×
Ad

ಕೇಂದ್ರ ಸಚಿವರು ನಾವೇನು ಮಾಡಲು ಸಾಧ್ಯವಿಲ್ಲ ಎಂದರೆ ಹೇಗೆ: ಡಿ.ಕೆ.ಶಿವಕುಮಾರ್ ಪ್ರಶ್ನೆ

Update: 2022-03-06 17:45 IST

ಬೆಂಗಳೂರು, ಮಾ. 6: ‘ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರವಾಗಿ ನಾವೇನು ಮಾಡಲು ಸಾಧ್ಯವಿಲ್ಲ, ಕರ್ನಾಟಕ ಹಾಗೂ ತಮಿಳುನಾಡು ನಡುವೆ ಮಾತುಕತೆಗೆ ಮಧ್ಯಸ್ಥಿಕೆ ನಡೆಸಲು ಸಿದ್ಧರಿದ್ದೇವೆ' ಎಂಬ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಹೇಳಿಕೆ ಕೇಳಿ ಮೌನ ವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕೂಡಲೇ ಈ ಬಗ್ಗೆ ಉತ್ತರ ನೀಡಬೇಕು ಅಥವಾ ರಾಜೀನಾಮೆ ನೀಡಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿಎಂ ಸಮ್ಮುಖದಲ್ಲೇ ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರವನ್ನು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವರು ಹೇಳಿಕೆ ಕೊಟ್ಟಾಗ ಆ ಬಗ್ಗೆ ಮಾತನಾಡದೆ ಬೊಮ್ಮಾಯಿ ಅವರು ಮೌನ ವಹಿಸಿ ತಮ್ಮ ಸ್ಥಾನದ ಜವಾಬ್ದಾರಿ ಮರೆತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

‘ಕೇಂದ್ರ ಸಚಿವರಾದವರೆ, ನಾವೇನು ಮಾಡಲು ಸಾಧ್ಯವಿಲ್ಲ, ನೀವುಗಳೇ ಬಗೆ ಹರಿಸಿಕೊಳ್ಳಿ ಎಂದರೆ ಹೇಗೆ? ಇದು ಕೇಂದ್ರ ಸರಕಾರದ ಜವಾಬ್ದಾರಿ ಏನು? ತಮಿಳುನಾಡು ರಾಜ್ಯದವರು ಎಂದಿಗೂ ಒಪ್ಪುವುದಿಲ್ಲ. ರಾಜಕಾರಣ ಮಾಡುವವರು ಎಂದಿಗೂ ಒಪ್ಪುವುದಿಲ್ಲ, ಇದು ಸಾಧ್ಯವಾಗದ ವಿಚಾರ' ಎಂದು ಶಿವಕುಮಾರ್ ಆಕ್ಷೇಪಿಸಿದರು.

‘ಕೇಂದ್ರ ಸರಕಾರದ ಪರಿಸರ ಇಲಾಖೆಯಿಂದ ಇಂತಹ ದಿನ ಅನುಮತಿ ಕೊಡಿಸುತ್ತೇನೆ ಎಂದು ದಿನಾಂಕ ನಿಗದಿಪಡಿಸಬೇಕು. ಅದನ್ನು ಬಿಟ್ಟು ಮಧ್ಯಸ್ಥಿಕೆ ವಹಿಸುತ್ತೇವೆ ಎನ್ನುವುದಲ್ಲ, ಮಧ್ಯಸ್ಥಿಕೆ ಮಾಡಿಕೊಳ್ಳಲಿ ಅದು ಬೇರೆ ವಿಚಾರ, ಆದರೆ ನಮ್ಮ ಕೈಯಲ್ಲಿ ಈ ಯೋಜನೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ' ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

‘ಇದು ರಾಜ್ಯಕ್ಕೆ ದೊಡ್ಡ ಅಪಮಾನ. ಕೇಂದ್ರ ಸರಕಾರ ಈ ವಿಚಾರದಲ್ಲಿ ಅಸಮರ್ಥ ಎಂಬುದು ರುಜುವಾತಾಗುತ್ತಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಬೇಕು. ಇಲ್ಲವಾದರೆ ಅಧಿಕಾರ ಬಿಟ್ಟು ಹೋಗಬೇಕು' ಎಂದ ಶಿವಕುಮಾರ್, ‘ನಾವು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ಹೇಳಿಕೆಗೆ ಉತ್ತರಿಸುವಷ್ಟು ದೊಡ್ಡವರಲ್ಲ' ಎಂದು ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News