ನಾಳೆಯಿಂದ ವಿಧಾನ ಮಂಡಲ ಜಂಟಿ ಅಧಿವೇಶನ: ಕೋಲಾಹಲಕ್ಕೆ ಕಾರಣವಾಗಲಿರುವ ‘ಸಮವಸ್ತ್ರ' ವಿಚಾರ?

Update: 2022-02-13 15:41 GMT

ಬೆಂಗಳೂರು, ಫೆ. 13: ವಿಧಾನ ಮಂಡಲದ ವರ್ಷದ ಮೊದಲ ಜಂಟಿ ಅಧಿವೇಶನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭಾಷಣದೊಂದಿಗೆ ವಿದ್ಯುಕ್ತವಾಗಿ ನಾಳೆ(ಫೆ.14)ಯಿಂದ ಆರಂಭವಾಗಲಿದ್ದು, ಹತ್ತು ದಿನಗಳ ಕಾಲ ನಡೆಯಲಿರುವ ಅಧಿವೇಶನ ಕಲಾಪ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಗ್ಯುದ್ದಕ್ಕೆ ಸಜ್ಜುಗೊಂಡಿದೆ.

ವಿಧಾನ ಮಂಡಲ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲು ನಾಳೆ ಬೆಳಗ್ಗೆ 11ಗಂಟೆಯ ಸುಮಾರಿಗೆ ರಾಜಭವನದಿಂದ ಆಗಮಿಸಿರುವ ರಾಜ್ಯಪಾಲರಿಗೆ ವಿಧಾನಸೌಧದ ವೈಭವಪೇತ ಮೆಟ್ಟಿಲುಗಳ(ಗ್ರಾಂಡ್ ಸ್ಟೆಪ್ಸ್)ಮೂಲಕ ರತ್ನಗಂಬಳಿ ಸ್ವಾಗತವನ್ನು ಕೋರಲು ಸಿದ್ದತೆ ಮಾಡಿಕೊಳ್ಳಲಾಗಿದೆ. ವಿಧಾನಸೌಧಕ್ಕೆ ಆಗಮಿಸುವ ರಾಜ್ಯಪಾಲರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಬರಮಾಡಿಕೊಳ್ಳಲಿದ್ದಾರೆ.

ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳು ಹಾಗೂ ಮುಖ್ಯದ್ವಾರದ ಮೂಲಕ ರಾಜ್ಯಪಾಲರನ್ನು ಮೆರವಣಿಗೆಯಲ್ಲಿ ವಿಧಾನಸಭಾ ಸಭಾಂಗಣಕ್ಕೆ ಬರ ಮಾಡಿಕೊಳ್ಳಲಿದ್ದಾರೆ. ಬಳಿಕ ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಅವರನ್ನು ಅದೇ ರೀತಿ ಬೀಳ್ಕೊಡಲಾಗುತ್ತದೆ.

ಸಮವಸ್ತ್ರ ಸಂಘರ್ಷ: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ‘ಸಮವಸ್ತ್ರ' ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಜಿಲ್ಲೆಗಳಲ್ಲಿ ಸಂಘರ್ಷ ಏರ್ಪಟ್ಟಿದ್ದು, ವಿಧಾನ ಮಂಡಲದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದವೂ ಗದ್ದಲ, ಕೋಲಾಹಲ ಸೃಷ್ಟಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಮೊದಲ ದಿನ ರಾಜ್ಯಪಾಲರ ಭಾಷಣದ ಬಳಿಕ ಕಾರ್ಯದರ್ಶಿ ವರದಿ ಮಂಡನೆ, ಸಂತಾಪ ಸೂಚನೆ ನಿರ್ಣಯ ಮಂಡಿಸಿ ಸದನ ಫೆ.15ಕ್ಕೆ ಮುಂದೂಡುವ ಸಾಧ್ಯತೆಗಳಿವೆ.

ಮೇಕೆದಾಟು ಅಣೆಕಟ್ಟು ಯೋಜನೆ ಜಾರಿ, ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಮಿತಿ, ಕೇಂದ್ರ ಆಯವ್ಯಯದಲ್ಲಿ ಪ್ರಸ್ತಾಪಿಸಿರುವ ನದಿ ಜೋಡಣೆ, ಕೋವಿಡ್‍ನಿಂದ ಮೃತಪಟ್ಟವರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬ, ಶೇ.40ರಷ್ಟು ಕಮಿಷನ್ ಆರೋಪ, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಹಾಗೂ ಸರಕಾರದ ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಅಡ್ಡ ಕತ್ತರಿಯಲ್ಲಿ ಸಿಲುಕಿರುವ ವಿಪಕ್ಷಗಳ ಸನ್ನದ್ಧವಾಗಿವೆ.

ಈ ನಡುವೆ ಪರಿಶಿಷ್ಟ ಪಂಗಡ(ಎಸ್ಟಿ) ಮೀಸಲಾತಿ ಹೆಚ್ಚಳ, ಪರಿವಾರ, ತಳವಾರ ಸಮಸ್ಯೆ ಬಗ್ಗೆ ಸ್ಪಷ್ಟತೆ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2ಎಗೆ ಸೇರ್ಪಡೆ ಸೇರಿದಂತೆ ಇನ್ನಿತರ ವಿಚಾರಗಳು ಮುನ್ನಲೆಗೆ ಬರಲಿವೆ. ಈ ಮಧ್ಯೆ ವಿರೋಧ ಪಕ್ಷಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಮುಖ್ಯಮಂತ್ರಿ, ಸಂಪುಟ ಸಹೋದ್ಯೋಗಿಗಳು ಸೇರಿದಂತೆ ಆಡಳಿತ ಪಕ್ಷದ ಶಾಸಕರು ಸಜ್ಜಾಗಿದ್ದಾರೆ.

ವಿಧಾನ ಮಂಡಲ ಜಂಟಿ ಅಧಿವೇಶನದ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ವಿಧಾನಸೌಧದ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿದ್ದು, ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಧಾರ್ಮಿಕ ಸ್ವಾತಂತ್ರ್ಯ ವಿಧೇಯಕ: ರಾಜ್ಯದಲ್ಲಿ ಈಗಾಗಲೇ ವಿವಾದ ಸೃಷ್ಟಿಸಿರುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ(ಮತಾಂತರ ನಿಷೇಧ)ವಿಧೇಯಕ-2021' ಬೆಳಗಾವಿ ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ-ಗದ್ದಲದ ಮಧ್ಯೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಇದೀಗ ಪರಿಷತ್‍ನಲ್ಲಿ ವಿಧೇಯಕ ಮಂಡನೆ ಸಾಧ್ಯತೆ ಇದ್ದು, ಗದ್ದಲ ಸೃಷ್ಟಿಸುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News