ಧರ್ಮ ಪ್ರಜಾಪ್ರಭುತ್ವ ವಿರೋಧಿಯಾದಾಗ ಸಮಾಜಕ್ಕೆ ಮಾರಕ: ನ್ಯಾ.ನಾಗಮೋಹನ ದಾಸ್

Update: 2022-02-19 10:58 GMT

ಮಂಗಳೂರು, ಫೆ. 19: ಜನರ ಸಂಕಷ್ಟಗಳಿಗೆ ಪರಿಹಾರದ ಮಾರ್ಗವಾಗಿ ಹುಟ್ಟಿಕೊಂಡ ಧರ್ಮ ಪ್ರಜಾಪ್ರಭುತ್ವ ವಿರೋಧಿಯಾದಾಗ ಸಮಾಜಕ್ಕೆ ಮಾರಕವಾಗುತ್ತದೆ. ಇಂದು ನಾವು ಅಂತಹ ಕಾಲಘಟ್ಟದಲ್ಲಿದ್ದು, ಪ್ರಜಾಪ್ರಭುತ್ವವನ್ನು ವಿರೋಧಿಸುವ ಈ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದು ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯಿಸಿದ್ದಾರೆ.

ನಗರದ ಸಹೋದಯ ಸಭಾಂಗಣದಲ್ಲಿ ಅಖಿಲ ಭಾರತ ವಕೀಲರ ಸಂಘ (ಎಐಎಲ್‌ಯು) ಆಶ್ರಯದಲ್ಲಿ 'ಸಂವಿಧಾನ ಮತ್ತು ಮತಾಂತರ' ಎಂಬ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು.

ಸಂಬಂಧಗಳನ್ನು ಪ್ರತ್ಯೇಕಿಸುವ ಮೂಲಭೂತವಾದಂತೆಯೇ, ಧರ್ಮದ ಜತೆಗೆ ರಾಜಕಾರಣ ಬೆರೆತಾಗ ಅದು ಕೋಮುವಾದದ ಸ್ವರೂಪವನ್ನು ಪಡೆಯುತ್ತದೆ. ಹಾಗಾಗಿ ಧರ್ಮವನ್ನು ವಿರೋಧಿಸುವುದಲ್ಲ. ಬದಲಾಗಿ ನಾವು ಇಂತಹ ಮೂಲಭೂತವಾದಿತನ, ಕೋಮುವಾದವನ್ನು ವಿರೋಧಿಸಬೇಕಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ 4,635 ವಿವಿಧ ಜಾತಿ ಹಾಗೂ ಉಪ ಜಾತಿಗಳಿವೆ. ನಮ್ಮ ಕುಟುಂಬದೊಳಗಿನ ಭಿನ್ನತೆಯ ನಡುವೆಯೂ ನಾವು ಸಹಿಷ್ಣುತೆಯನ್ನು ಕಾಪಾಡಿಕೊಂಡು ಜೀವನ ಸಾಗಿಸಲು ಸಾಧ್ಯವಾಗುವುದಾದರೆ ಅಕ್ಕಪಕ್ಕದವರ ಮೇಲೆ ನಮಗೆ ಅನುಮಾನ ಯಾಕೆ. ಕಾಲಾನುಸಾರವಾಗಿ ನಮ್ಮ ಸಂಪ್ರದಾಯ, ಸಂಸ್ಕೃತಿ, ಭಾಷೆ, ಆಚಾರ ವಿಚಾರಗಳಲ್ಲಿ ಆಗಿರುವ ಬದಲಾವಣೆಗಳನ್ನು ಒಪ್ಪಿಕೊಂಡು ನಾವು ಜೀವನ ಸಾಗಿಸಿರುವಾಗ ಸಮಾಜಕ್ಕೆ ಯಾವುದೇ ತೊಂದರೆ ಆಗದಿರುವಾಗ ಈಗ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ನಾವು ನಮ್ಮ ಬದುಕಿನ ಪ್ರಶ್ನೆಗಳನ್ನು ಮರೆಮಾಚುತ್ತಿರುವುದೇಕೆ ಎಂದವರು ಪ್ರಶ್ನಿಸಿದರು.

ಮಾನವ ಹಕ್ಕುಗಳಿಗೆ ಬದ್ಧವಾಗಿರುವುದಾಗಿ ಹೇಳಿಕೊಂಡು ವಿಶ್ವಸಂಸ್ಥೆಯಲ್ಲಿ ನಾವು ಒಪ್ಪಂದಕ್ಕೆ ಸಹಿ ಹಾಕಿಕೊಂಡಿದ್ದೇವೆ. ಅದರಲ್ಲಿನ ಮಾನವ ಹಕ್ಕುಗಳನ್ನೇ ನಮ್ಮ ಸಂವಿಧಾನದಲ್ಲೂ ಸೇರ್ಪಡೆಗೊಳಿಸಲಾಗಿದೆ. ಧರ್ಮದ ಹಕ್ಕಿನ ಕುರಿತು ಸಂವಿಧಾನದಲ್ಲಿ ವ್ಯಾಖ್ಯಾನಿಸಲಾಗಿದ್ದು, ವ್ಯಕ್ತಿಯೊಬ್ಬ ತನಗೆ ಇಷ್ಟ ಬಂದ ಧರ್ಮವನ್ನು ಒಪ್ಪಿ ಅದನ್ನು ಪ್ರಚಾರ ಮಾಡುವ ಹಕ್ಕನ್ನು ಹೊಂದಿರುತ್ತಾನೆ. ಒಂದು ಮತದಿಂದ ಇನ್ನೊಂದು ಮತಕ್ಕೆ, ಪರಿವರ್ತನೆಯಾಗುವ ಹಕ್ಕು. ಹೊಸ ಮತವನ್ನು ಹುಟ್ಟು ಹಾಕುವ ಹಕ್ಕನ್ನೂ ಆತ ಹೊಂದಿರುತ್ತಾನೆ. ತನಗೆ ಯಾವುದೇ ಧರ್ಮ ಇಲ್ಲ ಎಂದು ಘೋಷಿಸಿಕೊಳ್ಳುವ ಹಕ್ಕನ್ನೂ ವ್ಯಕ್ತಿಗೆ ಸಂವಿಧಾನದ ಅನುಚ್ಛೇದ 25ರ ಪ್ರಕಾರ ನೀಡಲಾಗಿದೆ. 1950ರಿಂದ ಇಂದಿನವರೆಗೂ ಈ ವ್ಯಾಖ್ಯಾನವನ್ನು ಹಲವಾರು ಪ್ರಕರಣಗಳು, ಸಂದರ್ಭಗಳಲ್ಲಿ ನ್ಯಾಯಾಲಯ ವ್ಯಾಖ್ಯಾನ ಮಾಡುತ್ತಲೇ ಬರುತ್ತಿದೆ. ಆದರೆ ಇಂದು ಮತಾಂತರ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ಇಷ್ಟು ವರ್ಷ ಇಲ್ಲದ್ದು ಈಗ ಯಾಕೆ ಎಂದು ಪ್ರಶ್ನಿಸಿದ ನ್ಯಾ.ನಾಗಮೋಹನದಾಸ್, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಜನರನ್ನು ಶಿಕ್ಷಣ, ಆರೋಗ್ಯ, ಉದ್ಯೋಗ, ಆಹಾರದ ಮೊದಲಾದ ಬದುಕಿನ ಹಕ್ಕುಗಳಿಂದ ವಂಚಿತರನ್ನಾಗಿಸುವ ಬಗ್ಗೆ ಧ್ವನಿ ಎತ್ತಬೇಕಾದ ತುರ್ತು ಅಗತ್ಯವಿದೆ ಎಂದವರು ಹೇಳಿದರು.

ಎಐಎಲ್‌ಯು ಜಿಲ್ಲಾಧ್ಯಕ್ಷ ಯಶವಂತ ಮರೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಹಿರಿಯ ನ್ಯಾಯವಾದಿಗಳಾದ ನಾರಾಯಣಪೂಜಾರಿ, ಇಬ್ರಾಹೀಂ ಉಪಸ್ಥಿತರಿದ್ದರು. ಎಐಎಲ್‌ಯು ಕಾರ್ಯದರ್ಶಿ ರಾಮಚಂದ್ರ ಬಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News