ಸಂಘಪರಿವಾರಕ್ಕಾಗಿ ಜೀವತೆತ್ತ ಕಾರ್ಯಕರ್ತನ ತಾಯಿಯದು ಈಗ ಚಿಂದಿ ಆಯ್ದು ಜೀವನ

Update: 2022-02-27 17:41 GMT
- ಮೀನಾಕ್ಷಮ್ಮ

ಶಿವಮೊಗ್ಗ, ಫೆ.27: ನಗರದಲ್ಲಿ ಕಳೆದ ಏಳು ವರ್ಷಗಳ ಹಿಂದೆ ನಡೆದ ಗಲಭೆಯೊಂದರಲ್ಲಿ ಮೃತಪಟ್ಟ ವಿಶ್ವನಾಥ ಶೆಟ್ಟಿ ಎಂಬ ಸಂಘಪರಿವಾರದ ಕಾರ್ಯಕರ್ತರೊಬ್ಬರ ತಾಯಿ ಸದ್ಯ ಜೀವನಕ್ಕಾಗಿ ಹಾದಿಬೀದಿಯಲ್ಲಿ ಚಿಂದಿ ಆಯುತ್ತಿದ್ದಾರೆ.

ನಿಮಗೆ ಮಕ್ಕಳಾಗಿ ಇರುತ್ತೇವೆ. ನಿಮ್ಮನ್ನು ಕಡೆವರೆಗೂ ನೋಡಿಕೊಳ್ಳುತ್ತೇವೆ ಎಂದು ಘಟನೆ ನಡೆದ ಸಮಯದಲ್ಲಿ ವೀರಾವೇಶದಿಂದ ಹೇಳಿದ್ದ ಯಾರೂ ಕೂಡ ವಿಶ್ವನಾಥನ ತಾಯಿ ಮೀನಾಕ್ಷಮ್ಮ ಅವರ ಸಹಾಯಕ್ಕೆ ಬಂದಿಲ್ಲ. ಮನೆಗೆ ವಿದ್ಯುತ್ ಇಲ್ಲ, ಕುಡಿಯುವ ನೀರಿನ ಸಂಪರ್ಕ ಇಲ್ಲ. 60 ವಸಂತಗಳನ್ನು ದಾಟಿದ ಅಜ್ಜಿ ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ ಅಕ್ಕಿಯನ್ನು, ಅಲ್ಲಿ ಇಲ್ಲಿ ಪುಳ್ಳೆಗಳನ್ನು ಆಯ್ದು ತಂದು ಅನ್ನ ಬೇಯಿಸಿಕೊಂಡು ಹೊಟ್ಟೆ ಹೊರೆಯುತ್ತಿದ್ದಾರೆ ಎಂದು ಸ್ಥಳೀಯರು ಕನಿಕರ ವ್ಯಕ್ತಪಡಿಸುತ್ತಿದ್ದಾರೆ.

ವಿಶ್ವನಾಥ ಶೆಟ್ಟಿಯ ಪತ್ನಿ ಬಡತನದ ಬೇಗೆ ನಡುವೆ ಎರಡು ವರ್ಷದ ಹಿಂದೆ ಜಾಂಡೀಸ್‌ನಿಂದ ತೀರಿಕೊಂಡರೆ, ಮಗ ಆದಿತ್ಯ ತಾಯಿಯ ತವರು ಮನೆ ಇರುವ ಕೊಪ್ಪದಲ್ಲಿದ್ದುಕೊಂಡು 7ನೇ ತರಗತಿ ಓದುತ್ತಿದ್ದಾನೆ. ಮಗಳು ಸಹ ಅನಾರೋಗ್ಯದಿಂದ ತೀರಿಕೊಂಡ ಬಳಿಕ ಮೀನಾಕ್ಷಮ್ಮ ಅಕ್ಷರಶಃ ಅನಾಥೆಯಾಗಿದ್ದಾರೆ.

ಬಡತನಕ್ಕೆ ಬಸವಳಿದ ಕುಟುಂಬ:

2015ರಲ್ಲಿ ಶಿವಮೊಗ್ಗ ಗಾಜನೂರು ಬಳಿ ದುಷ್ಕರ್ಮಿಗಳು ಆಲ್ಕೊಳದ ವಿಶ್ವನಾಥ ಶೆಟ್ಟಿಯನ್ನು ಹತ್ಯೆ ಮಾಡಿದ್ದರು. ಅದಾದ ಬಳಿಕ ಸಂಘಪರಿವಾರದ ಸಂಘಟನೆಗಳು ಶಿವಮೊಗ್ಗ ನಗರ ಬಂದ್ ಮಾಡಿದ್ದಲ್ಲದೆ, ದೊಡ್ಡಮಟ್ಟದ ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಯು ರಾಜ್ಯದೆಲ್ಲೆಡೆಗೂ ವಿಸ್ತರಿಸಿತ್ತು. ವಿಶ್ವನಾಥ ಶೆಟ್ಟಿ ಕುಟುಂಬವನ್ನು ನಾವು ಸಲಹುತ್ತೇವೆ. ಅವರ ಕುಟುಂಬವನ್ನು ಅನಾಥವಾಗಲು ಬಿಡುವುದಿಲ್ಲ ಎಂದು ಬಡಾಯಿ ಕೊಚ್ಚಿದ್ದೇ ಬಂತು. ವಾಸ್ತವದಲ್ಲಿ ಪ್ರತಿಭಟನೆಯ ವೇಳೆ ಅಬ್ಬರದ ಮಾತುಗಳಲ್ಲಿ ಅರಮನೆಯನ್ನೇ ಕಟ್ಟಿದವರು, ನಂತರ ವಿಶ್ವನಾಥ ಶೆಟ್ಟಿಯ ಮನೆಯ ಕಡೆ ತಲೆ ಹಾಕಿಯೂ ಮಲಗಿಲ್ಲ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ.

ಸದ್ಯ ವಿಶ್ವನಾಥನ ತಾಯಿ ಈಗ ಒಂದೊತ್ತಿನ ತುತ್ತಿಗೂ ಪರದಾಡುವಂತಾಗಿದೆ. ‘‘ಸರಕಾರದಿಂದ ಕೊಡುವ ಸಂಧ್ಯಾ ಸುರಕ್ಷೆ ಮಾಸಿಕ ಪಿಂಚಣಿ ಕೂಡ ಸಿಗುತ್ತಿಲ್ಲ. ಜೀವ ಇರುವವರೆಗೆ ಹೊಟ್ಟೆ ತುಂಬಿಸಿಕೊಳ್ಳಬೇಕಲ್ಲಾ, ನ್ಯಾಯಬೆಲೆ ಅಂಗಡಿಯಿಂದ ತಿಂಗಳಿಗೆ 10ಕೆ.ಜಿ. ಅಕ್ಕಿ ಕೊಡುತ್ತಾರೆ. ಪ್ರತಿದಿನ ಬೆಳಗ್ಗೆ ರಸ್ತೆ, ತಿಪ್ಪೆಗಳಲ್ಲಿ ಪ್ಲಾಸ್ಟಿಕ್ ಆಯುವುದರಿಂದ 10ರಿಂದ 20ರೂ. ಬರುತ್ತೆ. ಅದರಲ್ಲೇ ತರಕಾರಿ, ದಿನಸಿ, ಬಿಪಿ ಮಾತ್ರೆ ಎಲ್ಲವನ್ನು ಸರಿದೂಗಿಸಬೇಕು’’ ಎನ್ನುವಷ್ಟರಲ್ಲಿ ಆ ತಾಯಿಯ ಕೆನ್ನೆ ಮೇಲೆ ಕಣ್ಣೀರ ಕೋಡಿ ಹರಿಯುತ್ತಿತ್ತು.

‘‘ಮಗ ಇದ್ದಿದ್ದರೆ ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಪಿಂಚಣಿಗೆ ಅಂತ ಎರಡು ವರ್ಷದಿಂದ ಹಲವು ಕಚೇರಿ ಬಾಗಿಲು ಅಲೆದಿದ್ದೇನೆ. ಇದೂವರೆಗೆ ಕೊಟ್ಟಿಲ್ಲ. ಓಡಾಡಲು ತುಂಬ ಸುಸ್ತಾಗುತ್ತೆ. ಕರೆಂಟ್ ಬಿಲ್ ಕಟ್ಟಲಿಲ್ಲ ಅಂತ 3ವರ್ಷದ ಹಿಂದೆ ಸಂಪರ್ಕ ಕಡಿತಗೊಳಿಸಿದರು. ನೀರಿನ ಬಿಲ್ ಕಟ್ಟಲಿಲ್ಲ ಅಂತ ನಲ್ಲಿ ಸಂಪರ್ಕ ಹೋಯಿತು. ಗ್ಯಾಸ್- ಸಿಲಿಂಡರ್ ಇಲ್ಲ. ಅಲ್ಲಿ ಇಲ್ಲಿ ಪುಳ್ಳೆ ಕಿತ್ತು ತಂದು ಒಲೆ ಉರಿಸಿ ಅನ್ನ ಸಾರು ಮಾಡಿಕೊಳ್ಳುತ್ತೇನೆ’’ ಎಂದು ಮೀನಾಕ್ಷಮ್ಮ ಭಾವುಕರಾಗಿ ಹೇಳುತ್ತಾರೆ.

ಶ್ರೀಕಾಂತ್, ಕರವೇ ಸಹಾಯಹಸ್ತ

 ಮೀನಾಕ್ಷಮ್ಮ ಅವರ ದಯನೀಯ ಸ್ಥಿತಿ ಗೊತ್ತಾಗುತ್ತಿದ್ದಂತೆ ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್ ಅವರು ಸ್ಥಳಕ್ಕೆ ತೆರಳಿ ವಿದ್ಯುತ್, ನಲ್ಲಿ ಸಂಪರ್ಕ, ಮನೆಗೆ ಸುಣ್ಣ ಬಣ್ಣ ಹೊಡೆಯಲು ವ್ಯವಸ್ಥೆ ಮಾಡಿದ್ದಾರೆ. ತಮ್ಮ ಕಾರ್ಯಕರ್ತರಿಗೆ ಸಂಧ್ಯಾಸುರಕ್ಷೆ ಮಾಸಿಕ ಪಿಂಚಣಿ ಮಾಡಿಸಲು ಜವಾಬ್ದಾರಿ ನೀಡಿದ್ದಾರೆ. ಮೀನಾಕ್ಷಮ್ಮ ಅವರ ಸಂಕಷ್ಟ ತುಂಬಾ ನೋವು ತರಿಸಿತು. ಅವರ ಮನೆಗೆ ಅಗತ್ಯವಾದ ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದು ಶ್ರೀಕಾಂತ್ ಅವರು ಭರವಸೆ ನೀಡಿದ್ದಾರೆ.

ಆದರೆ, ವಿಶ್ವನಾಥ್ ಮರಣವನ್ನಪ್ಪಿದ ಮೂರು - ನಾಲ್ಕು ತಿಂಗಳ ಅವಧಿಯಲ್ಲಿ ಹಾಗೆ ಮಾಡ್ತೀವಿ, ಹೀಗೆ ಮಾಡ್ತೀವಿ ಎಂದಿದ್ದ ಬಿಜೆಪಿ ಪಕ್ಷದ ಮುಖಂಡರಾಗಲಿ, ಸಂಘ ಪರಿವಾರದ ಕಾರ್ಯಕರ್ತರಾಗಲಿ ಅಥವಾ ಮತ್ತಿನ್ಯಾವುದೋ ಸಂಘಟನೆಯವರಾಗಲಿ ತಪ್ಪಿಯೂ ಈಕಡೆ ತಲೆ ಹಾಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆಯ ವತಿಯಿಂದ ಅಡುಗೆ ಅನಿಲ ಸಂಪರ್ಕ, ಸ್ಟವ್, 3ತಿಂಗಳಿಗಾಗುವಷ್ಟು ದಿನಸಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಇನ್ನು ಮುಂದೆ ಪ್ರತಿ ತಿಂಗಳು ಮೀನಾಕ್ಷಮ್ಮ ಅವರ ಜೀವನಕ್ಕೆ ಆಗುವಷ್ಟು ದಿನಸಿ ಮತ್ತು ಮಾತ್ರೆಯನು್ನ ಕೊಡಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಂಡಿದ್ದೇವೆ.

- ಕಿರಣ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News