಈ ವರ್ಷದ ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಿವೆ. ವಿಷಯಗಳಿಗೆ ಸಂಬಂಧಿಸಿದ ಪುನರಾವರ್ತನೆ ಕೂಡ ನಡೆಯಬೇಕಿದೆ. ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್ ಕನಸು ಹೊತ್ತು ಅಪಾರ ಶ್ರಮವಹಿಸಿ ಓದುತ್ತಿದ್ದಾರೆ ಎಂದರು.

ಮತ್ತೊಂದೆಡೆ ಆನ್‍ಲೈನ್ ಶಿಕ್ಷಣದ ಕಾರಣದಿಂದ ಅನೇಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಮಾಜದಲ್ಲಿ ಐಕ್ಯತೆ ಮೂಡಿಸಲು ತಮ್ಮ ಜೀವನವನ್ನೇ ಮುಡುಪಿಟ್ಟ ಸಂತರ, ಸೂಫಿಗಳ, ಶರಣರ ಮತ್ತು ದಾಸರ ಈ ನಮ್ಮ ನಾಡಿನಲ್ಲಿ ವಿದ್ಯಾರ್ಥಿಗಳು ಇದುವರೆಗೆ ಅತ್ಯಂತ ಸ್ನೇಹ, ಸೌಹಾರ್ದತೆಯಿಂದ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ.

ಇದೇ ರೀತಿ, ಪ್ರೀತಿ-ಸ್ನೇಹದ ಆತ್ಮೀಯ ವಾತಾವರಣ ಮುಂದುವರೆಯಬೇಕಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಮುಖ್ಯವಾಗಿದೆ. ಭಾರತ ಬಹು ಸಂಸ್ಕೃತಿಗಳ ದೇಶ, ವಿಭಿನ್ನ ಆಚಾರ ವಿಚಾರಗಳ ದೇಶ, ಇಲ್ಲಿ ಎಲ್ಲ ಸಂಪ್ರದಾಯಗಳನ್ನು ಗೌರವಿಸಬೇಕು ಎಂದು ತಿಳಿಸಿದ್ದನ್ನು ಗಮನದಲ್ಲಿರಿಸಿ, ಕೋರ್ಟಿನ ಅಂತಿಮ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕು. ಅಲ್ಲಿಯವರೆಗೆ ಯಾವುದೇ ಪ್ರಚೋದನೆಗೆ ಒಳಗಾಗಿ ಧರ್ಮ, ಜಾತಿ ಎಂಬ ಸೋಂಕಿಗೆ ಬಲಿಯಾಗದೇ ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಕ್ರಮ ಜಾನುವಾರು ಸಾಗಾಟ ಪತ್ತೆ, ಆರೋಪಿ ರವೀಂದ್ರ ಪೂಜಾರಿ ಸೆರೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News