ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದ ಸಿಎಂ ಬಸವರಾಜ ಬೊಮ್ಮಾಯಿ

Update: 2022-03-05 18:09 GMT

ಹಾವೇರಿ, ಮಾ. 5: ‘ರಶ್ಯಾ ದಾಳಿ ಹಿನ್ನೆಲೆಯಲ್ಲಿ ಉಕ್ರೇನ್‍ನಲ್ಲಿ ಸಾವನ್ನಪ್ಪಿದ ಕರ್ನಾಟಕ ರಾಜ್ಯದ ಹಾವೇರಿ ಮೂಲಕ ವೈದ್ಯಕೀಯ ವಿದ್ಯಾರ್ಥಿ ನವೀನ್ ಅವರ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತನ ಪೋಷಕರಿಗೆ ಸಾಂತ್ವನ ಹೇಳಿದರು. ಅಲ್ಲದೆ, 25 ಲಕ್ಷ ರೂ.ಮೊತ್ತದ ಚೆಕ್ ಅನ್ನು ಇದೇ ವೇಳೆ ಪೋಷಕರಿಗೆ ಹಸ್ತಾಂತರ ಮಾಡಿದರು.

ಶನಿವಾರ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿಯಲ್ಲಿರುವ ಉಕ್ರೇನ್‍ನಲ್ಲಿ ಮೃತಪಟ್ಟ ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅಲ್ಲದೆ, ಆತನ ತಂದೆ ಶೇಖರಗೌಡ ಗ್ಯಾನಗೌಡರ್ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಕ್ರೇನ್‍ನಲ್ಲಿ ಇಂದು ಬೆಳಗ್ಗೆ ಯುದ್ಧವಿರಾಮ ಘೋಷಿಸಲಾಗಿದೆ. ಬಾಂಬ್ ದಾಳಿ ನಿಂತ ಬಳಿಕ  ದೇಹವನ್ನು ಪಡೆದು ಇಲ್ಲಿಗೆ ಕರೆತರಲು ವ್ಯವಸ್ಥೆ ಮಾಡಲಾಗುವುದು. ನಾನು ಬೆಂಗಳೂರಿಗೆ ತೆರಳಿದ ಬಳಿಕ ಪುನಃ ಮಾತನಾಡಿ ಆದಷ್ಟು ಬೇಗ ನವೀನ್ ಪಾರ್ಥಿವ ಶರೀರವನ್ನು ಇಲ್ಲಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಲ್ಲಿಯ ಸ್ಥಿತಿಗತಿಯ ಮೇಲೆ ಇದು ಅವಲಂಬಿಸಿದೆ. ಯುದ್ಧ ಆದಷ್ಟು ಬೇಗ ನಿಲ್ಲಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನವೀನ್ ಸಾವು ನಮಗೆಲ್ಲಾ ದಿಗ್ಭ್ರಮೆ ಮೂಡಿಸಿದೆ. ಅವನ ಸಾವು ಅತ್ಯಂತ ದುಃಖದ ಸಂಗತಿ. ತನ್ನ ಬದುಕನ್ನು ಕಟ್ಟಿಕೊಳ್ಳಲೆಂದು, ವಿದ್ಯಾರ್ಜನೆಗಾಗಿ ಅಷ್ಟು ದೂರ ತೆರಳಿದ ನವೀನ್ ಗೆ ಈ ರೀತಿಯ ಸಾವು ಒದಗಿರುವುದು ಖೇದಕರ. ಯಾರೂ ಇದನ್ನು ಊಹಿಸಿಯೂ ಇರಲಿಲ್ಲ. ಯುದ್ಧದ ನಡುವೆಯೂ ಹಲವರು ಮರಳಿ ಬಂದಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು. 

ಇನ್ನೂ ಬಹಳಷ್ಟು ವಿದ್ಯಾರ್ಥಿಗಳು ಅಲ್ಲಿ ಸಿಲುಕಿಕೊಂಡಿದ್ದಾರೆ. ಖಾರ್ಕೀವ್ ನಿಂದ ಸುಮಾರು 30 ಕಿ.ಮೀ ಬಂದು ಒಂದು ಪ್ರದೇಶದಲ್ಲಿ ಸುರಕ್ಷಿತವಾಗಿ ಕೆಲವು ವಿದ್ಯಾರ್ಥಿಗಳಿದ್ದಾರೆ. ಅಲ್ಲಿಂದ ಮುಂದಕ್ಕೆ ಸಾರಿಗೆ ವ್ಯವಸ್ಥೆ ಆಗುತ್ತಿದೆ. ಅಲ್ಲಿಂದ ಮಕ್ಕಳು ನಡೆದುಕೊಂಡು ಬಂದಿದ್ದಾರೆ. ಇನ್ನು ಕೆಲವರು ಬಂಕರ್ ಗಳಲ್ಲಿ ನೆಲೆಸಿದ್ದಾರೆ. 2 ದಿನಗಳ ಯುದ್ಧ ವಿರಾಮವಿರುವುದರಿಂದ ಅವರನ್ನು ಕರೆ ತರುವ ಸಾಧ್ಯತೆಗಳಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ವ್ಯವಸ್ಥೆಯಲ್ಲಿ ಬದಲಾವಣೆಗೆ ಚಿಂತನೆ: ಎಲ್ಲಕ್ಕಿಂತ ಮುಖ್ಯವಾಗಿ ವ್ಯವಸ್ಥೆಯ ಬಗ್ಗೆ ಚಿಂತನೆ ಮಾಡಬೇಕಿದೆ. ಮೆರಿಟ್ ಇದ್ದರೂ ಕೂಡ ಮಕ್ಕಳು ಏನು ಓದಬೇಕೋ ಅದಕ್ಕೆ ವ್ಯವಸ್ಥೆಯಲ್ಲಿ ಅವಕಾಶವಿಲ್ಲ ಎನ್ನುವುದನ್ನು ಈ ಘಟನೆ ತೋರಿಸುತ್ತಿದೆ. ಈ ಕುರಿತು ಪುನರ್ ಪರಿಶೀಲನೆಯ ಅಗತ್ಯವಿದೆ. ಕೇಂದ್ರ ಮಟ್ಟದಲ್ಲಿಯೂ ಗಂಭೀರವಾದ ಚರ್ಚೆ ನಡೆದಿದೆ. ಘಟನೆಯ ಬಳಿಕ ರಾಜ್ಯ ಸರಕಾರವೂ ಉನ್ನತ ಮಟ್ಟದ  ಸಭೆಯನ್ನು ಕರೆದು ಚರ್ಚೆ ಮಾಡಿದೆ. ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಶುಲ್ಕ ಹಾಗೂ ಆರ್ಥಿಕ ಸಹಾಯಗಳನ್ನು  ಮಾಡಬಹುದು. ಆದರೆ, ಆಯ್ಕೆ ಪ್ರಕ್ರಿಯೆ ಕೇಂದ್ರ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಮಾಡಬೇಕಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

‘ನನ್ನ ಪುತ್ರ ನವೀನ್ ಪಾರ್ಥಿವ ಶರೀರವನ್ನು ಶೀಘ್ರದಲ್ಲಿ ತರುವ ಪ್ರಯತ್ನ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಉಕ್ರೇನ್‍ನಲ್ಲಿರುವ ಕರ್ನಾಟಕ ರಾಜ್ಯದ ಉಳಿದ ಎಲ್ಲ ಮಕ್ಕಳನ್ನು ಕರೆಸುವಂತೆ ಮನವಿ ಮಾಡಿದ್ದೇವೆ. ನನ್ನ ಪುತ್ರನ ಮೃತದೇವನ್ನಾದರೂ ಸರಕಾರ ತರಲಿ'

-ಶೇಖರಗೌಡ, ಮೃತ ನವೀನ್ ತಂದೆ ಚಳಗೇರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News