×
Ad

ಮನುಷ್ಯತ್ವ ಮೀರಿದ ಯಾವುದೇ ಧರ್ಮವಿಲ್ಲ: ಬಸವ ಮರುಳಸಿದ್ದ ಸ್ವಾಮೀಜಿ

Update: 2022-03-02 22:28 IST

ಶಿವಮೊಗ್ಗ, ಮಾ.2: ನಗರದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಶಾಂತಿಗಾಗಿ ನಾವು ಸೌಹಾರ್ದ ಸಭೆ ನಡೆಯಿತು. ವಿವಿಧ ಧರ್ಮದ ಧಾರ್ಮಿಕ ಮುಖಂಡರು, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ವಿವಿಧ ಸಂಘಟನೆಗಳ ಪ್ರಮುಖರು, ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿ ಶಾಂತಿಯ ಮಂತ್ರವನ್ನು ಜಪಿಸಿದರು. ಶಾಂತಿ ಸೌಹಾರ್ದತೆಯ ಧ್ಯೋತಕ ವಾದ ಕೇಸರಿ, ಬಿಳಿ ಮತ್ತು ಹಸಿರು ಬಟ್ಟೆಗಳನ್ನು ಜೋಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಅವರು ಮಾತನಾಡಿ, ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಕೆಲವರು ಗಲಾಟೆ ಎಬ್ಬಿಸಿ ಗೊಂದಲ ಮೂಡಿಸುತ್ತಿದ್ದಾರೆ. ಇದು ತಪ್ಪು, ಜಿಲ್ಲಾಡಳಿತ ಈ ಬಗ್ಗೆ ಸದಾ ಎಚ್ಚರಿಕೆಯಿಂದ ಇರುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆಗಳು ನಡೆಯಬಾರದು. ನಾವೆಲ್ಲರೂ ಸಹೋದರ ಭಾವನೆಯಿಂದಇರಬೇಕು. ಭಾರತೀಯ ಸಂಸ್ಕೃತಿಯೇ ವಿಶೇಷವಾದುದು. ಆ ದಿಕ್ಕಿನತ್ತ ಕೆಲಸ ಮಾಡೋಣ, ಶಾಂತಿಯನ್ನು ಕಾಪಾಡೋಣ ಎಂದರು.

ಜಡೆ ಸಂಸ್ಥಾನದ ಡಾ.ಮಹಾಂತಸ್ವಾಮಿ ಮಾತನಾಡಿ, ಇಲ್ಲಿ ಎಲ್ಲಾ ಧರ್ಮಗಳು ಒಟ್ಟಾಗಿ ಬಾಳುತ್ತಿವೆ. ಎಲ್ಲಾ ಧರ್ಮದ ಸಾರಗಳು ಮಾನವೀಯತೆಯೇ ಆಗಿದೆ. ಇಂತಹ ಭಾರತದಲ್ಲಿ ಆಗಾಗ ಶಾಂತಿ ಕದಡುವ ಘಟನೆಗಳು ನಡೆಯುತ್ತಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಶಾಂತಿ ಕಾಪಾಡಬೇಕಾದುದು ನಮ್ಮ ಕರ್ತವ್ಯವಾಗಿದೆ. ಕೂಡಿ ಬಾಳಿದರೆ ಸುಖ ಎಂಬ ಮಂತ್ರವನ್ನು ನಾವು ತಿಳಿಯಬೇಕಾಗಿದೆ. ಆ ನಿಟ್ಟಿನತ್ತ ಹೆಜ್ಜೆ ಹಾಕೋಣ. ಎಲ್ಲಾ ಧರ್ಮದವನ್ನು ಸಮಾನವಾಗಿ ಕಾಣೋಣ ಎಂದರು.

ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ಮಾತನಾಡಿ, ಪೊಲೀಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಿದಾಗ, ಮತ್ತು ಸಮುದಾಯಗಳು ಸ್ಪಂದಿಸಿದಾಗ, ಇಂತಹ ಘಟನೆಗಳಾದಾಗ ಶಾಂತಿ ಕಾಪಾಡಲು ಸಾಧ್ಯವಾಗುತ್ತದೆ ಎಂದರು.

ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿ ಮಾತನಾಡಿ, ಇಂತಹ ಅಹಿತಕರ ಘಟನೆಗಳು   ನಡೆದಾಗ ಬಡವರು ಬದುಕು ಕಳೆದುಕೊಳ್ಳುತ್ತಾರೆ. ಆದರೆ ಅದಕ್ಕೆ ಅವಕಾಶ ನೀಡಬಾರದು ಎಂದರು. ಮನುಷ್ಯತ್ವ ಮೀರಿದ ಯಾವುದೇ ಧರ್ಮವಿಲ್ಲ. ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಧರ್ಮ ಗುರುಗಳ ಹೆಗಲ ಮೇಲಿದೆ ಎಂದರು.

ಕೂಡಲಿ ಶೃಂಗೇರಿ ಮಹಾಸಂಸ್ಥಾನ ಮಠದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಮಾತನಾಡಿ, ಭಾರತ ವಿವಿಧೆತೆಯಲ್ಲಿ ಏಕತೆ ಹೊಂದಿದ ರಾಷ್ಟçವಾಗಿದೆ.ವಿಶ್ವದಲ್ಲಿಯೇ ಸ್ನೇಹ, ಸಹನೆ, ಶಾಂತಿಗೆ ಹೆಸರಾದ  ದೇಶವಾಗಿದೆ. ಅಶಾಂತತೆಯನ್ನು ಯಾವ ಧರ್ಮವೂ, ದೇವರೂ ಹೇಳಿಲ್ಲ. ಶಾಂತಿ ಪ್ರಧಾನ ವಾಗಬೇಕು. ಮಾನವ ಸಂಬಂಧಗಳು ಗಟ್ಟಿಯಾಗಬೇಕು ಎಂದರು.

ಮೌಲ್ವಿಗಳಾದ ಮೌಲಾನ ಶಾಹುಲ್ ಹಮೀದ್ ಮುಸ್ಲಿಯಾರ್ ಮಾತನಾಡಿ, ನಾಡಗೀತೆಯಲ್ಲಿ ಹೇಳಿರುವ ಹಾಗೆ ವಿವಿಧ ಜಾತಿ, ಧರ್ಮ, ಸಂಸ್ಕೃತಿಯುಳ್ಳ ದೇಶ ನಮ್ಮದಾಗಿದ್ದು, ಹೂದೋಟದಲ್ಲಿ ವಿವಿಧ ಜಾತಿಯ ಹೂಗಳಿದ್ದು, ಅದನ್ನು ಪೋಣಿಸಿದಾಗ ಸುಂದರ ಹಾರವಾಗುವ ಹಾಗೆ ನಾವೆಲ್ಲರೂ ಪರಸ್ಪರ ಶಾಂತಿ, ಪ್ರೀತಿಯಿಂದ ಇರಬೇಕು ಎಂದರು.

ಫಾದರ್  ಸ್ಟ್ಯಾನಿ ಡಿಸೋಜ ಅವರು ಮಾತನಾಡಿ, ಜಗದಲ್ಲೆಲ್ಲ ಶಾಂತಿ ಇರಲಿ, ಆದರೆ ಅದು ನನ್ನಿಂದಲೇ ಪ್ರಾರಂಭವಾಗಲಿ ಎಂಬ ಮಾತಿದೆ. ನಿಯಂತ್ರಣ ತಪ್ಪಿದಾಗ ಕೋಪ ಬಂದು ಆಸ್ತಿ, ಪಾಸ್ತಿಯ ಜೊತೆಗೆ ಮಾನಸಿಕ ಆರೋಗ್ಯ ನಷ್ಟವಾಗಿ ಸಾಮಾಜಿಕ ಸ್ವಾಸ್ಥ÷್ಯದ ನಷ್ಟವೂ ಉಂಟಾಗುತ್ತದೆ. ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯವೂ ಎಲ್ಲಾ ಧರ್ಮಕ್ಕೂ ಮಸಿಬಳಿಯುವಂತಾಗಿದೆ ಎಂದರು.

ಕಾರ್ಯಕ್ರಮ ಆಯೋಜಕ, ವಕೀಲ ಕೆ.ಪಿ. ಶ್ರೀಪಾಲ್, ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಟಿ.ಎನ್.ಸಿ. ಕಾಲೇಜಿನ ಪ್ರಾಂಶುಪಾಲ ಸುರೇಶ್, ಜಿಲ್ಲಾ ವಾಣಿಜ್ಯ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ವಿಶ್ವ ಹಿಂದೂ ಪರಿಷತ್‌ನ ರಮೇಶ್ ಬಾಬು ಸೇರಿದಂತೆ ಹಲವು ಮುಖಂಡರು ಮಾತನಾಡಿದರು. ರೈತ ಮುಖಂಡ ಕೆ.ಟಿ. ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಮËಲಾನಾ ಈರ್ ಶಾದ್ ಅಹಮ್ಮದ್ ಖಾನ್ ಉಪಸ್ಥಿತರಿದ್ದರು. ಎಂ. ಗುರುಮೂರ್ತಿ ಸ್ವಾಗತಿಸಿದರು. ಕೆ. ಯುವರಾಜ್ ದೇಶಭಕ್ತಿಗೀತೆ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News