×
Ad

ರಾಜ್ಯದಲ್ಲಿರುವುದು ಮಹಿಳಾ ವಿರೋಧಿ ಬಿಜೆಪಿ ಸರಕಾರ: ಡಿ.ಕೆ.ಶಿವಕುಮಾರ್

Update: 2022-03-08 19:59 IST

ಬೆಂಗಳೂರು, ಮಾ.8: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಮಹಿಳಾ ವಿರೋಧಿ ಸರಕಾರ. ನಾವು ಹೆಣ್ಣು ಕುಟುಂಬದ ಕಣ್ಣು ಎಂದು ಬೇಕಾದಷ್ಟು ಕಾರ್ಯಕ್ರಮ ಆರಂಭಿಸಿದ್ದೆವು. ಇಡೀ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೆವು. ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಮಹಿಳೆಯರ ಅಭಿವೃದ್ಧಿಗೆ 10 ಸಾವಿರ ಕೋಟಿ ಕೊಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದರು. ಮಹಿಳೆಯರಿಗೆ 2 ಲಕ್ಷದವರೆಗೂ ಸಾಲ, ಬಡ ಮಹಿಳೆಯರಿಗೆ ಸ್ಮಾರ್ಟ್ ಫೋನ್ ವಿತರಣೆ ಎಂಬ ಭರವಸೆಗಳನ್ನು ನೀಡಿದ್ದರು. 3 ಗ್ರಾಂ ತಾಳಿ, 25 ಸಾವಿರ ಹಣ ನೀಡುವುದಾಗಿ ಹೇಳಿದ್ದರು. ಆದರೆ, ಯಾವುದು ಕಾರ್ಯಗತವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಅಂತರ್‍ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳೇ ನಿಮ್ಮ ಬಜೆಟ್ ಬಂದಾಯ್ತು, ನೀವು ವಿಫಲವಾಗಿಯಾಯ್ತು. ನೀವು ಕ್ಷಮಾಪಣೆ ಕೇಳುವುದು ಬೇಡ. ನಿಮಗೆ ಹೆಣ್ಣು ಮಕ್ಕಳ ಬಗ್ಗೆ ಗೌರವವಿಲ್ಲ ಎಂಬುದಕ್ಕೆ ನಿಮ್ಮ ಬಜೆಟ್ ಸಾಕ್ಷಿ. ಬಿಜೆಪಿ ಸರಕಾರ ಈಗಾಗಲೇ 3 ಬಜೆಟ್ ಮಂಡಿಸಿದ್ದು, ಈ ಬಜೆಟ್ ಚುನಾವಣೆ ಬಜೆಟ್ ಆಗಿದೆ. ಈ ಬಿಜೆಪಿ ಸರಕಾರ ಮಹಿಳಾ ವಿರೋಧಿ ಸರಕಾರ. ಮಹಿಳೆಯರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದರು.

ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಹೊಸ ಹೆಜ್ಜೆ ಇಟ್ಟಿದ್ದು, ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಅವರು ದೇಶದಲ್ಲೇ ದೊಡ್ಡ ಪರಿವರ್ತನಾ ಹೆಜ್ಜೆ ಇಟ್ಟಿದ್ದಾರೆ. ಅವರ ತಂದೆ ರಾಜೀವ್ ಗಾಂಧಿ ಅವರು ಮಹಿಳೆಯರಿಗೆ ಮೀಸಲಾತಿಯಂತಹ ಕ್ರಾಂತಿಕಾರಿ ಬದಲಾವಣೆಗೆ ಪ್ರಯತ್ನ ಮಾಡಿದ್ದರು. ನಾವು ನಮ್ಮ ಪ್ರಣಾಳಿಕೆಯಲ್ಲಿ ಶೇ.33 ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಹೇಳಿದ್ದು, ರಾಜ್ಯಸಭೆಯಲ್ಲಿ ಪಾಸ್ ಆಗಿ ಲೋಕಸಭೆಯಲ್ಲಿ ಬಿಜೆಪಿ ಇನ್ನು ಕಾರ್ಯರೂಪಕ್ಕೆ ತಂದಿಲ್ಲ ಎಂದು ಶಿವಕುಮಾರ್ ಟೀಕಿಸಿದರು.

ಮಹಿಳೆಯರಿಗೆ ಪುರುಷರಿಗೆ ಸಮಾನವಾಗಿ ಅವಕಾಶ ನೀಡಬೇಕು ಎಂದು ಧ್ವನಿ ಎತ್ತಿರುವ ಈ ಸಂದರ್ಭದಲ್ಲಿ ಪಕ್ಷ ಹಾಗೂ ರಾಜ್ಯದ ಪರವಾಗಿ ಪ್ರಿಯಾಂಕಾ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂದು ನಮ್ಮ ಪಕ್ಷದ ವತಿಯಿಂದ ಪಕ್ಷದ ಕಾರ್ಯಕರ್ತರಲ್ಲದವರಿಗೆ ಒಂದು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ 3 ನಿಮಿಷ ವಿಡಿಯೋ ಹಾಕಿ, ಮಹಿಳೆ ಯಾವ ರೀತಿ ಹೋರಾಟ ಮಾಡಬಲ್ಲಳು ಎಂಬ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದು ಮುಕ್ತ ಸ್ಪರ್ಧೆಯಾಗಿದ್ದು, ನಾನು ಕೂಡ ಈ ವಿಚಾರವಾಗಿ ವಿಡಿಯೋ ಮಾಡಿಸಿ, ಬೇರೆಯವರು ಮಾಡುವಂತೆ ಮನವಿ ಮಾಡುತ್ತೇನೆ. ಅತ್ಯುತ್ತಮ ವಿಡಿಯೋಗಳಿಗೆ ಬಹುಮಾನ ಘೋಷಣೆ ಬಗ್ಗೆಯೂ ಚಿಂತನೆ ನಡೆಸುತ್ತೇನೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ನಮಗೆ ಒಂದು ಅವಕಾಶ ಮಾಡಿಕೊಡಿ ಎಂದು ರಾಜ್ಯದ ಎಲ್ಲ ತಾಯಂದಿರು, ಸೋದರಿಯರಿಗೆ ಮನವಿ ಮಾಡುತ್ತೇನೆ. ನಿಮ್ಮ ವಿಚಾರಗಳನ್ನು ನಮಗೆ ಕೊಡಿ, ನಾವು ಅವುಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಜನರ ಮುಂದೆ ಹೋಗಲು ಇಚ್ಛಿಸುತ್ತೇವೆ. ನಾವು "ನಾ ನಾಯಕಿ" ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಆದಷ್ಟು ಬೇಗ ನಾವು ಈ ಕಾರ್ಯಕ್ರಮ ಉದ್ಘಾಟನೆ ಮಾಡುತ್ತೇವೆ. ಸದಸ್ಯತ್ವ ಅಭಿಯಾನದ ನಂತರ ನಾವು ಇದನ್ನು ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಪಂಚ ರಾಜ್ಯಗಳ ಚುನಾವಣೆ ಮುಕ್ತಾಯವಾಗಿ, ಎಕ್ಸಿಟ್ ಪೋಲ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾವು ಚುನಾವಣೋತ್ತರ ಸಮೀಕ್ಷೆಗಿಂತ ವಾಸ್ತವದ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದೇವೆ. ಉತ್ತರ ಪ್ರದೇಶ ಹೊರತಾಗಿ ಗೋವಾ, ಪಂಜಾಬ್, ಉತ್ತರಾಖಂಡದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ನಮ್ಮದೇ ಸರಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ. ದೇಶದ ಜನ ಬದಲಾವಣೆ ಬಯಸಿದ್ದು, ಬಿಜೆಪಿ ಹೊರತಾದ ಪಕ್ಷ ಅಧಿಕಾರಕ್ಕೆ ತರಲು ನಿರ್ಧರಿಸಿ, ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದರು.

ಹೈಕಮಾಂಡ್ ನಿಮಗೆ ಗೋವಾಗೆ ತೆರಳಲು ಸೂಚನೆ ನೀಡಿದೆಯೇ ಎಂಬ ಪ್ರಶ್ನೆಗೆ, ‘ಹೌದು, ಚುನಾವಣೆ ಪ್ರಚಾರದ ವೇಳೆ ನಾನು ಕೂಡ ಅಲ್ಲಿಗೆ ತೆರಳಿ ಪ್ರಚಾರ ಮಾಡಿದ್ದೆ. ರಾಜ್ಯದಿಂದ ನಮ್ಮ ತಂಡ ಕಳೆದ ಒಂದು ತಿಂಗಳಿಂದ ಅಲ್ಲಿ ಶ್ರಮಿಸುತ್ತಿದೆ. ಅಲ್ಲಿ ನಾವೆಲ್ಲರೂ ಸಾಕಷ್ಟು ಪರಿಶ್ರಮ ಹಾಕಿದ್ದೇವೆ. ಅಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ. ಕಾರ್ಯಕರ್ತನಾಗಿ ಅಲ್ಲಿ ಶ್ರಮಿಸಲು, ಅಲ್ಲಿನ ನಮ್ಮ ಸಹೊದ್ಯೋಗಿಗಳಿಗೆ ಬೆಂಬಲವಾಗಿ ನಿಲ್ಲಲು ನಾನು ಗೋವಾಗೆ ತೆರಳುತ್ತಿದ್ದೇನೆ. ಗೋವಾದಲ್ಲಿ ನನ್ನ ನೇತೃತ್ವದಲ್ಲಿ ಅಲ್ಲ, ಗೋವಾ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News