ರಾಜ್ಯದಲ್ಲಿ ಅವಧಿಗೆ ಮುನ್ನವೇ ಚುನಾವಣೆ ಬರುವ ಸಾಧ್ಯತೆ: ಕುಮಾರಸ್ವಾಮಿ

Update: 2022-03-06 14:22 GMT

ಕಲಬುರಗಿ, ಮಾ. 6: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ವಿಧಾನಸಭೆಗೆ ಅವಧಿ ಮುಗಿಯುವ ಮುನ್ನವೇ ಚುನಾವಣೆ ಬರುವ ಸಾಧ್ಯತೆ ಇದೆ. ಚುನಾವಣೆ ಯಾವುದೇ ಕ್ಷಣದಲ್ಲಿ ಘೋಷಣೆಯಾದರೂ ಅದನ್ನು ಎದುರಿಸಲು ಜೆಡಿಎಸ್ ಸಿದ್ಧವಾಗಿದೆ. ನಾವು ಯಾರ ಜತೆಯೂ ಇಲ್ಲ. ನಮಗೆ ರೈಟೂ ಬೇಡ, ಲೆಫ್ಟೂ ಬೇಡ. ಸ್ಟ್ರೈಟ್ ಆಗಿ ಹೋಗೋಣ ಎಂಬ ತೀರ್ಮಾನ ಮಾಡಿದ್ದೇವೆ' ಎಂದು ಹೇಳಿದರು.

‘ಅವಧಿಗೆ ಮೊದಲೇ ಚುನಾವಣೆ ಬರಬಹುದು ಎನ್ನುವ ಕಾರಣಕ್ಕೇ ನಾವು ಪಕ್ಷ ಸಂಘಟನೆಯಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದೇವೆ. ಕೋವಿಡ್ ಕಾರಣದಿಂದ ಎರಡು ವರ್ಷ ಸಂಘಟನೆ ಕೆಲಸ ಮಂದಗತಿಯಲ್ಲಿತ್ತು. ಈಗ ಎಲ್ಲವೂ ವೇಗವಾಗಿದೆ. ಸೋಂಕು, ಮತ್ತಿತರೆ ಸಮಸ್ಯೆಗಳು ಇಲ್ಲದಿರುವುದರಿಂದ ಪಕ್ಷದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ' ಎಂದು ಅವರು ಉತ್ತರ ನೀಡಿದರು.

‘ಬಿಜೆಪಿ ಬಗ್ಗೆ ನಿಮಗೆ ಸಾಫ್ಟ್ ಕಾರ್ನರ್ ಇದೆ ನಿಮಗೆ ಎಂದು ಆರೋಪವಿದೆಯಲ್ಲ? ಎನ್ನುವ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ‘ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಇದೆಯೋ ಇಲ್ಲವೋ ಎಂಬುದಕ್ಕೆ ನನ್ನ ಹೇಳಿಕೆಗಳೇ ಉತ್ತರ. ವಿಧಾನ ಮಂಡಲ ಅಧಿವೇಶನ ಮುಗಿದ ಕೂಡಲೇ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಮ್ಮಿಕೊಳ್ಳಲಾಗಿರುವ ‘ಜನತಾ ಜಲಧಾರೆ' ಗಂಗಾ ರಥಯಾತ್ರೆಯನ್ನು ಆರಂಭ ಮಾಡಲಾಗುವುದು ಎಂದು ಹೇಳಿದರು.

ರಾಜ್ಯಾದ್ಯಂತ ನಡೆಯಲಿರುವ ‘ಜನತಾ ಜಲಧಾರೆ' ಗಂಗಾ ರಥಯಾತ್ರೆಯಲ್ಲಿ ವಿವಿಧ ಜೀವನದಿಗಳು ಉಗಮವಾಗುವ, ಸಂಗಮಗಳು, ಪುಣ್ಯಕ್ಷೇತ್ರಗಳು ಸೇರಿದಂತೆ 53 ಕಡೆಗಳಲ್ಲಿ ಜಲ ಸಂಗ್ರಹ ಮಾಡಲಾಗುವುದು. ಆ ವೇಳೆ 75 ವರ್ಷಗಳಲ್ಲಿ ರಾಜ್ಯಕ್ಕೆ ಆಗಿರುವ ನೀರಾವರಿ ಅನ್ಯಾಯಗಳನ್ನು ತಿಳಿಸುವ ಹಾಗೂ ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಗಂಗೆಯ ಸಾಕ್ಷಿಯಾಗಿ ಸಂಕಲ್ಪ ಮಾಡಲಾಗುವುದು ಎಂದರು.

ನೀರಾವರಿಗೆ ದ್ರೋಹ: ರಾಜ್ಯಕ್ಕೆ ಐದು ವರ್ಷ ಜಲ ಸಂಪನ್ಮೂಲ ಸಚಿವರಾಗಿಯೂ ಕೆಲಸ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಮುಂಗಡ ಪತ್ರದಲ್ಲೂ ನೀರಾವರಿ ಕ್ಷೇತ್ರವನ್ನು ಕಡೆಗಣಿಸಿ ದೊಡ್ಡಮಟ್ಟದ ದ್ರೋಹ ಎಸಗಲಾಗಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ತರಾಟೆ: ಕೇಂದ್ರದ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಖಾವತ್, ಮೇಕೆದಾಟು ಅಣೆಕಟ್ಟು ಯೋಜನೆ ಬಗ್ಗೆ ಕರ್ನಾಟಕ ಮತ್ತು ತಮಿಳುನಾಡು ಸಿದ್ಧವಾದರೆ ಮಧ್ಯಸ್ಥಿಕೆ ವಹಿಸುವುದಾಗಿ ತಿಳಿಸಿದ್ದಾರೆ. ಆದರೆ, ಅದಕ್ಕೆ ಕಾಲಮಿತಿ ಹಾಕಿಕೊಳ್ಳಲು ಸಾಧ್ಯವಿಲ್ಲ. ಎರಡೂ ರಾಜ್ಯಗಳು ಒಮ್ಮತಕ್ಕೆ ಬನ್ನಿ ಆಂತಾರೆ ಅವರು. ಮುಖ್ಯಮಂತ್ರಿ ಮಾತ್ರ ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ರೂ. ಮೀಸಲಿರುವುದಾಗಿ ಹೇಳುತ್ತಾರೆ. ಇನ್ನು ಕಾಂಗ್ರೆಸ್ ನಾಯಕರು ನಮ್ಮ ಪಾದಯಾತ್ರೆಯನ್ನು ನೋಡಿ ಹೆದರಿಕೊಂಡು ಇಷ್ಟು ಹಣ ಘೋಷಣೆ ಮಾಡಿದರು ಎಂದು ಹೇಳಿಕೊಳ್ಳುತ್ತಿದ್ದಾರೆ. ನಾವೇನು ಕಾಂಗ್ರೆಸ್‍ನವರಿಗೆ ಹೆದರಿ ಹಣ ಘೋಷಣೆ ಮಾಡಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಮೇಕೆದಾಟು ಯೋಜನೆಯನ್ನು ಆರಂಭ ಮಾಡುವ ಯೋಗ್ಯತೆ ಇವರಿಗಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ನಾಡಿನ ಜನರಿಗೆ ದ್ರೋಹ ಮಾಡಿವೆ ಎಂದು ಟೀಕಿಸಿದರು.

ಕಾಳಿ ಹೆಸರಿನಲ್ಲಿ ನಾಟಕ: ಈ ನಾಟಕ ಸಾಲದು ಎಂಬಂತೆ, 5 ಜಿಲ್ಲೆಗಳಿಗೆ ಕಾಳಿ ನದಿ ನೀರು ಕೊಡುತ್ತೇವೆ ಎಂದು ಇನ್ನೊಂದು ಯೋಜನೆಯನ್ನು ಸರಕಾರ ಘೋಷಣೆ ಮಾಡಿಕೊಂಡಿದೆ. ಸತ್ಯ ಸಂಗತಿ ಎಂದರೆ, ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ‘ಸೂಫಾ' ಅಣೆಕಟ್ಟು ನೀರಿನ ಕೊರತೆ ಎದುರಿಸುತ್ತಿದೆ. ಒಂದು ಕಡೆ ಮಹದಾಯಿಯ 5 ಟಿಎಂಸಿ ನೀರನ್ನು ಸೂಫಾದಲ್ಲಿ ತುಂಬಿಡಲು ಅವಕಾಶ ಕೊಡಿ ಎಂದು ನ್ಯಾಯಾಧಿಕರಣಕ್ಕೆ ಮನವಿ ಮಾಡಲಾಗಿತ್ತು. ಆ ಬೇಡಿಕೆಯನ್ನು ನ್ಯಾಯಾಧಿಕರಣ ತಿರಸ್ಕರಿಸಿದೆ. ಹಾಗಾದರೆ, ನೀರಿನ ಕೊರತೆ ಇರುವ ಸೂಫಾ ಜಲಾಶಯದಿಂದ ಸರಕಾರ 5 ಜಿಲ್ಲೆಗಳಿಗೆ ನೀರನ್ನು ಎಲ್ಲಿಂದ ತರುತ್ತದೆ? ಎಂದು ಅವರು ಪ್ರಶ್ನೆ ಮಾಡಿದರು.

ನೀರಾವರಿ ವಿಷಯದಲ್ಲಿ ಮೂರು ನಾಮ: ‘ಎಲ್ಲಿ ಯಾವ ಅಣೆಕಟ್ಟು ಕಟ್ಟಬೇಕು ಎಂದು ಡಿಪಿಆರ್‍ಗಳು ಆಗಿಲ್ಲ. ತುಂಗಭದ್ರಾ ನದಿ ಪ್ರಾಧಿಕಾರ ತೀರ್ಮಾನ ಕೈಗೊಂಡಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಸೂಚನೆ ಹೊರಬಿದ್ದ ಮೇಲೆ ಇನ್ನೂ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಹಾಗಿದ್ದರೂ ನಮ್ಮ ಮುಖ್ಯಮಂತ್ರಿಗಳು ನಾನೇ ದೊಡ್ಡ ನೀರಾವರಿ ತಜ್ಞ ಎಂದು ಹೇಳಿಕೊಳ್ಳುತ್ತಾರೆ. ಬಿಜೆಪಿಯವರು ನೀರಾವರಿ ವಿಷಯದಲ್ಲಿ ರಾಜ್ಯದ ಜನರಿಗೆ ಮೂರು ನಾಮ ಹಾಕಲು ಹೊರಟಿದ್ದಾರೆ. ಯುವಜನರಿಗೆ ಉದ್ಯೋಗದ ವಿಷಯದಲ್ಲಿ ಈ ಬಜೆಟ್‍ನಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ. ಇವೆಲ್ಲ ವಿಷಯಗಳನ್ನು ಜಲಧಾರೆಯಲ್ಲಿ ಜನರ ಮುಂದೆ ಇಡುತ್ತೇನೆ' ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News