ಯಾದಗಿರಿ: ಸೀಮಂತ ಕಾರ್ಯಕ್ರಮದಲ್ಲಿ ಸಿಲಿಂಡರ್ ಸೋರಿಕೆ ಪ್ರಕರಣ; ಮೃತರ ಸಂಖ್ಯೆ 11ಕ್ಕೇರಿಕೆ
ಯಾದಗಿರಿ: ಸೀಮಂತ ಕಾರ್ಯಕ್ರಮವೊಂದರಲ್ಲಿ ಸಿಲಿಂಡರ್ ಸೋರಿಕೆಯಿಂದಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಪುಟ್ಟ ಮಕ್ಕಳು ಸೇರಿದಂತೆ ಗಂಭೀರ ಗಾಯಗೊಂಡಿದ್ದ 20ಕ್ಕೂ ಹೆಚ್ಚು ಜನರಲ್ಲಿ 11 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಸೀಮಂತ ಕಾರ್ಯಕ್ರಮ ನಡೆಯುತ್ತಿದ್ದ ಮನೆಯೊಂದರಲ್ಲಿ ಕಳೆದ ಶುಕ್ರವಾರ ಸಿಲಿಂಡರ್ ಸೋರಿಕೆಯಿಂದ 20ಕ್ಕೂ ಹೆಚ್ಚಿನ ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳಿಗೆ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕೆತ್ಸೆ ನಿಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೆಲವರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳಲ್ಲಿ ಗುರುವಾರ ಸಂಗನಗೌಡ ಲಕಶೆಟ್ಟಿ (55) ವರ್ಷ. ಸೋಲಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದೀಗ ಸಾವಿನ ಸಂಖ್ಯೆ 11ಕ್ಕೇರಿದೆ.
ಇನ್ನು ದೋಷಪೂರಿತ ಸಿಲಿಂಡರ್ ವಿತರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಗ್ಯಾಸ್ ಏಜೆನ್ಸಿಯೊಂದರ ಮಾಲಕ ಹಾಗೂ ಇಬ್ಬರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.
ಇದೀಗ ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಸಂತ್ರಸ್ತರ ಕುಟುಂಬ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿ ತನಿಖೆ ನಡೆಯುತ್ತಿದ್ದು, ವಿಚಾರಣೆಯಿಂದ ಶಾಹಪುರದ ವಿಜಯ್ ಗ್ಯಾಸ್ ಏಜೆನ್ಸಿಯ ಮಾಲಕ ಮತ್ತು ಇಂಡೆನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ರವರ ವಿರುದ್ಧ ಶಹಾಪುರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 30/2022 ಕಲo.285, 337, 338, 304 A IPC ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
- ಸಿ.ಬಿ ವೇದಮೂರ್ತಿ, ಪೊಲೀಸ್ ಅಧೀಕ್ಷಕರು ಯಾದಗಿರಿ