×
Ad

ಶೀಘ್ರವೇ ಹುಬ್ಬಳ್ಳಿಯಲ್ಲಿ ಮಾದಕವಸ್ತು ಪತ್ತೆ ವಿಭಾಗ ಸ್ಥಾಪನೆ: ಸಿಎಂ ಬೊಮ್ಮಾಯಿ

Update: 2022-03-06 15:44 IST

ಹುಬ್ಬಳ್ಳಿ, ಮಾ.6: ಹುಬ್ಬಳ್ಳಿಯಲ್ಲಿ ಶೀಘ್ರದಲ್ಲಿಯೇ ಮಾದಕ ವಸ್ತುಗಳ ಪತ್ತೆ ವಿಭಾಗವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಅವರು ಇಂದು ಗೋಕುಲ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ಪೊಲೀಸ್ ಇಲಾಖೆಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿ  ಮಾತನಾಡುತ್ತಿದ್ದರು.

 ಡಿಎನ್‍ಎ, ಸೈಬರ್, ಮೊಬೈಲ್, ದಾಖಲೀಕರಣ ಹಾಗೂ ಆಡಿಯೋ ವೀಡಿಯೋ ವಿಭಾಗಗಳನ್ನು ಈ ಭಾಗದಲ್ಲಿ ತೆರೆಯಲಾಗಿದೆ. ಮಾದಕವಸ್ತುಗಳ ಪತ್ತೆ ವಿಭಾಗವನ್ನು ಪ್ರಾರಂಭಿಸುವ ಅಗತ್ಯವಿದೆ. ಈಗಾಗಲೇ 80 ಮಂದಿ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದೆ. ತರಬೇತಿ ಪಡೆದ ನಂತರ ಹುಬ್ಬಳ್ಳಿ ಮತ್ತು ಬಳ್ಳಾರಿಗೆ ಇವರನ್ನು ನೇಮಕ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಅಪರಾಧಗಳನ್ನು ನಿಯಂತ್ರಿಸಲು ಕಾನೂನು ಸದಾ ಅಪರಾಧಕ್ಕಿಂತಲೂ ಮುಂಚತವಾಗಿಯೇ ರೂಪುಗೊಳ್ಳಬೇಕು.  ಅದಕ್ಕಾಗಿ ವಿಜ್ಞಾನ, ತರಬೇತಿ, ಇಂದೀಕರಣ ಎಲ್ಲವೂ ನಿರಂತರವಾಗಿ ನಡೆಯಬೇಕು.  ಮಾದಕವಸ್ತುಗಳ ನಿಯಂತ್ರಣಕ್ಕಾಗಿ ನಮ್ಮ ರಾಜ್ಯ ಪೋಲೀಸರು ಉತ್ತಮ ಕೆಲಸವನ್ನು ಮಾಡಿದ್ದಾರೆ. ಭಾರತದಲ್ಲಿ ಕಳೆದ 5 ವರ್ಷಗಳಲ್ಲಿ ವಶ ಪಡಿಸಿಕೊಂಡಷ್ಟು ಮಾದಕ ವಸ್ತುವನ್ನು ಒಂದು ವರ್ಷದಲ್ಲಿ ಕರ್ನಾಟದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅವರು  ತಿಳಿಸಿದರು.

ಉತ್ತರ ಕರ್ನಾಟಕದ ಅತ್ಯಾಧುನಿಕ ಕೇಂದ್ರವಾಗಬೇಕು:
ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯವು ಉತ್ತರ ಕರ್ನಾಟಕದ ಅತ್ಯಾಧುನಿಕ ಪ್ರಾದೇಶಿಕ  ಕೇಂದ್ರವಾಗಬೇಕು. ಆಧುನಿಕ ಕಟ್ಟಡವಾದರೆ ಸಾಲದು, ಆಧುನಿಕ ಉಪಕರಣ, ತರಬೇತಿ ಹೊಂದಿದ ಸಿಬ್ಬಂದಿ, ಟಿಲಿಮೆಡಿಸಿನ್ ಮತ್ತು  ಮ್ಯಾಪಿಂಗ್ ನಿಂದ 2-3 ಜಿಲ್ಲೆಗಳಿಗೆ  ಹೃದ್ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆಯನ್ನು ನೀಡಲು ಈಗಾಗಲೇ ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸ್ಥಳೀಯ ಉತ್ಪನ್ನ/ ಪ್ರತಿಭೆಗೆ ಇಂಬು:
ಆದಷ್ಟು ಬೇಗನೇ ಎಫ್‍ಎಂಸಿಜಿ ಸ್ಥಾಪನೆಗೆ ಆದೇಶ ಮಾಡಲಾಗಿದ್ದು, ಈಗಾಗಲೇ ಸ್ಥಳ ನಿಗದಿಯಾಗಿದೆ. ಕ್ಲಸ್ಟರ್ ಬೇಗ ನಿರ್ಮಾಣವಾದಲ್ಲಿ ಯುವಕರಿಗೆ ಉದ್ಯೋಗ ದೊರೆಯಲಿದೆ. ಇಲ್ಲಿ ಕನಿಷ್ಠ ವಿದ್ಯಾರ್ಹತೆ ಪಡೆದವರಿಂದ ಹಿಡಿದು ತಾಂತ್ರಿಕ ಶಿಕ್ಷಣ ಪಡೆದವರಿಗೂ ಉದ್ಯೋಗ ದೊರೆಯಲಿದೆ. ಉತ್ತರ ಕರ್ನಾಟಕದ ಎಲ್ಲಾ ಆರ್ಥಿಕ ಮತ್ತು ಶೈಕ್ಷಣಿಕ ಸ್ಥರಗಳ ಯುವಕರಿಗೆ ಉದ್ಯೋಗ ಸಿಗುವುದು ಇದರ ವೈಶಿಷ್ಟ್ಯತೆ. ಉದ್ಯೋಗ ನೀತಿಯನ್ನು ರೂಪಿಸುವುದಾಗಿ ಘೋಷಣೆ ಮಾಡಲಾಗಿದೆ. ಉದ್ಯೋಗ ಹೆಚ್ಚು ನೀಡುವವರಿಗೆ ಹೆಚ್ಚಿನ ಪ್ರೋತ್ಸಾಹಕಗಳನ್ನು ನೀಡಲಾಗುವುದು. ಜವಳಿ ಕೇಂದ್ರ, ಎಫ್‍ಎಂಸಿಜಿ, ಸೆಮಿ ಕಂಡ್ಟರ್,  ಹಲವಾರು ವಲಯಗಳನ್ನು ಗುರುತಿಸಿದ್ದೇವೆ. ಸ್ಥಳೀಯವಾಗಿ ತಯಾರಾಗುವ ಪ್ರಸಿದ್ಧ ವಸ್ತುಗಳಿಗೆ ಇಂಬು ನೀಡಿ, ಹಣಕಾಸಿನ ಸಹಾಯ, ಬ್ರಾಂಡಿಂಗ್, ತಾಂತ್ರಿಕತೆ, ಮಾರುಕಟ್ಟೆ ವ್ಯವಸ್ಥೆ ನೀಡಿದರೆ ಬಹಳ ದೊಡ್ಡ ಪ್ರಮಾಣದಲ್ಲಿ ಅವುಗಳ ಬೆಳವಣಿಗೆ ಕಾಣಬಹುದು.

ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು:
ಕಲ್ಯಾಣ ಕರ್ನಾಟಕದ ಶಹಾಬಾದಿನಿಂದ ಗುಳೇಗುಡ್ಡದ ಮೊಳಕಾಲ್ಮೂರು ಸೀರೆಯಿಂದ ಹಿಡಿದು ಧಾರವಾಡದ ಕಸೂರಿ , ನವಲಗುಂದದ ಜಮಖಾನೆಯವರೆಗೂ ಸ್ಥಳೀಯ ಪ್ರತಿಭೆಗೆ ಕ್ಲಸ್ಟರ್ ರೂಪಿಸಿ ತಾಂತ್ರಿಕ ಬೆಂಬಲ ನೀಡಿದರೆ ಅಲ್ಲಿಯೇ ಹೆಚ್ಚಿನ ಉದ್ಯೋಗವನ್ನು ಸೃಷ್ಟಿ ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ.  ಮಹತ್ವಾಕಾಂಕ್ಷಿ ಬಜೆಟ್ ನ್ನು ಮಂಡಿಸಲಾಗಿದೆ. ಇದನ್ನು ಪ್ರಾಮಾಣಿವಾಗಿ ಅನುಷ್ಠಾನ ಮಾಡಲು 24/7 ಸರ್ಕಾರ ಕೆಲಸ ಮಾಡಲಿದೆ.

ಕರ್ನಾಟಕ ಕ್ಯಾನ್ಸರ್ ಸಂಸ್ಥೆ 25 ವರ್ಷಗಳಿಂದ ಉತ್ತಮ ಕೆಲಸ ಮಾಡಿದೆ. ಅಲ್ಲಿಗೆ ಆಧುನಿಕ ಉಪಕರಣಗಳನ್ನು ಖರೀದಿಸಲು ಹೆಚ್ಚಿನ ಹಣಕಾಸಿನ  ನೆರವನ್ನು  ಈಗಾಗಲೇ ಬಜೆಟ್‍ನಲ್ಲಿ  ಮೀಸಲಿರಿಸಿದೆ. ಕೃಷಿ, ಕೈಗಾರಿಕೆ, ಮತ್ತು ಸೇವಾ ವಲಯದಲ್ಲಿ ಬೆಳವಣಿಗೆ ಮಾಡುವ ತೀರ್ಮಾನ ಮಾಡಿ, ಬೆಳವಣಿಗೆಗೆ ಕೇಂದ್ರಿತ, ಎಲ್ಲವನ್ನೂ ಒಳಗೊಂಡ, ಸಾಮಾಜಿಕ ಮತ್ತು ಪ್ರಾದೇಶಿಕ ಸಮಾನತೆ ತರುವ ಬಜೆಟ್ ಮಂಡಿಸಲಾಗಿದೆ. ಲಿಂಗ ಸಮಾನತೆ ತರಲು ಹೆಣ್ಣು ಮಕ್ಕಳಿಗೆ ಹೆಚ್ಚು ಅವಕಾಶಗಳನ್ನು ನೀಡುವ ಯೋಜನೆಗಳಿವೆ. ಸಮಗ್ರವಾದ ಬಜೆಟ್ ಆಗಿದೆ.  ಇದನ್ನು ರೂಪಿಸಲು ಬಹಳಷ್ಟು ಚಿಂತನೆ ಮಾಡಲಾಗಿದೆ ಎಂದರು.

ಕಾಲಮಿತಿಯೊಳಗೆ ಯೋಜನೆಗಳ ಅನುಷ್ಠಾನ:
ಉತ್ತರ ಕರ್ನಾಟಕ ಅಭಿವೃದ್ದಿಗೆ ಬಜೆಟ್ ನಲ್ಲಿ ಹೇಳಿರುವುದನ್ನು ನಿಗದಿತ ಸಮಯದಲ್ಲಿ ಕಾರ್ಯಗತವಾಗಿ, ಬಡಜನರಿಗೆ, ಯುವಕರಿಗೆ, ಶಿಕ್ಷಣದಿಂದ ವಂಚಿತರಾದವರಿಗೆ ಸೌಲಭ್ಯ ದೊರಕಿಸಲಾಗಿದೆ. ಧಾರವಾಡದಿಂದ ಬೆಳಗಾವಿ ರೈಲ್ವೆ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಇದನ್ನು  ಪ್ರಾರಂಭಿಸಲಾಗುವುದು. ಹುಬ್ಬಳ್ಳಿ, ಅಂಕೋಲಾ ರೈಲ್ವೆ ಮಾರ್ಗಕ್ಕೆ ಪರಿಸರದ ಅನುಮೋದನೆ ಪಡೆದು ಇದೇ ವರ್ಷ ಪ್ರಾರಂಭಿಸಲು ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನೆರವಿನಿಂದ ಮಾಡಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News